masthmagaa.com:
ರಾಜ್ಯದಲ್ಲಿ ಇಷ್ಟು ದಿನ ವ್ಯಾಪಾರದ ಸುತ್ತಾ ಸುತ್ತುತ್ತಿದ್ದ ಧರ್ಮ ದಂಗಲ್ ಈಗ ಚಂದ್ರು ಹತ್ಯೆ ಸುತ್ತ ಸುತ್ತಾಡೋಕೆ ಶುರುವಾಗಿದೆ. ನಿನ್ನೆಯಷ್ಟೇ ಚಂದ್ರು ಗೆಳೆಯ ಸೈಮನ್ ಎಂಬಾತ, ಉರ್ದು ಮಾತನಾಡಲಿಲ್ಲ ಅನ್ನೋ ಕಾರಣಕ್ಕೆ ಚಂದ್ರು ಹತ್ಯೆಯಾಯ್ತು ಅಂತ ಹೇಳಿಕೆ ನೀಡಿದ್ದ.. ಈಗ ಸೈಮನ್ ಹೇಳಿದ್ದೇ ನಿಜ ಅಂತ ಚಂದ್ರು ಅವರ ಅತ್ತೆ ಕೂಡ ಹೇಳಿಕೆ ನೀಡಿದ್ದಾರೆ. ಚಂದ್ರು ಹತ್ಯೆ ಮಾಡಿದ್ದು ಮುಸ್ಲಿಂ ಹುಡುಗರು, ಬೇರೆ ಸಮುದಾಯದವರು ಅಂತ ಗೊತ್ತಾಗಿಯೇ ಈ ಕೆಲಸ ಮಾಡಿದ್ದಾರೆ ಅಂತ ಆರೋಪಿಸಿದ್ದಾರೆ. ಜೊತೆಗೆ ಸೈಮನ್ 5 ಲಕ್ಷ ರೂಪಾಯಿ ದುಡ್ಡು ಪಡೆದು ಸುಳ್ಳು ಹೇಳಿಕೆ ನೀಡಿದ್ದಾನೆ ಅಂತ ಆರೋಪಿಸಿದ್ದ ಶಾಸಕ ಜಮೀರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಜಮೀರ್ ಈ ಆರೋಪವನ್ನು ಸಾಬೀತುಪಡಿಸಲಿ ಅಂತ ಕಿಡಿಕಾರಿದ್ದಾರೆ. ಇವೆಲ್ಲದ್ರ ನಡುವೆ ಚಂದ್ರು ಕೊಲೆ ಕೇಸ್ ನಲ್ಲಿ ಸರ್ಕಾರ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಪ್ರಕರಣವನ್ನು ಸಿಐಡಿಗೆ ವಹಿಸಲು ಸರ್ಕಾರ ನಿರ್ಧರಿಸಿದೆ. ಈ ಪ್ರಕರಣದ ಬಗ್ಗೆ ಮಾತನಾಡಿದ ಸಿಎಂ ಬಸವರಾಜ್ ಬೊಮ್ಮಾಯಿ, ಆರೋಪ, ಪ್ರತ್ಯಾರೋಪ ಏನೇ ಇರಲಿ,ನಿಷ್ಪಕ್ಷಪಾತವಾದ ತನಿಖೆ ಆಗಿ ಸತ್ಯ ಹೊರಬರ್ಬೇಕು ಆದ್ದರಿಂದ ಕೇಸ್ನ್ನು ಸಿಐಡಿಗೆ ವಹಿಸಲು ನಿರ್ಧರಿಸಲಾಗಿದೆ ಅಂತ ಹೇಳಿದ್ರು. ಇನ್ನು ಗೃಹಸಚಿವ ಅರಗ ಜ್ಞಾನೇಂದ್ರ ಮಾತನಾಡಿ, ಯುವಕನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲ ಆಯಾಮಗಳಿಂದಲೂ ತನಿಖೆ ನಡೆಯಬೇಕು. ಸತ್ಯವನ್ನು ಬಯಲಿಗೆಳೆದು, ಹಂತಕರನ್ನು ಶಿಕ್ಷೆಗೆ ಒಳಪಡಿಸಬೇಕು ಅನ್ನೋ ಉದ್ದೇಶದಿಂದ ಈ ಪ್ರಕರಣವನ್ನು ಸಿಐಡಿಗೆ ವಹಿಸ್ತಿದ್ದೀವಿ ಅಂದ್ರು. ವಿಧಾನಪರಿಷತ್ ವಿಪಕ್ಷ ನಾಯಕ ಬಿಕೆ ಹರಿಪ್ರಸಾದ್ ಮಾತನಾಡಿ, ನಾಗ್ಪುರದ ವಿಷ ಜಂತುಗಳು ರಾಜ್ಯದಲ್ಲಿ ಸಾಮರಸ್ಯ ಹಾಳು ಮಾಡುತ್ತಿವೆ. ಸರ್ಕಾರದ ಕುಮ್ಮಕ್ಕಿನಿಂದಲೇ ರಾಜ್ಯದಲ್ಲಿ ಧರ್ಮ ಸಂಘರ್ಷ ನಡೀತಿದೆ ಅಂತ ಹೇಳಿದ್ದಾರೆ.
-masthmagaa.com
Contact Us for Advertisement