masthmagaa.com:
ಕಾಂಗ್ರೆಸ್ ಸರ್ಕಾರದ ಗ್ಯಾರೆಂಟಿಗಳ ಜಾರಿಗೆ ಕುರಿತಂತೆ ರಾಜ್ಯಾದ್ಯಾಂತ ಗಲಾಟೆಗಳು, ಗೊಂದಲಗಳು ಮುಂದುವರೆದಿರುವ ನಡುವೆಯೇ, ಸರ್ಕಾರಿ ಬಸ್ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ ಬಗ್ಗೆ ಅಧಿಕೃತ ಘೋಷಣೆಯಾಗಿದೆ. ಕಾಂಗ್ರೆಸ್ ಗ್ಯಾರಂಟಿ ಬಗ್ಗೆ 4 ನಿಗಮಗಳ ವ್ಯವಸ್ಥಾಪಕ ಅಧಿಕಾರಿಗಳ ಜೊತೆ ಸಭೆ ನಡೆಸಿ ಮಾತಾಡಿರೋ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ನಮ್ಮ ಪ್ರಣಾಳಿಕೆಯಲ್ಲಿ APL, BPL ಕಾರ್ಡ್ದಾರರು ಅಂತ ಹೇಳಿಲ್ಲ. ಹಾಗಾಗಿ ರಾಜ್ಯಾದ್ಯಂತ ಎಲ್ಲಾ ಮಹಿಳೆಯರು ಉಚಿತವಾಗಿ ಪ್ರಯಾಣಿಸಬಹುದು ಅಂತ ಘೋಷಣೆ ಮಾಡಿದ್ದಾರೆ. ಇನ್ನು ಉಚಿತ ಪ್ರಯಾಣದ ಅನುಕೂಲ ಹಾಗೂ ಅನನುಕೂಲ ಬಗ್ಗೆ ಅಧಿಕಾರಿಗಳು ಸಂಪೂರ್ಣ ವರದಿ ಸಿದ್ಧಪಡಿಸಿದ್ದಾರೆ. KSRTC, BMTC, ವಾಯುವ್ಯ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕ ನಿಗಮಗಳಿಂದ ಮಾಹಿತಿ ಪಡೆಯಲಾಗಿದೆ. ಎಷ್ಟು ಮಹಿಳೆಯರು ಪ್ರಯಾಣ ಮಾಡ್ತಾರೆ ಹಾಗೂ ಅದಕ್ಕೆ ತಗಲುವ ಖರ್ಚು ವೆಚ್ಚ ಎಷ್ಟು ಅನ್ನೋದ್ರ ಬಗ್ಗೆ ಸಂಪೂರ್ಣ ಮಾಹಿತಿಯ ವರದಿಯನ್ನ ಸಿದ್ಧಪಡಿಸಲಾಗಿದೆ. ಜೊತೆಗೆ ಈ ವರದಿಯನ್ನ ಸಿಎಂ ಸಿದ್ದರಾಮಯ್ಯ ಅವ್ರಿಗೆ ಸಲ್ಲಿಸಲಾಗುವುದು ಅಂತ ರಾಮಲಿಂಗಾರೆಡ್ಡಿ ಹೇಳಿದ್ದಾರೆ.
ಇನ್ನೊಂದ್ಕಡೆ ಗೃಹ ಲಕ್ಷ್ಮಿ ಯೋಜನೆ ಅಡಿಯಲ್ಲಿ 2000 ರೂಪಾಯಿ ಕೊಡೋ ಕುರಿತು ಆ ಕಡೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಒಂದು ಇಂಟ್ರಸ್ಟಿಂಗ್ ಹೇಳಿಕೆ ಕೊಟ್ಟಿದ್ದಾರೆ. 2000 ರೂಪಾಯಿ ಅತ್ತೆಗೆ ಸಿಗುತ್ತಾ ಸೊಸೆಗೆ ಸಿಗುತ್ತಾ ಅನ್ನೋ ಗೊಂದಲಕ್ಕೆ ತೆರೆ ಎಳೆದಿರೋ ಸಚಿವೆ, ಮೊದಲು ಅತ್ತೆಗೆ ಸಿಗುತ್ತೆ. ಭಾರತೀಯ ಸಂಸ್ಕೃತಿಯಲ್ಲಿ ಅತ್ತೆಯೇ ಮನೆಯ ಯಜಮಾನಿ. ಒಂದು ಪಕ್ಷ ಅತ್ತೆ ಪ್ರೀತಿಯಿಂದ ಸೊಸೆಗೆ ಹಣ ನೀಡಿ ಅಂತ ಹೇಳಿದರೆ, ಆಕೆಯಿಂದ ಸಹಿ ಪಡೆದು ಸೊಸೆಗೆ ನೀಡಲಾಗುತ್ತದೆ ಅಂತ ಸತೀಶ್ ಜಾರಕಿಹೊಳಿ ಮತ್ತು ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದಾರೆ. ಮತ್ತೊಂದ್ ಕಡೆ ಆಡಳಿತಾರೂಢ ಕಾಂಗ್ರೆಸ್ ಪಕ್ಷ ಪ್ರಣಾಳಿಕೆಯಲ್ಲಿ ಘೋಷಿಸಿರುವ ಗ್ಯಾರಂಟಿಗಳನ್ನ ಜಾರಿಗೆ ತರಲು ಕ್ರಮ ಕೈಗೊಳ್ಬೇಕು ಅಂತ ಬೆಳಗಾವಿಯಲ್ಲಿ ಹಲವೆಡೆ ಜನರು ಆಗ್ರಹಿಸಿದ್ದಾರೆ. ಜೊತೆಗೆ ಬೆಳಗಾವಿಯ ಸದಾಶಿವನಗರದ ನಿವಾಸಿಗಳು ಈ ತಿಂಗಳ ವಿದ್ಯುತ್ ಶುಲ್ಕ ಪಾವತಿ ಮಾಡದೇ ಇರಲು ನಿರ್ಧರಿಸಿದ್ದಾರೆ. ಸಾಮಾಜಿಕ ಕಾರ್ಯಕರ್ತ ಪ್ರಸಾದ್ ಚೌಗುಲೆ ಅನ್ನೋರು ಇನ್ನೂ ಒಂದು ಹೆಜ್ಜೆ ಮುಂದೆಹೋಗಿ, ಮನೆಯಲ್ಲಿನ ವಿದ್ಯುತ್ ಮೀಟರ್ಗೆ ‘ಫ್ರೀ ಕರೆಂಟ್, ನೋ ರೀಡಿಂಗ್’ ಅಂತ ಬರೆದು ಅಂಟಿಸಿದ್ದಾರೆ.
-masthmagaa.com
Contact Us for Advertisement