masthmagaa.com:
ಏಕರೂಪ ನಾಗರಿಕ ಸಂಹಿತೆ ಅಥ್ವಾ UCC ಕುರಿತು ಪ್ರಧಾನಿ ನರೇಂದ್ರ ಮೋದಿಯವ್ರು ನೀಡಿದ್ದ ಹೇಳಿಕೆ ಬೆನ್ನಲ್ಲೇ ಏಕರೂಪ ನಾಗರಿಕ ಸಂಹಿತೆಗೆ ವಿರೋಧ ಪಕ್ಷಗಳು ಆಕ್ಷೇಪ ವ್ಯಕ್ತಪಡಿಸಲು ಆರಂಭಿಸಿವೆ. UCC ಅನ್ನ ಪ್ರಶ್ನಿಸಿರೋ DMK ಮೊದಲು ಹಿಂದೂಗಳಿಗೆ ಏಕರೂಪದ ಕೋಡ್ ಅನ್ನು ಅನ್ವಯಿಸಬೇಕು ಅಂತ ಆಗ್ರಹಿಸಿದೆ. ದೇಶದ ಎಲ್ಲ ದೇವಸ್ಥಾನದಲ್ಲಿ ಪರಿಶಿಷ್ಟ ಜಾತಿ, ಪಂಗಡ ಸೇರಿದಂತೆ ಪ್ರತಿಯೊಬ್ಬರಿಗೂ ಪೂಜೆ ಸಲ್ಲಿಸಲು ಅವಕಾಶ ನೀಡಬೇಕು. ಸಂವಿಧಾನ ಪ್ರತಿಯೊಂದು ಧರ್ಮಕ್ಕೂ ರಕ್ಷಣೆ ನೀಡಿರುವುದರಿಂದ ನಮಗೆ UCC ಬೇಡ ಅಂತ ಹೇಳಿದೆ. ಇತ್ತ ಈ ಬಗ್ಗೆ ಪ್ರತಿಕ್ರಿಯೆ ನೀಡಿರೋ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ, ಕೆ.ಸಿ ವೇಣುಗೋಪಾಲ್ ಪ್ರಧಾನಿಯವ್ರು ಇತರ ಸಮಸ್ಯೆಗಳಿಂದ ಜನರ ದೃಷ್ಟಿಯನ್ನ ಬೇರೆ ಕಡೆ ಸೆಳೆಯೋಕೆ ನೋಡ್ತಿದ್ದಾರೆ ಅಂತ ವಾಗ್ದಾಳಿ ನಡೆಸಿದ್ದಾರೆ. ದೇಶದಲ್ಲಿನ ಬಡತನ, ಬೆಲೆ ಏರಿಕೆ ಮತ್ತು ನಿರುದ್ಯೋಗದ ಬಗ್ಗೆ ಅವರು ಮೊದಲು ಉತ್ತರಿಸಬೇಕು. ಮಣಿಪುರ ಸಮಸ್ಯೆ ಬಗ್ಗೆ ಒಂದು ಬಾರಿಯೂ ಮಾತನಾಡಿಲ್ಲ, ಇಡೀ ರಾಜ್ಯವೇ ಹೊತ್ತಿ ಉರಿಯುತ್ತಿದೆ. ಆದ್ರೆ ಅವರು ಈ ಎಲ್ಲಾ ಸಮಸ್ಯೆಗಳಿಂದ ಜನರನ್ನ ದಿಕ್ಕು ತಪ್ಪಿಸುತ್ತಿದ್ದಾರೆ ಅಂತ ವಾಗ್ದಾಳಿ ನಡೆಸಿದ್ದಾರೆ. ಆದ್ರೆ ಇನ್ನೊಂದ್ ಕಡೆ ನಾವು ತಾತ್ವಿಕವಾಗಿ UCCಗೆ ಸಪೋರ್ಟ್ ಮಾಡ್ತೀವಿ ಅಂತ ಆಪ್ ಪಕ್ಷ ಹೇಳಿದೆ. ಯಾಕಂದ್ರೆ ಸಂವಿಧಾನದಲ್ಲಿ ಏಕರೂಪ ನಾಗರಿಕ ಸಂಹಿತೆ ಇರ್ಬೇಕು ಅಂತ ಆರ್ಟಿಕಲ್ 44 ಹೇಳುತ್ತೆ. ಆದರೆ, ಇದನ್ನು ಎಲ್ಲರೊಂದಿಗೆ ವ್ಯಾಪಕ ಸಮಾಲೋಚನೆಯ ನಂತರ ಜಾರಿಗೊಳಿಸಬೇಕು. ಎಲ್ಲಾ ಧರ್ಮಗಳೊಂದಿಗೆ ಸೂಕ್ತ ಸಮಾಲೋಚನೆ ನಡೆಸಬೇಕು ಅಂತ ನಾವು ಭಾವಿಸುತ್ತೇವೆ. ಜೊತೆಗೆ ರಾಜಕೀಯ ಪಕ್ಷಗಳು ಮತ್ತು ಸಂಘಟನೆಗಳು ಒಮ್ಮತ ನೀಡ್ಬೇಕು ಅಂತ ಆಪ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಂದೀಪ್ ಪಾಠಕ್ ಹೇಳಿದ್ದಾರೆ.
-masthmagaa.com
Contact Us for Advertisement