masthmagaa.com:
ಪ್ರಭಾಸ್ ಅಭಿನಯದ ಪ್ಯಾನ್ ಇಂಡಿಯಾ ಸಿನಿಮಾ “ಆದಿಪುರುಷ್”ಗೆ ಒಂದಲ್ಲಾ ಒಂದು ಕಂಟಕ ಎದುರಾಗ್ತಾ ಇದೆ. ಮೊನ್ನೆ ಅಷ್ಟೇ ರಾಮನವಮಿಯ ದಿವಸ ಹೊಸ ಪೋಸ್ಟರ್ನ್ನ ಚಿತ್ರತಂಡ ರಿಲೀಸ್ ಮಾಡಿತ್ತು. ಈ ಪೋಸ್ಟರ್ ನಲ್ಲಿ ಹಿಂದೂ ಪುರಾಣದ ಪಾತ್ರವಾದ ರಾಮನ ವೇಷಭೂಷಣ ಅನುಚಿತವಾಗಿದೆ ಎನ್ನುವ ಆರೋಪದ ಮೇಲೆ ಈಗ ಕೇಸ್ ದಾಖಲಿಸಲಾಗಿದೆ.
ಇನ್ನು ಕಳೆದ ಬಾರಿ ಟೀಸರ್ ರಿಲೀಸ್ ಆದಾಗಲೂ ಸಹ ಇದೇ ರೀತಿಯ ವಿವಾದಕ್ಕೆ ಚಿತ್ರತಂಡ ಗುರಿಯಾಗಿತ್ತು. ರಾವಣನ ಪಾತ್ರವನ್ನ ಮುಸ್ಲಿಂ ವ್ಯಕ್ತಿಯ ರೀತಿ, ಒಬ್ಬ ಭಯೋತ್ಪಾದಕನ ಹಾಗೆ ತೋರಿಸಿದ್ದಾರೆ ಅಂತ ಸಿನಿಮಾಸಕ್ತರು ಚಿತ್ರತಂಡವನ್ನ ತೀವ್ರ ತರಾಟೆಗೆ ತೆಗೆದುಕೊಂಡಿದ್ರು. ಈ ಸಿನಿಮಾ ಯಾವ್ದೇ ಕಾರಣಕ್ಕೂ ರಿಲೀಸ್ ಆಗಬಾರದು ಅಂತ ಆಕ್ರೋಶ ವ್ಯಕ್ತಪಡಿಸಿದ್ದರು. ಟೀಸರ್ಗೆ ತೀವ್ರ ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ VFXನಲ್ಲಿ ಕೆಲವು ಚೇಂಜಸ್ ಮಾಡಿ ಸಿನಿಮಾ ರಿಲೀಸ್ ಮಾಡ್ತೀವಿ ಅಂತ ನಿರ್ದೇಶಕ ಓಂ ರಾವುತ್ ಹೇಳಿದ್ರು, ಈಗ ಎರಡನೇ ಬಾರಿಯೂ ಸಹ ಅದೇ ತಪ್ಪು ಮರುಕಳಿಸಿದೆ. ಸದ್ಯಕ್ಕೆ ಜೂನ್ 6, 2023ರಂದು “ಆದಿಪುರುಷ್” ಮೂವಿಯನ್ನ ರಿಲೀಸ್ ಮಾಡೋದಾಗಿ ಚಿತ್ರತಂಡ ಹೇಳಿಕೊಂಡಿದೆ. ಆದರೆ ಮೇಲಿಂದ ಮೇಲೆ ಈ ರೀತಿಯ ಹಿಂದೂ ವಿರೋಧಿ ಆರೋಪಗಳು ಕೇಳಿಬರ್ತಿರೊದ್ರಿಂದ ಈ ಸಿನಿಮಾ ನಿಜವಾಗಲೂ ರಿಲೀಸ್ ಆಗಿ ಒಳ್ಳೆ ಪಾಸಿಟೀವ್ ರೆಸ್ಪಾನ್ಸ್ ಪಡ್ಕೊಳ್ಳತ್ತಾ ಅನ್ನೋದೆ ಅನುಮಾನ ಆಗಿದೆ.
ಇನ್ನೂ ಮೊನ್ನೆ ರಿಲೀಸ್ ಆದ ಪೋಸ್ಟರ್ನಲ್ಲಿ ಹಿಂದೂ ಪುರಾಣದ ಪಾತ್ರಗಳನ್ನ ಅನುಚಿತವಾಗಿ ತೋರಿಸಿದ್ದಾರೆ, ಇದರಿಂದ ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟಾಗಿದೆ. ಹಾಗಾಗಿ ಆದಿಪುರುಷ್ ಮೂವಿಯ ನಿರ್ಮಾಪಕ, ನಿರ್ದೇಶಕ ಓಂ ರಾವುತ್ ಮತ್ತು ಚಿತ್ರದಲ್ಲಿ ಆಕ್ಟ್ ಮಾಡಿದವರ ವಿರುದ್ಧ ಎಫ್ಐಆರ್ ಫೈಲ್ ಮಾಡಲಾಗಿದೆ. ರಾಮನವಮಿಯ ಶುಭ ಸಂದರ್ಭದಲ್ಲಿ ಚಿತ್ರತಂಡ “ಅದಿಪುರುಷ್” ಮೂವಿಯ ಈ ಪೋಸ್ಟರ್ನ್ನ ರಿಲೀಸ್ ಮಾಡಿತ್ತು. ಈ ಪೋಸ್ಟರ್ನಲ್ಲಿ ಪ್ರಭಾಸ್ ಮತ್ತು ಸನ್ನಿ ಸಿಂಗ್ ಅಂದ್ರೆ ರಾಮ ಮತ್ತು ಲಕ್ಷ್ಮಣ ಪಾತ್ರಧಾರಿಗಳು ಬಿಲ್ಲು ಮತ್ತು ಬಾಣವನ್ನು ಹಿಡಿದು ರಕ್ಷಾಕವಚ ಮತ್ತು ಧೋತಿ ಧರಿಸಿದ್ದಾರೆ. ಆದರೆ ರಾಮ ಲಕ್ಷ್ಮಣ ವನವಾಸಕ್ಕೆ ಹೋದಾಗ ರಕ್ಷಾಕವಚಗಳನ್ನ ಬಳಸಿರಲಿಲ್ಲ. ಇನ್ನೂ ಸೀತೆಯ ಪಾತ್ರದಲ್ಲಿ ಕೃತಿ ಸನೂನ್ ಸರಳವಾದ ಸೀರೆಯಲ್ಲಿ ತಲೆಯನ್ನು ಮುಚ್ಚಿಕೊಂಡಿದ್ದಾರೆ. ಆದರೆ ನಟ ದೇವದತ್ತ ಗಡ್ಡಧಾರಿಯಾಗಿ ಹನುಮಂತನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹನುಮಂತ ಯಾವತ್ತೂ ಗಡ್ಡ ಬಿಟ್ಟಿರೋದನ್ನ ನಾವು ನೋಡಿಲ್ಲ. ಸೋ ಈಗ ಈ ಪೋಸ್ಟರ್ ಮೇಲೆನೆ ಎಫ್ಐಆರ್ ಫೈಲ್ ಆಗಿದೆ.
ಇನ್ನೂ ಈ ಕೇಸನ್ನ ಹಾಕಿರೋದು ತಮ್ಮನ್ನು ತಾವು ಸನಾತನ ಧರ್ಮದ ಪ್ರಚಾರಕ ಅಂತ ಹೇಳಿಕೊಳ್ಳುವ ಸಂಜಯ್ ದಿನನಾಥ್ ತಿವಾರಿ. ಇವರು ಮುಂಬೈನ ಸಕಿನಾಕಾ ಪೊಲೀಸ್ ಠಾಣೆಯಲ್ಲಿ ಮುಂಬೈ ಹೈಕೋರ್ಟ್ ವಕೀಲರಾದ ಆಶಿಶ್ ರೈ ಮತ್ತು ಪಂಕಜ್ ಮಿಶ್ರಾ ಮೂಲಕ ದೂರು ದಾಖಲಿಸಿದ್ದಾರೆ. ಇನ್ನು ಎಫ್ಐಆರ್ನಲ್ಲಿ, ಪವಿತ್ರ ಗ್ರಂಥ ರಾಮಚರಿತಮಾನಸದ ಆಧಾರದ ಮೇಲೆ ಮರ್ಯಾದಾ ಪುರುಷೋತ್ತಮ ಶ್ರೀರಾಮನ ಜೀವನ ಚರಿತ್ರೆಯನ್ನ ಆದಿಪುರುಷ್ ಸಿನಿಮಾ ಮಾಡಲಾಗಿದೆ , ಆದರೆ ಆದಿಪುರುಷ್ನ ಹೊಸ ಪೋಸ್ಟರ್ನಲ್ಲಿ ಹಿಂದೂ ಧರ್ಮಗ್ರಂಥದಲ್ಲಿ ಉಲ್ಲೇಖಿಸಲಾದ ರಾಮಚರಿತಮಾನಸ ಗ್ರಂಥದಲ್ಲಿ ಉಲ್ಲೇಖವಾಗಿರುವ ಮನೋಭಾವ ಮತ್ತು ಸ್ವಭಾವಕ್ಕೆ ವಿರುದ್ಧವಾದ ವೇಷಭೂಷಣದಲ್ಲಿ ಭಗವಾನ್ ರಾಮನನ್ನು ತೋರಿಸಲಾಗಿದೆ ಅಂತ ಸಂಜಯ್ ಆರೋಪಿಸಿದ್ದಾರೆ. ಇನ್ನೂ ಹಿಂದೂ ಸನಾತನ ಧರ್ಮದ ರಾಮಾಯಣದಲ್ಲಿ ಎಲ್ಲಾ ಪಾತ್ರಗಳು ಅದರದ್ದೇ ಆದ ವಿಶೇಷತೆಗಳನ್ನ ಹೊಂದಿದೆ. ಆದರೆ ಈ ಸಿನಿಮಾದಲ್ಲಿ ತೋರಿಸಿದ ಪಾತ್ರಗಳಿಗೂ ರಾಮಾಯಣದಲ್ಲಿ ಬರುವ ಪಾತ್ರಗಳಿಗೂ ಅಜಗಜಾಂತರ ವ್ಯತ್ಯಾಸ ಇದೆ. ಸೋ ಹಾಗಾಗಿ ಸೆಕ್ಷನ್ 295 (ಎ), 298, 500, 34 ರ ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.
-masthmagaa.com
Contact Us for Advertisement