masthmagaa.com:
ಚೈತ್ರಾ ಕುಂದಾಪುರ ವಂಚನೆ ಪ್ರಕರಣದ 3ನೇ ಆರೋಪಿ ವಿಜಯನಗರದ ಹಿರೇಹಡಗಲಿ ಹಾಲಸ್ವಾಮಿ ಮಠದ ಅಭಿನವ ಹಾಲಶ್ರೀಯನ್ನು ಬಂಧಿಸಲಾಗಿದೆ. ಸಿಸಿಬಿ ಪೊಲೀಸರ ಮಾಹಿತಿ ಮೇರೆಗೆ ಒಡಿಶಾದ ಕಟಕ್ ಪೊಲೀಸರು ಹಾಲಶ್ರೀಯನ್ನ ಬಂಧಿಸಿದ್ದಾರೆ. ಚೈತ್ರಾ ಕೇಸ್ ಹೊರ ಬರ್ತಿದ್ದಂತೆ ತಲೆ ಮರೆಸಿಕೊಂಡಿದ್ದ ಹಾಲಶ್ರೀ ಖಾವಿ ಬಿಟ್ಟು ಬರ್ಮುಡಾ ಟೀಶರ್ಟ್ ಧರಿಸಿ ಸಾಮಾನ್ಯ ವ್ಯಕ್ತಿಯಂತೆ ಭುವನೇಶ್ವರ್ ಮಾರ್ಗವಾಗಿ ವಾರಾಣಸಿಗೆ ತೆರಳಲು ರೈಲಿನಲ್ಲಿ ಕುಳಿತುಕೊಂಡಿದ್ದ ವೇಳೆ ಪೊಲೀಸರು ಲಾಕ್ ಮಾಡಿದ್ದಾರೆ. ನಾಳೆ ಹಾಲಶ್ರೀರನ್ನ ಕೋರ್ಟ್ಗೆ ಹಾಜರುಪಡಿಸುವ ಸಾಧ್ಯತೆಯಿದೆ ಅಂತ ಮಾಹಿತಿ ಲಭ್ಯವಾಗಿದೆ. ಇನ್ನೊಂದ್ ಕಡೆ ಬಟ್ಟೆ ಅಂಗಡಿ ಹಾಕಿಕೊಡುವುದಾಗಿ ನಂಬಿಸಿ 5 ಲಕ್ಷ ರೂಪಾಯಿ ಪಡೆದು ವಂಚನೆ ಮಾಡಿದ ಆರೋಪದ ಮೇಲೆ ಚೈತ್ರಾ ವಿರುದ್ಧ ಉಡುಪಿ ಜಿಲ್ಲೆ ಬ್ರಹ್ಮಾವರ ತಾಲೂಕಿನ ಕೋಟ ಠಾಣೆಯಲ್ಲಿ ಕೇಸ್ ದಾಖಲಾಗಿದೆ. 2015ರಲ್ಲಿ ಪರಿಚಯವಾದ ಚೈತ್ರಾ ಬಿಜೆಪಿಯಲ್ಲಿ ಉನ್ನತ ಸ್ಥಾನದಲ್ಲಿರುವ ಹಲವು ಸಚಿವರು, ಶಾಸಕರ ಜೊತೆ ನಿಕಟ ಸಂಪರ್ಕದಲ್ಲಿದ್ದಾರೆ ಅಂತ ನಂಬಿಸಿದ್ರು. ಉಡುಪಿ ಹಾಗೂ ಕೋಟದಲ್ಲಿ ಬಟ್ಟೆ ಅಂಗಡಿಗಳನ್ನು ಹಾಕಲು ನೆರವು ನೀಡುತ್ತೇನೆ ಅಂತ 2018ರಿಂದ 2022ರವರೆಗೆ ಹಂತ ಹಂತವಾಗಿ 5 ಲಕ್ಷ ಪಡೆದಿದ್ದಾರೆ. ನಂತರ ಚೈತ್ರಾ ನಡೆ ಬಗ್ಗೆ ಅನುಮಾನಗೊಂಡು ಬಟ್ಟೆ ಅಂಗಡಿ ಹಾಕಿಕೊಡುವಂತೆ ಪಟ್ಟು ಹಿಡಿದಾಗ ಸುಳ್ಳು ಅತ್ಯಾಚಾರ ಕೇಸ್ ದಾಖಲಿಸೋದಾಗಿ ಹಾಗೂ ಗೂಂಡಾಗಳಿಂದ ಕೊಲೆ ಮಾಡಿಸುವುದಾಗಿ ಬೆದರಿಕೆ ಹಾಕಿದ್ದಾರೆ ಅಂತ ಸುದಿನ ಅನ್ನೋರು ದೂರು ನೀಡಿದ್ದಾರೆ. ಇನ್ನೊಂದ್ ಕಡೆ ಚೈತ್ರ ವಂಚನೆ ಬಗ್ಗೆ ನನಗೆ ಮೊದಲೇ ಗೊತ್ತಿತ್ತು ಅಂತ ನಮೋ ಬ್ರಿಗೇಡ್ ಮುಖ್ಯಸ್ಥ ಚಕ್ರವರ್ತಿ ಸೂಲಿಬೆಲೆ ಹೇಳಿದ್ದಾರೆ. ಚೈತ್ರಾ ಕುಂದಾಪುರ ಅವ್ರು ಗೋವಿಂದ ಪೂಜಾರಿಗೆ ವಂಚಿಸಿದ ವಿಚಾರ ನನಗೆ ಮೂರು ತಿಂಗಳ ಹಿಂದೆ ಗೊತ್ತಿತ್ತು. ಗೋವಿಂದ ಪೂಜಾರಿ ನನಗೆ ಒಳ್ಳೆಯ ಸ್ನೇಹಿತ. ತಾನು ಮೋಸ ಹೋದ ಬಗೆಯನ್ನು ಹಂಚಿಕೊಂಡಾಗ ನನಗೆ ಆಘಾತವಾಯಿತು. ಘಟನೆ ಬಗ್ಗೆ ಬಿಜೆಪಿ ನಾಯಕ ಸಿ ಟಿ ರವಿ ಅವರಿಗೂ ತಿಳಿಸಿದ್ದೆ. ಆಗ ಹಣಕ್ಕಾಗಿ ಟಿಕೆಟ್ ಹಂಚುವುದಿಲ್ಲ. ಸತ್ಯ ಹೊರ ಬಂದೇ ಬರುತ್ತದೆ. ಅಗತ್ಯ ಇದ್ದರೆ ತನಿಖೆ ಮಾಡಿಸೋಣ ಅಂತ ಸಿ ಟಿ ರವಿ ಹೇಳಿದ್ದರು ಅಂತ ಸೂಲಿಬೆಲೆ ತಿಳಿಸಿದ್ದಾರೆ.
-masthmagaa.com
Contact Us for Advertisement