masthmagaa.com:

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆ ನಡೆಸಬೇಕು ಅನ್ನೋ ಕೂಗು ಆರಂಭದಿಂದಲೇ ಕೇಳಿ ಬರುತ್ತಿದೆ. ಮತ್ತೊಂದುಕಡೆ ಮುಂಬೈ ಪೊಲೀಸರು ಸರಿಯಾಗಿ ತನಿಖೆ ನಡೆಸುತ್ತಿಲ್ಲ ಅನ್ನೋ ಆರೋಪಗಳಿವೆ. ಹೀಗಾಗಿ ಬಿಹಾರದಲ್ಲಿ ಸುಶಾಂತ್ ತಂದೆ ಕೆ.ಕೆ. ಸಿಂಗ್ ಅವರು ರಿಯಾ ಚಕ್ರಬರ್ತಿ ವಿರುದ್ಧ ದೂರು ದಾಖಲಿಸಿದ್ರು. ಕಳೆದ ನಾಲ್ಕೈದು ದಿನಗಳಿಂದ ಮುಂಬೈನಲ್ಲಿ ಬೀಡುಬಿಟ್ಟಿರುವ ಬಿಹಾರ ಪೊಲೀಸರು ಸುಶಾಂತ್ ಅವರ ಬ್ಯಾಂಕ್ ಖಾತೆ ಸೇರಿದಂತೆ ಹಲವು ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ.

ಇದರ ನಡುವೆ ಪ್ರಧಾನಿ ನರೇಂದ್ರ ಮೋದಿಗೆ ಮನವಿ ಮಾಡಿರುವ ಸುಶಾಂತ್‌ ಸಿಂಗ್‌ ರಜಪೂತ್  ಸಹೋದರಿ ಶ್ವೇತಾ ಸಿಂಗ್‌ ಕೀರ್ತಿ, ‘ನಾನು ಸುಶಾಂತ್ ಅವರ‌ ಸಹೋದರಿ. ಈ ಪ್ರಕರಣದ ಬಗ್ಗೆ ನೀವು ತುರ್ತಾಗಿ ಗಮನ ಹರಿಸಬೇಕು ಎಂದು ಬೇಡಿಕೊಳ್ಳುತ್ತೇನೆ. ಭಾರತದ ನ್ಯಾಯಾಂಗ ವ್ಯವಸ್ಥೆ ಮೇಲೆ ನನಗೆ ನಂಬಿಕೆ ಇದೆ’ ಅಂತ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

ಸುಶಾಂತ್ ಸಹೋದರಿ ಪೋಸ್ಟ್​ನಲ್ಲಿ ಏನಿದೆ..?

‘ಡಿಯರ್‌ ಸರ್‌, ನೀವು ಸತ್ಯದ ಪರವಾಗಿ ನಿಲ್ಲುತ್ತೀರಿ ಎಂಬ ನಂಬಿಕೆ ನನಗಿದೆ. ನಾವು ತುಂಬಾ ಸರಳ ಕುಟುಂಬದವರು. ನನ್ನ ಸಹೋದರ ಬಾಲಿವುಡ್‌ಗೆ ಬಂದಾಗ ಅವನಿಗೆ ಯಾವುದೇ ಗಾಡ್‌ಫಾದರ್‌ ಇರಲಿಲ್ಲ. ಈಗಲೂ ಇಲ್ಲ. ನೀವು ಕೂಡಲೇ ಈ ಪ್ರಕರಣದ ಬಗ್ಗೆ ಗಮನ ಹರಿಸಿ ಸರಿಯಾದ ರೀತಿಯಲ್ಲಿ ತನಿಖೆ ಆಗುವಂತೆ ಮತ್ತು ಯಾವುದೇ ಸಾಕ್ಷ್ಯ ನಾಶ ಆಗಲು ಅವಕಾಶ ಕೊಡಬಾರದು ಅಂತ ಮನವಿ ಮಾಡುತ್ತೇನೆ. ಸತ್ಯಕ್ಕೆ ಜಯವಾಗಲಿ.’

ಇನ್ನು ಪ್ರಕರಣ ಸಂಬಂಧ ಮಾತನಾಡಿರೋ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ, ‘ಮುಂಬೈ ಪೊಲೀಸರು ಅಸಮರ್ಥರಲ್ಲ. ಯಾರದ್ದಾದ್ರೂ ಬಳಿ ಸಾಕ್ಷ್ಯಗಳಿದ್ರೆ ನಮಗೆ ಕೊಡಿ. ತಪ್ಪಿತಸ್ಥರನ್ನು ವಿಚಾರಣೆಗೆ ಒಳಪಡಿಸಿ ಶಿಕ್ಷಿಸುತ್ತೇವೆ. ಆದ್ರೆ ದಯವಿಟ್ಟು ಮಹಾರಾಷ್ಟ್ರ ಮತ್ತು ಬಿಹಾರ ನಡುವೆ ಘರ್ಷಣೆ ಸೃಷ್ಟಿಸಲು ಈ ಪ್ರಕರಣವನ್ನು ಬಳಸಬೇಡಿ. ಪ್ರಕರಣದಲ್ಲಿ ರಾಜಕೀಯ ಮಾಡುವುದು ಸರಿಯಲ್ಲ’ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply