masthmagaa.com:
ಇರಾನ್ ಇಸ್ರೇಲ್ ನಡುವೆ ಬಿಕ್ಕಟ್ಟಿನ ಪರಿಸ್ಥಿತಿ ಉಂಟಾಗಿರೋ ಹೊತ್ತಲ್ಲೇ ಇರಾನ್ ಭಾರತಕ್ಕೆ ಆಹ್ವಾನ ಕೊಟ್ಟಿದೆ. ಭಾರತ ಮನಸ್ಸು ಮಾಡಿದ್ರೆ, ಈ ಉದ್ವಿಗ್ನತೆ ಕಡಿಮೆ ಮಾಡ್ಬೋದು ಅಂತ ಖುದ್ದು ಇರಾನ್ ಹೇಳಿದೆ. ಭಾರತದಲ್ಲಿರೋ ಇರಾನ್ನ ರಾಯಭಾರಿ ಇರಾಜ್ ಇಲಾಹಿ, ʻಇರಾನ್ ಮತ್ತು ಇಸ್ರೇಲ್ ನಡುವಿನ ಉದ್ವಿಗ್ನತೆಯನ್ನ ಭಾರತ ಸಹಾಯ ಮಾಡಿದ್ರೆ ಬಗೆಹರಿಸಲು ಸಾಧ್ಯವಿದೆ. ಇಸ್ರೇಲ್ನ ಆಕ್ರಮಣ ತಡೆಯೋಕೆ ಭಾರತ ಮುಂದಾಗ್ಬೇಕು.. ಭಾರತ ಮತ್ತು ನಮ್ಮ ನಡುವೆ ಒಳ್ಳೆ ಸಂಬಂಧವಿದೆ. ಹಾಗೇ ಭಾರತಕ್ಕೆ ಇಸ್ರೇಲ್ ಜೊತೆನೂ ಒಳ್ಳೆ ನಂಟಿದೆ. ಸೋ ನಮ್ಮಿಬ್ಬರ ನಡುವಿನ ಸಂಘರ್ಷ ತಡೆಯೋಕೆ ಭಾರತ ಮನಸ್ಸು ಮಾಡಿದ್ರೆ ಸಾಧ್ಯವಿದೆʼ ಅಂತೇಳಿದ್ದಾರೆ. ಈ ಮೂಲಕ ಯುಕ್ರೇನ್ ರಷ್ಯಾ ಯುದ್ದದ ಬಳಿಕ ಈಗ ಇಸ್ರೇಲ್ ಇರಾನ್ ಸಂಘರ್ಷಕ್ಕೂ ಮಧ್ಯಸ್ಥಿಕೆ ವಹಿಸುವಂತೆ ಭಾರತಕ್ಕೆ ಓಪನ್ ಆಫರ್ ಬಂದಿದೆ. ಸ್ನೇಹಿತ್ರೇ ಇಲ್ಲಿ ಇರಾನ್ ಎಲ್ಲರನ್ನೂ ಬಿಟ್ಟು ಭಾರತಕ್ಕೇ ಯಾಕೆ ಆಹ್ವಾನ ಕೊಟ್ಟಿದೆ ಅನ್ನೋದನ್ನೂ ಕೂಡ ನಾವು ಗಮನಿಸಬೇಕು. ಯಾಕಂದ್ರೆ ಈಗ ರಷ್ಯಾ ಇದೆ, ಚೀನಾ ಇದೆ…ಆದ್ರೆ ಭಾರತವನ್ನ ಇರಾನ್ ಯಾಕೆ ಸಹಾಯ ಕೇಳ್ತಿದೆ ಅಂದ್ರೆ ಅದಕ್ಕೆ ಕಾರಣ ಭಾರತ ನೀತಿ. ಈಗ ಇಸ್ರೇಲ್ ಇರಾನ್ ಕದನದಲ್ಲಿ ಬಹುತೇಕ ಪಾಶ್ಚಿಮಾತ್ಯ ದೇಶಗಳು ಇಸ್ರೇಲ್ ಕಡೆ ವಾಲಿವೆ. ರಷ್ಯಾ ಚೀನಾದಂತಹ ದೇಶಗಳು ಇರಾನ್ ಪರ ನಿಂತಿವೆ.
ಸೋ ಈ ಸಂಘರ್ಷವನ್ನ ಜಗತ್ತಿನ ಸೋ ಕಾಲ್ಡ್ ದೊಡಣ್ಣಗಳು ತಡೆಯೋಕೆ ಸಾಧ್ಯವಿಲ್ಲ. ಹೀಗಾಗಿ ಈ ಜಗಳವನ್ನ ತಪ್ಪಿಸೋಕೆ ಒಂದು ಪ್ರಭಾವಿ ಮತ್ತು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳೋ ದೇಶ ಅಂದ್ರೆ ಅದು ಭಾರತ ಮಾತ್ರ. ಹೀಗಾಗಿ ಭಾರತಕ್ಕೆ ಇರಾನ್ ಆಹ್ವಾನ ಕೊಟ್ಟಿದೆ. ಹಾಗ್ ನೋಡಿದ್ರೆ ಭಾರತ ಈ ಹಿಂದಿನಿಂದಲೂ ಕೂಡ ಇರಾನ್ ಜೊತೆಗೂ ಚೆನ್ನಾಗಿದೆ. ಇಸ್ರೇಲ್ ಜೊತೆಗೂ ಚೆನ್ನಾಗಿದೆ. ಮೊನ್ನೆ ಅಮೆರಿಕ ನಿರ್ಬಂಧದ ಕಾರಣದಿಂದ ಮಾತ್ರ ಇರಾನ್ನಿಂದ ಭಾರತ ತೈಲ ತರಿಸಿಕೊಳ್ಳೊದನ್ನ ಸ್ವಲ್ಪ ನಿಲ್ಲಿಸಿದ್ದನ್ನ ಬಿಟ್ರೆ ಭಾರತ ಹಾಗೂ ಇರಾನ್ ನಡುವೆ ಅಂತ ದೊಡ್ಡ ಸಮಸ್ಯೆ ಏನಿಲ್ಲ. ಇರಾನ್ ಭಾರತಕ್ಕೆ ಚಬಹಾರ್ ಬಂದರನ್ನೇ ಕೊಟ್ಟಿದ್ದಾರೆ. ಹೀಗಾಗಿ ಈ ಸಂಘರ್ಷಕ್ಕೆ ಯಾರಾದ್ರೂ ಹೆಲ್ಪ್ ಮಾಡ್ಬೋದು ಅಂದ್ರೆ ಅದು ಭಾರತ ಮಾತ್ರ, ಅವರ ಮಾತನ್ನ ಇಬ್ರೂ ಕೇಳೋಕೆ ಒಪ್ಪಿಕೊಳ್ತಾರೆ ಅಂತ ಇರಾನ್ ಹೇಳೊಕೆ ಶುರು ಮಾಡಿದೆ. ಇನ್ನು ಇರಾನ್ನ ಈ ಆಫರ್ಗೆ ಭಾರತ ಇದುವರೆಗೂ ಯಾವುದೇ ಪ್ರತಿಕ್ರಿಯೆ ಕೊಟ್ಟಿಲ್ಲ..
ಇನ್ನು ಇರಾನ್ ರಾಯಭಾರಿ ಭಾರತದ ವಿಚಾರ ಹೇಳುವಾಗ ಇನ್ನೊಂದು ಇಂಟ್ರಸ್ಟಿಂಗ್ ಹೇಳಿಕೆ ಕೊಟ್ಟಿದ್ದಾರೆ. ʻʻನಾವು ಇಸ್ರೇಲ್ ಮೇಲೆ ದಾಳಿ ಮಾಡೋಕೂ ಮುಂಚೆ ಕೆಲವೊಂದಷ್ಟು ದೇಶಗಳ ಜೊತೆಗೆ ಮಾಹಿತಿ ಹಂಚಿಕೊಂಡಿದ್ವಿ. ಮಿಸೈಲ್ಗಳು ಹಾರಬೋದು, ನಾಗರಿಕ ವಿಮಾನಗಳು ಎಚ್ಚರವಹಿಸಬೇಕು ಅಂತ ನಾವು ಕೆಲವೊಂದಷ್ಟು ದೇಶಗಳಿಗೆ ಹೇಳಿದ್ವಿ ಅಂತೇಳಿದ್ದಾರೆ. ಆದ್ರೆ ಇಲ್ಲಿ ಭಾರತಕ್ಕೆ ಹೇಳಿದ್ರಾ ಅನ್ನೋ ಬಗ್ಗೆ ಅವರು ಯಾವುದೇ ಗುಟ್ಟು ಬಿಟ್ಟುಕೊಟ್ಟಿಲ್ಲ. ಆದ್ರೆ ಈ ದಾಳಿ ನಡೆದ ಬೆನ್ನಲ್ಲೇ ಇರಾನ್ನ ವಿದೇಶಾಂಗ ಸಚಿವರು ಮತ್ತು ಭಾರತದ ವಿದೇಶಾಂಗ ಸಚಿವರು ಫೋನ್ ಮೂಲಕ ಮಾತುಕತೆ ಮಾಡಿದ್ರು. ಇರಾನ್, ಭಾರತಕ್ಕೆ ಆಪರೇಶನ್ ಕುರಿತು ಮಾಹಿತಿ ನೀಡಿತ್ತು ಅಂತೇಳಿದ್ದಾರೆ. ಇದು ಈಗ ತೀವ್ರ ಚರ್ಚೆಗೆ ಗ್ರಾಸವಾಗಿದೆ.
-masthmagaa.com
Contact Us for Advertisement