masthmagaa.com:
ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆ ಯಾವ ಎಲೆಕ್ಷನ್ಗೂ ಕಮ್ಮಿಇಲ್ಲದ ರೀತಿಯಲ್ಲಿ ದಿನದಿಂದ ದಿನಕ್ಕೆ ರಂಗೇರ್ತಾನೆ ಇದೆ. ಈ ಬಾರಿ ಗಾಂಧಿ ಕುಟುಂಬದಿಂದ ಯಾರೂ ಎಲೆಕ್ಷನ್ಗೆ ನಿಂತುಕೊಳ್ಳೋದಿಲ್ಲ ಅಂತ ಹೇಳ್ತಿದ್ದಂತೆ ಕಾಂಗ್ರೆಸ್ನ ಹಿರಿಯ ನಾಯಕರು ತಮ್ಮ ಉಮೇದಿಗೆ ಸಿದ್ದವಾಗಿದ್ದಾರೆ. ಶಶಿ ತರೂರ್, ಪವನ್ ಬನ್ಸಾಲ್ ಬಳಿಕ ದಿಗ್ವಿಜಯ ಸಿಂಗ್ ಕೂಡ ನಾಮಿನೇಷನ್ ಲೆಟರ್ ಪಡೆದಿದ್ದಾರೆ. ನಾಳೆ ಅಧಿಕೃತವಾಗಿ ನಾಮಪತ್ರ ಸಲ್ಲಿಸಲಿದ್ದಾರೆ ಅಂತ ಮೂಲಗಳು ತಿಳಿಸಿವೆ. ಇನ್ನು ಈ ಚುನಾವಣೆಗೆ ಈಗ ಹೊಸ ಕಳೆ ಬಂದಿರೋದು, ಇದು ಮತ್ತಷ್ಟು ಇಂಟರಸ್ಟಿಂಗ್ ಆಗಿರೋದು ಕಾಂಗ್ರೆಸ್ ಸಂಸದರೊಬ್ಬರ ಟ್ವೀಟ್ನಿಂದ. ಅಬ್ದುಲ್ ಖಾಲೀಕ್ ಅನ್ನೋ ಕಾಂಗ್ರೆಸ್ ಸಂಸದ ಈ ಚುನಾವಣೆ ಕಣಕ್ಕೆ ಪ್ರಿಯಾಂಕ ಗಾಂಧಿ ವಾದ್ರಾರನ್ನ ಎಳೆದುಕೊಂಡು ಬಂದಿದ್ದಾರೆ. ರಾಹುಲ್ ಗಾಂಧಿ ಈ ಚುನಾವಣೆಗೆ ನಿರಾಕರಿಸಿರೋದ್ರಿಂದ ಪ್ರಿಯಾಂಕ ಗಾಂಧಿ ಅವರನ್ನ ನಾನು ಉತ್ತಮ ಅಭ್ಯರ್ಥಿ ಅಂತ ಅನ್ಕೋತಿನಿ. ಪ್ರಿಯಾಂಕ ಗಾಂಧಿ, ʻವಾದ್ರಾʼ ಕುಟುಂಬದ ಸೊಸೆ ಆಗಿರೋದ್ರಿಂದ ಅವರು ಭಾರತೀಯ ಸಂಪ್ರದಾಯದ ಪ್ರಕಾರ ಗಾಂಧಿ ಕುಟುಂಬಕ್ಕೆ ಸೇರಲ್ಲ. ಮಹಿಳೆ ಮದುವೆ ನಂತ್ರ ಬೇರೆ ಕುಟುಂಬದ ಭಾಗ ಆಗ್ತಾರೆ. ಇವತ್ತು ಪ್ರಿಯಾಂಕ ಗಾಂಧಿ, ವಾದ್ರಾ ಕುಟುಂಬದ ಸೊಸೆಯೇ ಹೊರತು ಗಾಂಧಿ ಕುಟುಂಬದ ಭಾಗವಲ್ಲ ಅಂತ ಹೇಳಿದ್ದಾರೆ. ಈ ಮೂಲಕ ಗಾಂಧಿ ಕುಟುಂಬವೇ ನಮಗೆ ಅಧ್ಯಕ್ಷರಾಗಬೇಕು ಅಂತ ಆಸೆ ಇಟ್ಟುಕೊಂಡಿರೋ ಕೆಲ ಕಾಂಗ್ರೆಸ್ ನಾಯಕರಿಗೆ ಹೊಸ ಆಸೆ ಚಿಗುರಿಸಿದಂತಾಗಿದೆ. ಇನ್ನು ಈ ಬೆಳವಣಿಗೆ ನಡುವೆಯೇ ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಚುನಾವಣೆಗೆ ಸ್ಪರ್ಧಿಸಲ್ಲ ಅಂತ ಹೇಳಿದ್ದಾರೆ. ತಮ್ಮ ರಾಜ್ಯದಲ್ಲಿ ಉಂಟಾಗಿರುವ ರಾಜಕೀಯ ಬಿಕ್ಕಟ್ಟಿನ ನೈತಿಕ ಹೊಣೆ ಹೊತ್ತು ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಅಂತ ಗೆಹ್ಲೋಟ್ ಘೋಷಿಸಿದ್ದಾರೆ. ಜೊತೆಗೆ, ಆ ಘಟನೆ ಬಗ್ಗೆ ಸೋನಿಯಾ ಅವರ ಹತ್ರ ಕ್ಷಮೆ ಕೇಳಿದ್ದೀನಿ. ಸಿಎಂ ಆಗಿ ಉಳಿಯುವ ಕುರಿತು ಪಕ್ಷದ ಮುಖ್ಯಸ್ಥೆ ಸೋನಿಯಾ ಗಾಂಧಿ ನಿರ್ಧಾರ ಕೈಗೊಳ್ಳುತ್ತಾರೆ ಅಂತ ಹೇಳಿದ್ದಾರೆ. ಈ ನಡುವೆ ಸಮಾಜವಾದಿ ಪಾರ್ಟಿಯ ಅಧ್ಯಕ್ಷರಾಗಿ ಮೂರನೇ ಬಾರಿಗೂ ಅಖಿಲೇಶ್ ಯಾದವ್ ಆಯ್ಕೆಯಾಗಿದ್ದಾರೆ.
-masthmagaa.com
Contact Us for Advertisement