masthmagaa.com:ಕೊರೋನಾ ಎರಡನೇ ಅಲೆಯಿಂದಾಗಿ ಬೆಂಗಳೂರಿನಲ್ಲಿ ಲಾಕ್ ಡೌನ್ ಘೋಷಿಸಲಾಗಿದೆ. ಈ ಹಿನ್ನೆಲೆಯಲ್ಲಿ ಟೆಲಿವಿಷನ್ ಸೇರಿದಂತೆ ಎಲ್ಲಾ ಕ್ಷೇತ್ರಗಳ ಕೆಲಸಗಳು ಸ್ಥಗಿತಗೊಂಡಿವೆ. ಆದರೆ ಧಾರಾವಾಹಿಗಳಿಗೆ ಅಂಟಿಕೊಂಡಿರುವ ಜನರಿಗಾಗಿ ಸಿಹಿ ಸುದ್ದಿ ಈಗ ಹೊರಬಿದ್ದಿದೆ. ಕೆಲವು ಧಾರಾವಾಹಿಗಳ ಹೊಸ ಕಂತುಗಳು ಶೀಘ್ರದಲ್ಲೇ ಪ್ರಸಾರವಾಗಲಿವೆ ಎಂಬ ಅಧಿಕೃತ ಮಾಹಿತಿ ಇದೀಗ ಲಭ್ಯವಾಗಿದೆ. ಧಾರಾವಾಹಿಗಳ ಪ್ರದರ್ಶನವು ಮುಂದುವರಿಯಬೇಕು ಎಂಬ ಉದ್ದೇಶದೊಂದಿಗೆ, ಟೆಲಿಸಿರಿಯಲ್ ತಯಾರಕರು ಧಾರಾವಾಹಿ ಚಿತ್ರೀಕರಣಕ್ಕಾಗಿ ಹೈದರಾಬಾದಿನ ರಾಮೋಜಿ ಫಿಲ್ಮ್ಸ್ ಸಿಟಿಗೆ ತೆರಳಿದ್ದಾರೆ ಎಂದು ತಿಳಿದು ಬಂದಿದೆ.
ಕಲರ್ಸ್ ವಾಹಿನಿಯಲ್ಲಿ ಪ್ರಸಾರವಾಗುವ ಅತಿಹೆಚ್ಚು ಟಿಆರ್ಪಿ ಹೊಂದಿರುವ ಟಾಪ್ 5 ಧಾರವಾಹಿಗಳಲ್ಲಿ ಒಂದು ಎನಿಸಿಕೊಂಡಿರುವ “ಗಿಣಿರಾಮ” ಧಾರಾವಾಹಿಯ ಹೊಸ ಕಂತುಗಳು ನಾಳೆ ಇಂದ ಆರಂಭವಾಗಲಿದೆ. ಅದರ ಜೊತೆಗೆ ಕನ್ನಡತಿ, ಮಂಗಳಗೌರಿ ಮದುವೆ, ಗೀತಾ, ನಮ್ಮನೆ ಯುವರಾಣಿ, ಜೊತೆ ಜೊತೆಯಲಿ ಹಾಗೂ ಹೂಮಳೆ ಧಾರಾವಾಹಿಗಳ ಹೊಸ ಕಂತುಗಳು ಸಧ್ಯದಲ್ಲೇ ಆರಂಭವಾಗಲಿವೆ ಎಂಬ ಮಾಹಿತಿ ಲಭ್ಯವಾಗಿದೆ.
ವಾಸ್ತವವಾಗಿ, ಹೈದರಬಾದ್ ನ ರಾಮೋಜಿ ಫಿಲ್ಮ್ ಸ್ಟುಡಿಯೋ ಕನ್ನಡ ಧಾರಾವಾಹಿಗಳ ಕೇಂದ್ರವಾಗಿ ಮಾರ್ಪಟ್ಟಿದೆ. ಕನಿಷ್ಠ ಅರ್ಧ ಡಜನ್ ಕನ್ನಡ ಟೆಲಿವಿಷನ್ ಕಾರ್ಯಕ್ರಮಗಳ ಚಿತ್ರೀಕರಣವು ಪ್ರಗತಿಯಲ್ಲಿದೆ. ಆ ಮೊದಲ ಹೆಜ್ಜೆ ಇಟ್ಟಿರುವುದು ಗಗನಾ ಎಂಟರ್ಪ್ರೈಸಸ್ನ ನಿರ್ದೇಶಕ ಮತ್ತು ನಿರ್ಮಾಪಕ ಕೆ ಎಸ್ ರಾಮ್ಜೀ. ಪ್ರಸ್ತುತ ಕಲರ್ಸ್ ಕನ್ನಡಕ್ಕಾಗಿ ಮಂಗಳ ಗೌರಿ ಮದುವೆ, ಗೀತಾ ಮತ್ತು ನಾಗಿನಿ 2 ಎಂಬ ಮೂರು ಧಾರಾವಾಹಿಗಳನ್ನು ಮುನ್ನಡೆಸುತ್ತಿದ್ದಾರೆ. ಪಾತ್ರವರ್ಗ ಮತ್ತು ಸಿಬ್ಬಂದಿ ಹೊರತುಪಡಿಸಿ ಯಾರೂ ಸುತ್ತಮುತ್ತಲ ಪ್ರದೇಶಗಳಿಗೆ ಪ್ರವೇಶಿಸದಂತೆ ನಾವು ನೋಡಿಕೊಂಡಿದ್ದೇವೆ ಎಂದು ಎಸ್ ರಾಮ್ ಜೀ ಮಾಹಿತಿ ನೀಡಿದ್ದಾರೆ. ಇಲ್ಲಿ ಪ್ರತಿ ಧಾರಾವಾಹಿಗೆ 20-25 ಸದಸ್ಯರ ಸಿಬ್ಬಂದಿ ಇದ್ದು, ನಾವೆಲ್ಲರೂ ಕೋವಿಡ್ ಪರೀಕ್ಷೆಗಳನ್ನು ಮಾಡಿಸಿಕೊಂಡು ಬಂದಿದ್ದೇವೆ. ಕೆಲವು ಕಲಾವಿದರು ಲಭ್ಯವಿಲ್ಲ, ಆದ್ದರಿಂದ ನಾವು ಅದಕ್ಕೆ ತಕ್ಕಂತೆ ಕೆಲಸ ಮಾಡಿದ್ದೇವೆ. ಏತನ್ಮಧ್ಯೆ, ಕನ್ನಡತಿ ತಯಾರಕರು ಸಹ ಸೋಮವಾರ ಹೈದರಾಬಾದ್ ಗೆ ಬಂದಿಳಿದಿದ್ದಾರೆ ಎಂದು ರಾಮ್ ಜಿ ತಿಳಿಸಿದ್ದಾರೆ.
ಗಿಣಿರಾಮ ಹೊಸ ಕಂತುಗಳು ನಾಳೆ ಇಂದ ಆರಂಭ:
ಪ್ರಸ್ತುತ ಉತ್ತರ ಕರ್ನಾಟಕ ಭಾಷೆಯೇ ಪ್ರಧಾನವಾಗಿ ಬಳಸಲಾಗುವ ಗಿಣಿರಾಮ ಧಾರಾವಾಹಿ ತಂಡ ಈಗಾಗಲೇ ಹೈದರಾಬಾದಿನಲ್ಲಿ ಚಿತ್ರೀಕರಣ ಪ್ರಾರಂಭಿಸಿದ್ದು ನಾಳೆ ಅಂದರೆ ಗುರುವಾರದಿಂದ ರಾತ್ರಿ 8:30 ಗೆ ಹೊಸ ಕಂತು ಆರಂಭವಾಗುತ್ತದೆ. ಇದಕ್ಕೆ ಇಂಬು ಕೊಡುವಂತೆ ಪ್ರೋಮೋ ಕಲರ್ಸ್ ವಾಹಿನಿಯಲ್ಲಿ ಬಿತ್ತರವಾಗುತ್ತಿದ್ದು ಗಿಣಿರಾಮ ಪ್ರೇಕ್ಷಕರು ಹರ್ಷ ಗೊಂಡಿದ್ದಾರೆ. ಅಂದಹಾಗೆ ಹೈದರಾಬಾದ್ ತೆರಳಿರುವ ಧಾರಾವಾಹಿಗಳ ತಂಡಗಳು ಮತ್ತು ಸಿಬ್ಬಂದಿ ಹದಿನೈದು ದಿನಗಳ ಕಾಲ ಅಲ್ಲಿಯೇ ಇರುತ್ತಾರೆ ಎಂಬ ಮಾಹಿತಿ ಇದೆ.
-masthmagaa.com