masthmagaa.com:
ನೆನ್ನೆ ತಾನೆ ಕೆಲವು ಪದಗಳನ್ನ ಅಸಂಸದೀಯ ಇವುಗಳನ್ನ ಕಲಾಪದ ಸಮಯದಲ್ಲಿ ಬಳಸೋ ಹಾಗಿಲ್ಲ ಅಂತ ರಾಜ್ಯಸಭಾ ಕಚೇರಿ ನಿರ್ಬಂಧ ಹೇರಿತ್ತು. ಇದಕ್ಕೆ ಪ್ರತಿಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ವು. ಇದ್ರ ಬೆನ್ನಲ್ಲೇ ಸಂಸತ್ ಭವನದ ಆವರಣದಲ್ಲಿ ಇನ್ಮುಂದೆ ಮುಷ್ಕರ, ಧರಣಿ, ಸತ್ಯಾಗ್ರಹ, ಪ್ರದರ್ಶನ ಅಥವಾ ಧಾರ್ಮಿಕ ಸಭೆ ಸಮಾರಂಭ ನಡೆಸುವಂತಿಲ್ಲ ಅಂತ ರಾಜ್ಯಸಭಾ ಸೆಕ್ರಟರಿಯೇಟ್ ಹೊಸ ಆದೇಶ ಹೊರಡಿಸಿದೆ. ಜುಲೈ 18 ರಿಂದ ಆರಂಭವಾಗಲಿರುವ ಸಂಸತ್ತಿನ ಮುಂಗಾರು ಅಧಿವೇಶನದ ಹಿನ್ನೆಲೆಯಲ್ಲಿ ರಾಜ್ಯಸಭಾ ಸೆಕ್ರಟರಿ ಜೆನರಲ್ ಪಿ.ಸಿ ಮೋದಿ ಈ ಆದೇಶ ಹೊರಡಿಸಿದ್ದು, ಸದಸ್ಯರ ಬೆಂಬಲ ಕೋರಿದ್ದಾರೆ. ಪ್ರತಿಪಕ್ಷಗಳು ಇದಕ್ಕೆ ಸಾಕಷ್ಟು ವಿರೋಧ ವ್ಯಕ್ತಪಡಿಸಿವೆ. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮತ್ತು ರಾಜ್ಯಸಭಾ ಮುಖ್ಯ ವಿಪ್ ಜೈರಾಂ ರಮೇಶ್ ತಮ್ಮ ಟ್ವಿಟರ್ನಲ್ಲಿ ಈ ಆದೇಶದ ಪ್ರತಿಯನ್ನ ಹಂಚಿಕೊಂಡಿದ್ದು, ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ವಿಶ್ವಗುರುವಿನ ಹೊಸ ಆದೇಶ, ಇಲ್ಲಿ ಪ್ರತಿಭಟನೆ ಮಾಡೋದು ನಿಷಿದ್ಧವಿದೆ ಅಂತ ವ್ಯಂಗ್ಯವಾಡಿದ್ದಾರೆ. ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮಾವುತ್ರಾ ಟ್ವೀಟ್ ಮಾಡಿ, ಇಷ್ಟೆಲ್ಲಾ ಮಾಡೋ ಬದ್ಲು ಯಾಕೆ ಸುಮ್ನೆ ಸಂಸತ್ ಆವರಣದಲ್ಲಿರೋ ಗಾಂಧಿ ಪ್ರತಿಮೆ ಕಿತ್ತಾಕಿ, ಆರ್ಟಿಕಲ್ 19ನ ಅಳಿಸಿ ಹಾಕ್ಬಾರ್ದು ಅಂತ ಕಿಡಿಕಾರಿದ್ದಾರೆ. ಮತ್ತೊಂದ್ ಟ್ವೀಟ್ ಮಾಡಿ, ಇದ್ರಲ್ಲಿ ಧಾರ್ಮಿಕ ಕಾರ್ಯಕ್ರಮ ಮಾಡ್ಬಾರ್ದು ಅಂತ ಇದೆ, ಆದ್ರೆ ನಾಲ್ಕು ದಿನದ ಹಿಂದೆಯಷ್ಟೇ ಮಾನ್ಯ ವಾರಣಾಸಿ ಸಂಸದರು ಹೊಸ ಸಂಸತ್ ಭವನದ ಮೇಲೆ ಪೂಜೆ ಮಾಡಿದ್ರಲ್ಲ ಅಂತ ಪ್ರಧಾನಿ ಮೋದಿ ವಿರುದ್ಧ ಪರೋಕ್ಷವಾಗಿ ಹರಿಹಾಯ್ದಿದ್ದಾರೆ. ಇನ್ನು ನಂತ್ರ ಇದಕ್ಕೆ ಸ್ಪಷ್ಟೀಕರಣ ನೀಡಿದ ಲೋಕಸಭೆ ಸೆಕ್ರಟರಿಯೇಟ್, ಇದು ಹೊಸ ಆರ್ಡರ್ ಅಲ್ಲ, ಪ್ರತಿ ಅಧಿವೇಶನಕ್ಕೂ ಮುಂಚೆ ನಾವು ಈ ರೀತಿ ಗೈಡ್ಲೈನ್ಸ್ ಹೊರಡಿಸ್ತೀವಿ ಅಂತ ಸಮರ್ಥಿಸಿಕೊಂಡಿದೆ.
-masthmagaa.com
Contact Us for Advertisement