masthmagaa.com:
ಉತ್ತರಾಖಂಡ್ನ ನೂತನ ಸಿಎಂ ಆಗಿ ಬಿಜೆಪಿ ಸಂಸದ ತೀರತ್ ಸಿಂಗ್ ರಾವತ್ ಇಂದು ಸಂಜೆ 4 ಗಂಟೆಗೆ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಇವತ್ತು ನಡೆದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ನಿನ್ನೆಯಷ್ಟೇ ಸಿಎಂ ಸ್ಥಾನದಿಂದ ಕೆಳಗಿಳಿದಿದ್ದ ತ್ರಿವೇಂದ್ರ ಸಿಂಗ್ ರಾವತ್ ಅವರೇ ಇದನ್ನ ಘೋಷಿಸಿದ್ದಾರೆ. ತೀರತ್ ಸಿಂಗ್ ರಾವತ್ 2012ರಿಂದ 2017ರವರೆಗೆ ಶಾಸಕರಾಗಿದ್ದರು. 2013ರಿಂದ 2015ರವರೆಗೆ ಉತ್ತರಾಖಂಡ್ ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದರು. 2019ರಲ್ಲಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿ ಗೆದ್ದಿದ್ದರು. ಇದೀಗ ಅವರಿಗೆ ಮುಖ್ಯಮಂತ್ರಿ ಸ್ಥಾನ ಕೂಡ ಒಲಿದು ಬಂದಿದೆ.
ಅಂದ್ಹಾಗೆ ಮುಂದಿನ ವರ್ಷ ಉತ್ತರಾಖಂಡ್ ವಿಧಾನಸಭೆ ಚುನಾವಣೆ ನಡೆಯಲಿದೆ. ಇಂಥಾ ಸಂದರ್ಭದಲ್ಲಿ ತ್ರಿವೇಂದ್ರ ಸಿಂಗ್ ರಾವತ್ ನಾಯಕತ್ವದ ಬಗ್ಗೆ ಸ್ವಪಕ್ಷೀಯರಿಂದಲೇ ಅಸಮಾಧಾನ ಕೇಳಿ ಬಂದಿತ್ತು. ತ್ರೀವೇಂದ್ರ ಸಿಂಗ್ ರಾವತ್ ನೇತೃತ್ವದಲ್ಲಿ ಚುನಾವಣೆಗೆ ಹೋದ್ರೆ ಬಿಜೆಪಿಗೆ ಹಿನ್ನಡೆಯಾಗಲಿದೆ ಅನ್ನೋ ಮಾತು ಪಕ್ಷದ ಒಳಗಿಂದಾನೇ ಕೇಳಿ ಬಂದಿತ್ತು. ಹೀಗಾಗಿ ಸಿಎಂ ಸ್ಥಾನಕ್ಕೆ ಅವರು ರಾಜೀನಾಮೆ ನೀಡಿದ್ದರು. ಇದೀಗ ತೀರತ್ ಸಿಂಗ್ ರಾವತ್ ನೂತನ ಸಿಎಂ ಆಗ್ತಿದ್ದಾರೆ. ಮುಂದಿನ ವರ್ಷ ಇವರ ನೇತೃತ್ವದಲ್ಲೇ ಚುನಾವಣೆಗೆ ಹೋಗಲು ಬಿಜೆಪಿ ನಿರ್ಧರಿಸಿದೆ.
-masthmagaa.com
Contact Us for Advertisement