masthmagaa.com:
72ನೇ ಗಣರಾಜ್ಯೋತ್ಸವ ಪರೇಡ್ ಹಲವು ಮೊದಲುಗಳಿಗೆ ಸಾಕ್ಷಿಯಾಯ್ತು. ಅದೇ ರೀತಿ ಕೊರೋನಾದಿಂದಾಗಿ ಕೆಲವೊಂದು ಮಿಸ್ ಕೂಡ ಆದ್ವು. ಮೊದಲುಗಳನ್ನ ನೋಡೋದಾದ್ರೆ, 122 ಸದಸ್ಯರ ಬಾಂಗ್ಲಾದೇಶದ ಸೇನಾ ತಂಡ, ವಾಯುಪಡೆಯ ಇಬ್ಬರು ಮಹಿಳಾ ಪೈಲಟ್ಗಳು, ರಫೇಲ್ ಯುದ್ಧ ವಿಮಾನಗಳು, ಅಂಡಮಾನ್-ನಿಕೋಬಾರ್ ದ್ವೀಪದಲ್ಲಿ ನಿಯೋಜಿಸಿರುವ ಸೇನೆ, ಹೊಸದಾಗಿ ರಚನೆಯಾಗಿರುವ ಲಡಾಖ್ ಕೇಂದ್ರಾಡಳಿತ ಪ್ರದೇಶದ ಸ್ತಬ್ಧಚಿತ್ರಗಳು ಇದೇ ಮೊದಲ ಬಾರಿ ಪರೇಡ್ನಲ್ಲಿ ಕಾಣಿಸಿಕೊಂಡವು. ಇನ್ನು ಏನ್ ಇರ್ಲಿಲ್ಲ ಅಂತ ನೋಡೋದಾದ್ರೆ, 5 ದಶಕಗಳ ಬಳಿಕ ಮುಖ್ಯ ಅತಿಥಿ ಇಲ್ಲದೆ ಗಣರಾಜ್ಯೋತ್ಸವ ಪರೇಡ್ ನಡೀತು. ಸೇನಾ ಪರಿಣಿತರು ಮತ್ತು ಯೋಧರ ಬೈಕ್ ಸ್ಟಂಟ್ಗೆ ಅವಕಾಶವಿರಲಿಲ್ಲ. ಕೊರೋನಾ ಕಾರಣದಿಂದಾಗಿ ಪರೇಡ್ನ ದೂರವನ್ನ ಕಡಿತಗೊಳಿಸಲಾಗಿತ್ತು.
ರಾಜ್ಪಥ್ನಲ್ಲಿ ನಡೆದ ಪರೇಡ್ನಲ್ಲಿ ಭೂಸೇನೆ, ವಾಯುಸೇನೆ ಮತ್ತು ನೌಕಾಸೇನೆಗಳು ಶಕ್ತಿ ಪ್ರದರ್ಶನ ನಡೆಸಿದ್ವು. ಜೊತೆಗೆ ವಿವಿಧ ಸ್ತಬ್ಧಚಿತ್ರಗಳು ಪ್ರದರ್ಶನವಾದ್ವು. ಟಿ-90 ಭೀಷ್ಮಾ ಟ್ಯಾಂಕ್, ಬ್ರಹ್ಮೋಸ್ ಕ್ಷಿಪಣಿ ವ್ಯವಸ್ಥೆಯ ಸ್ವಾಯತ್ತ ಉಡಾವಣೆ, ಪಿನಾಕಾ ಮಲ್ಟಿ ಲಾಂಚರ್ ರಾಕೆಟ್ ಸಿಸ್ಟಂ, NSG, DRDO, NCCಯ ತಂಡಗಳು ಪರೇಡ್ನಲ್ಲಿ ಹೆಜ್ಜೆ ಹಾಕಿದವು. ಬಳಿಕ ಲಡಾಖ್ ಸ್ತಬ್ಧಚಿತ್ರದ ಮೂಲಕ ವಿವಿಧ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶದ ಸ್ತಬ್ಧಚಿತ್ರಗಳ ಮೆರವಣಿಗೆ ನಡೀತು. ಕರ್ನಾಟಕದಿಂದ ವಿಜಯನಗರ ವೈಭವ ಸಾರುವ ಸ್ತಬ್ಧಚಿತ್ರ ಪ್ರದರ್ಶನಗೊಂಡಿತು. ಉತ್ತರಪ್ರದೇಶದಿಂದ ರಾಮ ಮಂದಿರದ ಸ್ತಬ್ಧಚಿತ್ರ ಪ್ರದರ್ಶನವಾಯ್ತು. ವಿಶೇಷ ಅಂದ್ರೆ ಕೊರೋನಾ ಲಸಿಕೆ ಅಭಿವೃದ್ಧಿಪಡಿಸುವ ಪ್ರಕ್ರಿಯೆ ಮೇಲೆ ಬೆಳಕು ಚೆಲ್ಲುವ ‘ಆತ್ಮನಿರ್ಭರ್ ಭಾರತ್ ಅಭಿಯಾನ್’ ಸ್ತಬ್ಧಚಿತ್ರವನ್ನ ಜೈವಿಕ ತಂತ್ರಜ್ಞಾನ ಇಲಾಖೆ ಪ್ರದರ್ಶಿಸಿತು. ಇನ್ನು ಆಗಾಗ ತಮ್ಮ ಉಡುಗೆ ತೊಡುವ ಶೈಲಿಯಿಂದಲೇ ಗಮನ ಸೆಳೆಯೋ ಪ್ರಧಾನಿ ಮೋದಿ ಇವತ್ತು ವಿಶೇಷವಾದ ಪೇಟವನ್ನ ಧರಿಸಿದ್ದರು. ಗುಜರಾತ್ನ ಜಾಮ್ನಗರ್ ರಾಜ ಮನೆತನದವರು ಪ್ರಧಾನಿಗೆ ಗಿಫ್ಟ್ ಆಗಿ ಕೊಟ್ಟ ಪೇಟ ಇದಾಗಿದೆ. ರಾಜಮನೆತನದ ಹೊರಗಿನವರಿಗೆ ಪೇಟ ಕೊಟ್ಟಿರೋದು ಇದೇ ಮೊದಲು.
-masthmagaa.com
Contact Us for Advertisement