masthmagaa.com:
ಮಹಾರಾಷ್ಟ್ರದ ಅಕ್ಕಲಕೋಟ, ಜತ್ ಹಾಗೂ ಸೊಲ್ಲಾಪುರ ಕರ್ನಾಟಕಕ್ಕೆ ಸೇರಬೇಕು ಅನ್ನೊ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆಗೆ ಕರ್ನಾಟಕ-ಮಹಾರಾಷ್ಟ್ರ ಗಡಿ ಭಾಗದ ಕನ್ನಡಿಗರು ಬೆಂಬಲ ಸೂಚಿಸಿದ್ದಾರೆ. ಬೊಮ್ಮಾಯಿ ಅವ್ರಿಗೆ ಬೆಂಬಲ ತೋರಿಸಿ ಮಹಾರಾಷ್ಟ್ರದ ಜತ್ ತಾಲೂಕಿನ ಕನ್ನಡ ಹೋರಾಟಗಾರ ಮಹದೇವ ಅಂಕಲಗಿ ವಿಡಿಯೋ ಒಂದನ್ನ ಬಿಡುಗಡೆ ಮಾಡಿದ್ದಾರೆ. ಅದ್ರಲ್ಲಿ 44 ಹಳ್ಳಿಗಳ ಪರ ಮಾತಾಡಿದ್ದಕ್ಕೆ ಸಿಎಂ ಬೊಮ್ಮಾಯಿಗೆ ಅಭಿನಂದನೆ ಸಲ್ಲಿಸುತ್ತೇನೆ. ಮಹಾಜನ್ ವರದಿ ಪ್ರಕಾರ ಜತ್ ತಾಲೂಕಿನ 44 ಹಳ್ಳಿಗಳು ಕರ್ನಾಟಕಕ್ಕೆ ಸೇರಬೇಕು. ನಾವು ಮಹಾರಾಷ್ಟ್ರದಲ್ಲಿದ್ದರೂ ನಮ್ಮ ಮೇಲೆ ಪ್ರೇಮ ತೋರಿಸಿದ್ದೀರಿ. ನಮ್ಮ ಬೆಂಬಲ ನಿಮಗಿದೆ ಅಂತೇಳಿದ್ದಾರೆ. ಇನ್ನೊಂದ್ ಕಡೆ ಗಡಿ ವಿವಾದ ತಾರಕಕ್ಕೇರುತ್ತಿದ್ದಂತೆ ಮಹಾರಾಷ್ಟ್ರದಲ್ಲಿ ದುಷ್ಕರ್ಮಿಗಳು ಕರ್ನಾಟಕ ಬಸ್ಗಳಿಗೆ ಕಪ್ಪು ಮಸಿ ಬಳಿದಿದ್ದಾರೆ. ಇದರ ಹಿನ್ನಲೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಬೆಳಗಾವಿಯಲ್ಲಿ ಪೊಲೀಸರು ಬಿಗಿ ಭದ್ರತೆ ಒದಗಿಸಿದ್ದಾರೆ. ಅಲ್ದೇ ಮಹಾರಾಷ್ಟ್ರದಿಂದ ಬೆಳಗಾವಿಗೆ ಬರುವ ಬಸ್ಗಳನ್ನ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಇತ್ತ ಮಹಾರಾಷ್ಟ್ರದ ಒಂದು ಗ್ರಾಮವನ್ನೂ ಕರ್ನಾಟಕಕ್ಕೆ ಬಿಟ್ಟುಕೊಡಲ್ಲ. ಎಲ್ಲವನ್ನೂ ಪಡೆದೇ ತೀರ್ತೀವಿ ಅಂತ ಮಹಾರಾಷ್ಟ್ರ ಡಿಸಿಎಂ ಫಡ್ನವೀಸ್ ಹೇಳಿದ್ದರು. ಇದಕ್ಕೆ ಉತ್ತರವಾಗಿ, ಫಡ್ನವೀಸ್ ಗಡಿ ವಿಚಾರದಲ್ಲಿ ಪ್ರಚೋದನಕಾರಿ ಹೇಳಿಕೆ ನೀಡಿದ್ದು, ಅವರ ಕನಸು ಎಂದಿಗೂ ನನಸಾಗಲ್ಲ ಅಂತ ಬೊಮ್ಮಾಯಿ ತಿರುಗೇಟು ನೀಡಿದ್ರು. ಬೊಮ್ಮಾಯಿ ಅವರ ಈ ಹೇಳಿಕೆಯನ್ನ ಮಹಾರಾಷ್ಟ್ರದ ಮಾಜಿ ಸಿಎಂ ಉದ್ಧವ್ ಠಾಕ್ರೆ ಖಂಡಿಸಿದ್ದಾರೆ. ಎಲ್ಲ ಪ್ರದೇಶಗಳು ನಮ್ಮ ಹಿಡಿತದಲ್ಲಿವೆ ಅಂತ ಠಾಕ್ರೆ ಹೇಳಿದ್ದಾರೆ. ಅಂದ್ಹಾಗೆ ಈ ಬೆಳಗಾವಿ ಗಡಿ ವಿವಾದ ಶುರುವಾಗಿದ್ದು ಹೇಗೆ? ಮಹಾರಾಷ್ಟ್ರದ ವಾದ ಏನು? ಕರ್ನಾಟಕದ ವಾದ ಏನು? ಎಲ್ಲವನ್ನೂ ಒಳಗೊಂಡ ಒಂದು ಸಂಪೂರ್ಣ ವರದಿಯನ್ನ ನಾವು ಇವತ್ತೇ ನಿಮ್ಮ ಮಸ್ತ್ ಮಗಾ ಚಾನೆಲ್ನಲ್ಲಿ ಪಬ್ಲಿಷ್ ಮಾಡಿದ್ದೀವಿ. ಅದನ್ನೂ ನೀವು ಚೆಕ್ ಮಾಡ್ಬೋದು.
-masthmagaa.com
Contact Us for Advertisement