masthmagaa.com:
ಯುದ್ಧಪೀಡಿತ ಯುಕ್ರೇನ್ನಿಂದ ಅಮಾಯಕ ಜನರನ್ನ ಸುರಕ್ಷಿತವಾಗಿ ಸ್ಥಳಾಂತರ ಮಾಡುವ ಪ್ರಕ್ರಿಯೆ ಇವತ್ತು ಸ್ವಲ್ಪ ಯಶಸ್ಸು ಕಂಡಿದೆ. ಇಷ್ಟು ದಿನ ರಷ್ಯಾ ಸೇನೆ ದಾಳಿ ಮಾಡ್ತಿದೆ, ಸ್ಥಳಾಂತರದ ಮಾರ್ಗಗಳು ರಷ್ಯಾಗೆ ಹೋಗೋಥರ ಇವೆ ಅಂತ ಈ ಕಾರ್ಯಾಚರಣೆ ಸಕ್ಸಸ್ ಆಗಿರಲಿಲ್ಲ. ಆದ್ರಿವತ್ತು ರಷ್ಯಾ ತಾತ್ಕಾಲಿಕ ಕದನ ವಿರಾಮ ಘೋಷಿಸಿದ ಐದು ನಗರಗಳ ಪೈಕಿ ಸುಮಿಯಲ್ಲಿ ಸ್ಥಳಾಂತರ ಪ್ರಕ್ರಿಯೆ ಬಹುತೇಕ ಯಶಸ್ಸು ಕಂಡಿದೆ. ಸುಮಿ ನಗರದಲ್ಲಿ ಭಾರತದ ಸುಮಾರು 694 ವಿದ್ಯಾರ್ಥಿಗಳು ಸಿಲುಕಿದ್ದರು. ಅವರೆಲ್ಲರನ್ನ ಈಗ ಅಲ್ಲಿಂದ ಯುಕ್ರೇನ್ನ ಮತ್ತೊಂದು ನಗರವಾದ ಪೋಲ್ಟಾವಾಗೆ ಸ್ಥಳಾಂತರಿಸಲಾಗಿದೆ. ಭಾರತದ ರಾಯಭಾರ ಕಚೇರಿ ಮತ್ತು ರೆಡ್ ಕ್ರಾಸ್ ಸಂಸ್ಥೆಯ ಸಹಾಯದ ಮೂಲಕ ಒಟ್ಟು 12 ಬಸ್ಗಳಲ್ಲಿ ಭಾರತೀಯರನ್ನ ಶಿಫ್ಟ್ ಮಾಡಲಾಗಿದೆ. ಭಾರತೀಯರ ಜೊತೆಗೆ ಅಲ್ಲಿದ್ದ ಬಾಂಗ್ಲಾ ಮತ್ತು ನೇಪಾಳದ ನಾಗರಿಕರಿಗೂ ಸಹಾಯ ಮಾಡಲಾಗಿದೆ. ಪೊಲ್ಟಾವಾ ನಗರದಿಂದ ಟ್ರೇನ್ನಲ್ಲಿ ಇವರನ್ನ ಮತ್ತಷ್ಟು ಪಶ್ಚಿಮಕ್ಕೆ ಕರ್ಕೊಂಡ್ ಹೋಗಿ, ಅಕ್ಕಪಕ್ಕದ ದೇಶಗಳಿಂದ ಭಾರತಕ್ಕೆ ಏರ್ಲಿಫ್ಟ್ ಮಾಡಲಾಗುತ್ತೆ ಅಂತ ಕೇಂದ್ರ ಸರ್ಕಾರ ಹೇಳಿದೆ. ಜೊತೆಗೆ ಉಳಿದ ನಗರಗಳಲ್ಲೂ ತೆರೆದಿರೋ ಹ್ಯುಮನಿಟೇರಿಯನ್ ಕಾರಿಡಾರ್ ಅನ್ನ ಭಾರತೀಯರು ಯೂಸ್ ಮಾಡ್ಕೋಬೇಕು ಅಂತ ಯುಕ್ರೇನ್ನಲ್ಲಿರೋ ಭಾರತದ ರಾಯಭಾರ ಕಚೇರಿ ಸೂಚನೆ ಕೊಟ್ಟಿದೆ.
ಇನ್ನು ಕರಾವಳಿ ನಗರ ಮಾರಿಯೋಪೋಲ್ನಲ್ಲೂ ತಾತ್ಕಾಲಿಕ ಕದನ ವಿರಾಮ ಬಹುತೇಕ ಯಶಸ್ವಿಯಾಗಿದೆ. ಮಾರಿಯೋಪೋಲ್ನಿಂದ ಯುಕ್ರೇನ್ನ ಝಪೊರಿಝಿಯಾ ನಗರಕ್ಕೆ ಜನರನ್ನ ಶಿಫ್ಟ್ ಮಾಡೋ ಕೆಲಸ ಆರಂಭವಾಗಿದೆ. ಮಾರ್ಗಮಧ್ಯೆ ರಷ್ಯಾ ಶೇಲ್ ದಾಳಿ ನಡೆಸ್ತು ಅಂತ ಒಂದ್ಸಲ ಯುಕ್ರೇನ್ ಆರೋಪಿಸ್ತು. ಇದರ ಮಧ್ಯೆನೇ ಶಿಫ್ಟಿಂಗ್ ಕೆಲಸ ಮುಂದುವರಿದಿದೆ. 30 ಬಸ್, ಎಂಟು ಟ್ರಕ್ಗಳನ್ನ ಇದಕ್ಕೆ ಬಳಸಿಕೊಳ್ಳಲಾಯ್ತು. ಸದ್ಯ ಸುಮಾರು 3 ಲಕ್ಷ ಜನರಿರೋ ಮಾರಿಯೋಪೋಲ್ನಲ್ಲಿ ಕಳೆದ ಕೆಲ ದಿನಗಳಿಂದ ಕರೆಂಟ್, ನೀರು, ಆಹಾರ ಇಲ್ಲದೆ ಜನ ಕಂಗಾಲಾಗಿದ್ರು. ಒಂದು ಮಗು ಅಂತೂ ಡಿಹೈಡ್ರೇಷನ್ನಿಂದ ಪ್ರಾಣ ಕಳ್ಕೊಂಡಿತ್ತು. 2022ನೇ ಇಸವಿಯಲ್ಲಿ, ಡಿಹೈಡ್ರೇಷನ್ನಿಂದ ಸಾವಾಗುತ್ತೆ ಅಂದ್ರೆ ಪರಿಸ್ಥಿತಿ ಹೇಗಿದೆ, ರಷ್ಯಾದ ದಾಳಿ ಹೇಗಿದೆ ಅನ್ನೋದನ್ನ ಜಗತ್ತು ಅರ್ಥ ಮಾಡ್ಕೊಬೇಕು ಅಂತ ಯುಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಹೇಳಿದ್ದಾರೆ. ಮತ್ತೊಂದುಕಡೆ ಇರ್ಪಿನ್ ನಗರದಿಂದ ಕಿಯವ್ ನಗರಕ್ಕೆ ಜನರನ್ನ ಶಿಫ್ಟ್ ಮಾಡೋ ಪ್ರಕ್ರಿಯೆ ಆರಂಭವಾಗಿದೆ.
ಸುಮಿ ನಗರದಲ್ಲಿ ಸಿಲುಕಿದ್ದ ಭಾರತದ ವಿಪಿನ್ ಯಾದವ್ ಅನ್ನೋ ವಿದ್ಯಾರ್ಥಿ ನಾಲ್ಕು-ಐದು ದಿನಗಳಿಂದ ಆಹಾರ ಇಲ್ಲದೇ ಕೇವಲ ಪ್ರೋಟಿನ್ ಪೌಡರ್ ತಿಂದುಕೊಂಡು ಬದುಕಿದ್ದಾಗಿ ಹೇಳಿಕೊಂಡಿದ್ದಾನೆ. ಅಲ್ಲದೆ ನಾನು ಮತ್ತು ನನ್ನ ಫ್ರೆಂಡ್ಸ್ ನೀರು ಇಲ್ಲದಿದ್ದಾಗ ಹಿಮವನ್ನ ಕರಗಿಸಿ ಕುಡೀತಾ ಇದ್ವಿ ಅಂತ ಹೇಳಿದ್ದಾನೆ.
ಯುಕ್ರೇನ್ನ ಮೈಕೋಲೈವ್ ಬಂದರಿನಲ್ಲಿ ಸಿಲುಕಿದ್ದ 52 ಭಾರತೀಯ ನಾವಿಕರನ್ನ ಸ್ಥಳಾಂತರಿಸಲಾಗಿದೆ. ಇದಲ್ಲದೆ ಮೂವರು ಸಿರಿಯನ್ ಮತ್ತು ಇಬ್ಬರು ಲೆಬನೀಸ್ ಪ್ರಜೆಗಳನ್ನ ಕೂಡ ರಕ್ಷಿಸಿದ್ದೀವಿ ಅಂತ ಯುಕ್ರೇನ್ನಲ್ಲಿರೋ ಭಾರತದ ರಾಯಭಾರ ಕಚೇರಿ ತಿಳಿಸಿದೆ. ಮಾರ್ಗದ ನಿರ್ಬಂಧದಿಂದಾಗಿ ಉಳಿದಿರೋ 23 ನಾವಿಕರನ್ನ ಸ್ಥಳಾಂತರಿಸಲು ಸಾಧ್ಯವಾಗಲಿಲ್ಲ, ಅದಕ್ಕೆ ಪ್ರಯತ್ನ ಮುಂದುವರಿಸ್ತೀವಿ ಅಂತಾನೂ ತಿಳಿಸಿದೆ.
-masthmagaa.com
Contact Us for Advertisement