masthmagaa.com:
ಉತ್ತರಾಖಂಡ್ ಸಿಎಂ ತ್ರಿವೇಂದ್ರ ಸಿಂಗ್ ರಾವತ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಡೆಹ್ರಾಡೂನ್ನಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು ರಾಜೀನಾಮೆ ಬಗ್ಗೆ ಘೋಷಣೆ ಮಾಡಿದ್ದಾರೆ. ಜೊತೆಗೆ ರಾಜ್ಯಪಾಲೆ ಬೇಬಿ ರಾಣಿ ಮೌರ್ಯ ಅವರಿಗೆ ರಾಜೀನಾಮೆ ಪತ್ರ ಕೂಡ ಸಲ್ಲಿಸಿದ್ದೇನೆ ಎಂದಿದ್ದಾರೆ. ಅಂದ್ಹಾಗೆ ನಿನ್ನೆ ದೆಹಲಿಯಲ್ಲಿ ಅಮಿತ್ ಶಾ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರನ್ನ ತ್ರಿವೇಂದ್ರ ಸಿಂಗ್ ರಾವತ್ ಭೇಟಿಯಾಗಿದ್ದರು. ರಾವತ್ ಅವರ ಕಾರ್ಯವೈಖರಿ ಬಗ್ಗೆ ಉತ್ತರಾಖಂಡ್ನ ಬಿಜೆಪಿ ಶಾಸಕರು ಮತ್ತು ಸಂಸದರು ಅಸಮಾಧಾನಗೊಂಡಿದ್ದಾರೆ. ಸಿಎಂ ಬದಲಾವಣೆ ಮಾಡಬೇಕು. ತ್ರಿವೇಂದ್ರ ಸಿಂಗ್ ರಾವತ್ ನೇತೃತ್ವದಲ್ಲಿ ಮುಂದಿನ ವರ್ಷ ಚುನಾವಣೆಗೆ ಹೋದ್ರೆ ಬಿಜೆಪಿಗೆ ಹಿನ್ನಡೆಯಾಗಲಿದೆ ಅನ್ನೋ ಮಾತು ಪಕ್ಷದ ಒಳಗೇ ಕೇಳಿ ಬಂದಿತ್ತು. ಇದರ ಬೆನ್ನಲ್ಲೇ ರಾಷ್ಟ್ರೀಯ ನಾಯಕರನ್ನ ಭೇಟಿಯಾಗಿದ್ದ ತ್ರಿವೇಂದ್ರ ಸಿಂಗ್ ರಾವತ್ ರಾಜೀನಾಮೆ ನಿರ್ಧಾರ ಕೈಗೊಂಡಿದ್ದಾರೆ. 2017ರ ವಿಧಾನಸಭೆ ಚುನಾವಣೆಯಲ್ಲಿ ಒಟ್ಟು 70 ಕ್ಷೇತ್ರಗಳಲ್ಲಿ ಬಿಜೆಪಿ 57 ಕ್ಷೇತ್ರ ಗೆದ್ದು ಸರ್ಕಾರ ರಚಿಸಿತ್ತು. ತ್ರಿವೇಂದ್ರ ಸಿಂಗ್ ರಾವತ್ ಅವರನ್ನ ಸಿಎಂ ಆಗಿ ಮಾಡಿತ್ತು. ಉತ್ತರಾಖಂಡ್ನಲ್ಲಿ ಎನ್.ಡಿ. ತಿವಾರಿ ಹೊರತುಪಡಿಸಿ ಬೇರೆ ಯಾರೂ ಕೂಡ ಸಿಎಂ ಆಗಿ ಪೂರ್ಣಾವಧಿ ಮುಗಿಸಿಲ್ಲ. ಚುನಾವಣೆಗೂ ಮುನ್ನ ಬಿಜೆಪಿ, ಕಾಂಗ್ರೆಸ್ ಎರಡೂ ಪಕ್ಷಗಳು ಕೂಡ ಸಿಎಂಗಳನ್ನ ಚೇಂಜ್ ಮಾಡಿದ್ದಾರೆ. ಆದ್ರೆ ಚುನಾವಣೆಯಲ್ಲಿ ಅದು ಹೆಲ್ಪ್ ಆಗಿಲ್ಲ ಅನ್ನೋದು ಇತಿಹಾಸ. ಹೀಗಿದ್ದರೂ ಮುಂದಿನ ವರ್ಷ ನಡೆಯಲಿರೋ ಚುನಾವಣೆ ಹಿನ್ನೆಲೆ ಸಿಎಂ ಬದಲಾಯಿಸಿದೆ ಬಿಜೆಪಿ.
ಉತ್ತರಾಖಂಡ್ ಮುಂದಿನ ಸಿಎಂ ರೇಸ್ನಲ್ಲಿ ಹಲವರ ಹೆಸರು ಕೇಳಿ ಬಂದಿದೆ. ರಾಜ್ಯ ಉನ್ನತ ಶಿಕ್ಷಣ ಸಚಿವ ಧನ್ಸಿಂಗ್ ರಾವತ್, ಪ್ರವಾಸೋದ್ಯಮ ಸಚಿವ ಸತ್ಪಾಲ್ ಮಹಾರಾಜ್, ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್, ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ಮತ್ತು ಸಂಸದ ಅಜಯ್ ಭಟ್, ಉತ್ತರಾಖಂಡ್ ಮಾಜಿ ಸಿಎಂ ಮತ್ತು ಹಾಲಿ ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ, ರಾಜ್ಯಸಭಾ ಸದಸ್ಯ ಅನಿಲ್ ಬಲುನಿ, ಆರ್ಎಸ್ಎಸ್ ರಾಜ್ಯ ಕಾರ್ಯದರ್ಶಿ ಸುರೇಶ್ ಭಟ್ ಮುಂತಾದವರು ರೇಸ್ನಲ್ಲಿದ್ದಾರೆ. ಇದರ ಜೊತೆ ಉಪ ಮುಖ್ಯಮಂತ್ರಿ ಹುದ್ದೆಯನ್ನ ಸೃಷ್ಟಿಸಲಾಗುತ್ತೆ ಅಂತಾನೂ ಹೇಳಲಾಗ್ತಿದೆ.
-masthmagaa.com
Contact Us for Advertisement