masthmagaa.com:
ಪ್ರೀತಿಸಿ ಓಡಿ ಹೋದ ಕಾರಣಕ್ಕೆ ಯುವತಿ ಮನೆಯವ್ರು ಯುವಕನ ತಾಯಿಯನ್ನ ಬೆತ್ತಲೆಗೊಳಿಸಿ ಥಳಿಸಿದ ಅಮಾನವೀಯ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಅಲ್ಲಿನ ವಂಟಮೂರಿ ಅನ್ನೋ ಗ್ರಾಮದಲ್ಲಿ ದುಂಡಪ್ಪ ಮತ್ತು ಪ್ರಿಯಾಂಕ ಅನ್ನೋ ಪ್ರೇಮಿಗಳಿದ್ದು, ಪ್ರಿಯಾಂಕಗೆ ಬೇರೆಯವರ ಜೊತೆ ಮದುವೆ ನಿಶ್ಚಯವಾಗಿತ್ತು. ಯುವತಿಗೆ ಈ ವಿಚಾರ ತಿಳಿಯುತ್ತಿದ್ದಂತೆ ನಿನ್ನೆ ಮಧ್ಯರಾತ್ರಿ ತನ್ನ ಪ್ರಿಯಕರನ ಜೊತೆಗೆ ಊರು ಬಿಟ್ಟು ಹೋಗಿದ್ರು. ಇದರಿಂದ ಆಕ್ರೋಶಗೊಂಡ ಯುವತಿಯ ಕುಟುಂಬಸ್ಥರು ಯುವಕನ ಮನೆಗೆ ನುಗ್ಗಿ ಮಲಗಿದ್ದ ಯುವಕನ ತಾಯಿಯನ್ನು ಹೊರಗೆಳೆದು ಮಹಿಳೆ ಮೇಲೆ ಹಲ್ಲೆ ನಡೆಸಿ ಬೆತ್ತಲೆಗೊಳಿಸಿ ಮೆರವಣಿಗೆ ನಡೆಸಿದ್ದಾರೆ. ಅಲ್ಲದೇ ಮನೆಯ ಹೆಂಚುಗಳನ್ನ ಕಿತ್ತುಹಾಕಿದ್ದಾರೆ ಅನ್ನೋ ಆರೋಪ ಕೇಳಿಬಂದಿದೆ. ಈಗಾಗಲೇ ಘಟನೆಗೆ ಸಂಬಂಧಿಸಿದಂತೆ ಸ್ಥಳೀಯ ಪೊಲೀಸರು FIR ದಾಖಲಿಸಿದ್ದು, ಏಳು ಮಂದಿ ಆರೋಪಿಗಳನ್ನ ಬಂಧಿಸಿದ್ದಾರೆ. ತಲೆಮರೆಸಿಕೊಂಡಿರುವ ಆರೋಪಿಗಳಿಗಾಗಿ ತೀವ್ರ ಶೋಧ ಕಾರ್ಯ ನಡೆಸಿದ್ದಾರೆ. ಇತ್ತ ಸಂತ್ರಸ್ತರ ಕುಟುಂಬಕ್ಕೆ ಸೂಕ್ತ ಪೊಲೀಸ್ ಭದ್ರತೆ ಒದಗಿಸಲಾಗಿದೆ. ಯುವಕನ ತಾಯಿ ಚಿಕಿತ್ಸೆ ಪಡಿತೀರೋ ಆಸ್ಪತ್ರೆಗೆ ಭೇಟಿ ನೀಡಿದ ರಾಜ್ಯ ಗೃಹ ಸಚಿವ ಜಿ.ಪರಮೇಶ್ವರ್, ಇದೊಂದು ಅಗೌರವದ ಕೃತ್ಯ, ಅಕ್ಷಮ್ಯ ಅಪರಾಧವಾಗಿದೆ, ತಪ್ಪಿತಸ್ಥರು ಯಾರೇ ಆಗಿದ್ರು, ಮುಲಾಜಿಲ್ಲದೇ ಕ್ರಮ ಕೈಗೊಳ್ಳಲಾಗುತ್ತದೆ ಅಂತ ಹೇಳಿದ್ದಾರೆ. ಈ ಬಗ್ಗೆ ತೀವ್ರ ನಿಗಾವಹಿಸುವಂತೆ ಜಿಲ್ಲಾ ಪೊಲೀಸ್ ಅಧಿಕಾರಿಗಳಿಗೆ ನಿರ್ದೇಶಿಸಿದ್ದೇನೆ. ಯುವಕ-ಯುವತಿಯನ್ನ ಪತ್ತೆ ಹಚ್ಚಿ, ಅವರಿಗೆ ಇಲಾಖೆಯ ರಕ್ಷಣೆ ನೀಡ್ತೇವೆ ಅಂತ ಹೇಳಿದ್ದಾರೆ.
-masthmagaa.com
Contact Us for Advertisement