masthmaga.com:
ಭಾಷೆ ವಿಚಾರ ಅಂತ ಬಂದ್ರೆ ಮೊದಲು ಕನ್ನಡವೇ ನನ್ನ ಮೊದಲ ಆದ್ಯತೆ, ಹಾಗೆಯೇ ನನಗೆ ಪ್ರತಿಯೊಂದು ಭಾಷೆಯ ಮೇಲೂ ಗೌರವವಿದೆ. ಆದರೆ ಹೇರಿಕೆ ಮಾಡಿದ್ರೆ ಸಹಿಸಲ್ಲ ಅಂತ ಪ್ರಕಾಶ್ ರೈ ಹೇಳಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಈ ಕುರಿತು ಪೋಸ್ಟ್ ಮಾಡಿರುವ ಅವರು, ‘ನನ್ನ ಬೇರು, ನನ್ನ ಮೂಲ ಕನ್ನಡ. ನನ್ನ ತಾಯಿಯನ್ನು ಗೌರವಿಸದೆ ನಿನ್ನ ಹಿಂದಿಯನ್ನು ಹೇರಿದರೆ ನಾವು ಹೀಗೇ ಪ್ರತಿಭಟಿಸುತ್ತೇವೆ. ಹೆದರಲ್ಲ ಅಷ್ಟೇ’ ಎಂದು ಬರೆದುಕೊಂಡಿದ್ದಾರೆ.
ಹಿಂದೆ ಒಂದು ಸಲ ಪ್ರಕಾಶ್ ರೈ “ನನಗೆ ಹಿಂದಿ ಬರಲ್ಲ ಹೋಗ್ರಪ್ಪ” ಎಂದು ಬರೆದು ಕೊಂಡಿರುವ ಟೀ ಶರ್ಟ್ ಹಾಕಿಕೊಳ್ಳುವ ಮೂಲಕ ಹಿಂದಿ ಹೇರಿಕೆಯನ್ನ ಬಲವಾಗಿ ವಿರೋಧಿಸಿದ್ರು. ಇದಕ್ಕೆ ಇತ್ತೀಚೆಗೆ ಟ್ವಿಟರ್ನಲ್ಲಿ ಶಶಾಂಕ್ ಶೇಖರ್ ಝಾ ಎನ್ನುವವರು ಪ್ರಕಾಶ್ ರೈ ವಿರುದ್ಧ FIR ಹಾಕಿದ್ದೀರಾ ಅಂತ ಪೊಲೀಸರಿಗೆ ಪ್ರಶ್ನೆ ಮಾಡಿದ್ದರು. ಇದಕ್ಕೆ ಪ್ರಕಾಶ ರೈ ಸಮಾಧಾನದಿಂದಲೇ ಪ್ರತಿಕ್ರಿಯೆ ನೀಡಿದ್ದು, ‘ನಾನು ಏಳು ಭಾಷೆಗಳನ್ನು ಬಲ್ಲೆ. ಒಂದು ಭಾಷೆಯನ್ನು ಕಲಿತು ಮಾತನಾಡುವುದು ಎಂದರೆ ಆ ಭಾಷೆಯ ಜನರನ್ನು ಗೌರವಿಸುವುದು. ನಾನು ಹೋಗುವಲ್ಲೆಲ್ಲಾ ಆಯಾ ಭಾಷೆಯಲ್ಲಿ ಸಂವಾದಿಸುತ್ತೇನೆ. ನನ್ನ ಭಾಷೆಯನ್ನು ಹೇರುವುದಿಲ್ಲ. ಆದರೆ, ನನ್ನ ಕನ್ನಡವನ್ನು ಅವಮಾನಿಸಿ ನಿಮ್ಮ ಭಾಷೆಯನ್ನು ಹೇರಿದರೆ ನಿಂತು ಹೋರಾಡುತ್ತೇನೆ’ ಎಂದು ಟ್ವೀಟ್ ಮಾಡಿದ್ದಾರೆ. ಪ್ರಕಾಶ್ ರೈ ಅವರು ಸಾಮಾನ್ಯವಾಗಿ ಯಾವಾಗಲೂ ಕನ್ನಡದ ಬಗ್ಗೆ ಖಳಜಿ ಹೊಂದಿರುವ ವ್ಯಕ್ತಿ. ಟ್ವಿಟರ್ನಲ್ಲಿ ಸಾಕಷ್ಟು ಆ್ಯಕ್ಟಿವ್ ಇರ್ತಾರೆ. ಕನ್ನಡವನ್ನು ಎತ್ತಿ ಹಿಡಿಯುವ ಕೆಲಸ ಮಾಡಿರುವುದು ಇದು ಮೊದಲನೇ ಸಲ ಏನಲ್ಲ, ಹಿಂದಿ ಹೇರಿಕೆ ಅಂತ ಬಂದಾಗ ಮೂಂಚೂಣಿಯಲ್ಲಿ ಮಾತಾಡ್ತಾರೆ. ಇದೀಗ ಪ್ರಕಾಶ್ ರೈ ಅವ್ರ ನಡೆಗೆ ಕನ್ನಡಿಗರು ಶ್ಲಾಘಿಸಿದ್ದಾರೆ.
-masthmagaa.com
Contact Us for Advertisement