‘ಕಂಬ್ಳಿಹುಳ’ ಸಿನಿಮಾಗೆ ಭಟ್ರು, ಸಿಂಪಲ್ ಸುನಿ, ವಿನಯ್ ರಾಜ್ಕುಮಾರ್ ಫಿದಾ: ಇಂಥ ಸಿನಿಮಾ ಉಳಿಬೇಕು ಅಂದ ಸ್ಯಾಂಡಲ್ವುಡ್ ಸ್ಟಾರ್ಸ್!

masthmagaa.com:

ನವೆಂಬರ್ 4ರಂದು ರಾಜ್ಯಾದ್ಯಂತ ಬಿಡುಗಡೆಯಾದ ‘ಕಂಬ್ಳಿಹುಳ’ ಸಿನಿಮಾ ಪ್ರೇಕ್ಷಕ ಪ್ರಭುಗಳಿಂದ ಭರ್ಜರಿ ರೆಸ್ಪಾನ್ಸ್ ಗಿಟ್ಟಿಸಿಕೊಂಡಿತ್ತು. ಹೊಸತನವನ್ನೇ ಮೈವೆತ್ತಂತೆ ಹೊರಬಂದಿರುವ ಈ ಸಿನಿಮಾದ ಬಗ್ಗೆ ಚಿತ್ರರಸಿಕರು ಬಿಡುಗಡೆಯಾದ ಮೊದಲೇ ವಾರದಲ್ಲೇ ಪ್ರಶಂಸೆಯ ಮಳೆಗರೆದಿದ್ದರು, ಮುಕ್ತವಾಗಿ ಶ್ಲಾಘಿಸಿದ್ದರು.

ನಾಯಕ ಅಂಜನ್ ನಾಗೇಂದ್ರ, ನಾಯಕಿ ಅಶ್ವಿತ ಹೆಗ್ಡೆ ಸೇರಿದಂತೆ ಬಹುತೇಕ ಎಲ್ಲ ನಟರ ಬಹಳ ಅಚ್ಚುಕಟ್ಟಾದ ಪಾತ್ರಪೋಷಣೆ ಮತ್ತು ಮಲೆನಾಡಿನ ಪ್ರೇಮಕಥೆಯೊಂದನ್ನ ತೆರೆ ಮೇಲೆ ಸೊಗಸಾಗಿ ಕಟ್ಟಿಕೊಟ್ಟ ನವ ನಿರ್ದೇಶಕ ನವನ್ ಶ್ರೀನಿವಾಸ್ ಅವರ ನೈಪುಣ್ಯತೆ, ಕಥೆಯಲ್ಲಿನ ದೇಸಿತನ, ಒಳ್ಳೆ ಸಂಗೀತ, ಚಿತ್ರಕಥೆ ಎಲ್ಲವೂ ಈ ಸಿನಿಮಾದಲ್ಲಿ ಪ್ಲಸ್ ಅಂತ ಪ್ರೇಕ್ಷಕರು ಶರಾ ಬರೆದಿದ್ದರು. ಈಗ ಇಡೀ ಸಿನಿಮಾ ತಂಡದ ಪರಿಶ್ರಮಕ್ಕೆ ಸ್ಯಾಂಡಲ್ ವುಡ್ ನಟ ನಟಿಯರು ಫಿಧಾ ಆಗಿದ್ದಾರೆ, ಎಲ್ಲರೂ ಸಿನಿಮಾ ನೋಡಲೇ ಬೇಕು ಅಂತ ಮನದುಂಬಿ ಹೊಗಳಿದ್ದಾರೆ.

ಖ್ಯಾತ ನಿರ್ದೇಶಕ ಯೋಗರಾಜ್ ಭಟ್, ಚಾರ್ಲಿ 777 ನಿರ್ದೇಶಕ ಕಿರಣ್ ರಾಜ್, ಸಿಂಪಲ್ ಸುನಿ, ಜಯತೀರ್ಥ, ನಟ ಡಾಲಿ ಧನಂಜಯ್, ವಿನಯ್ ರಾಜ್ಕುಮಾರ್, ನಟಿ ಅದಿತಿ ಪ್ರಭುದೇವ ಸೇರಿದಂತೆ ಹಲವಾರು ಚಿತ್ರರಂಗದ ಗಣ್ಯರು ಸಾಥ್ ನೀಡಿದ್ದಾರೆ. ಪ್ರೇಕ್ಷಕರು ಯಾವುದೇ ಕಾರಣಕ್ಕೂ ಈ ಸಿನಿಮಾ ಮಿಸ್ ಮಾಡಬಾರದು ಅಂತ ಮುಕ್ತವಾಗಿ ಹೊಗಳಿದ್ದಾರೆ.

ನಟ ಧನಂಜಯ್ ಸಿನಿಮಾ ಬಗ್ಗೆ ಒಳ್ಳೆ ಮಾತುಗಳು ಕೇಳಿಬರುತ್ತಿದೆ, ಒಳ್ಳೆದಾಗಲಿ ಅಂತ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದರು. ನಿರ್ದೇಶಕ ಸಿಂಪಲ್ ಸುನಿ ‘ಕಂಬ್ಳಿಹುಳ’ ಸಿನಿಮಾ ನೋಡಿ ಹಾಡಿ ಹೊಗಳಿದ್ದರು. ಇಡೀ ಚಿತ್ರತಂಡಕ್ಕೆ ಬೆಂಬಲವಾಗಿ ನಿಂತ ಸುನಿ ಕಂಬ್ಳಿಹುಳ ಇನ್ನೂ ಒಂದು ಕೈ ಮುಂದೆ ಹೋಗಿ ಸಿನಿಮಾ ನೋಡಿ ಬರುವವರಿಗೆ ಒಂದು ಆಫರ್ ಕೂಡ ಕೊಟ್ಟರು. ಕಂಬ್ಳಿಹುಳ ಸಿನಿಮಾ ಸೆಕೆಂಡ್ ಹಾಫ್ ಮುಗಿಸಿ ಚಿತ್ರಮಂದಿರದಿಂದ ಹೊರಬರುವ ಪ್ರೇಕ್ಷಕ ಪ್ರಭುಗಳು ಸಿನಿಮಾ ಚೆನ್ನಾಗಿಲ್ಲ ಅಂದ್ರೆ ಅವರು ತೆಗೆದುಕೊಂಡ ಟಿಕೆಟ್ ನ ಅರ್ಧಹಣವನ್ನು ವಾಪಾಸ್ಸು ಮಾಡುವುದಾಗಿ ಹೇಳಿದ್ದರು ಈ ಆಫರ್ ಮುಂದಿನ ಮೂರು ದಿನಗಳು ಮಾತ್ರ ಲಭ್ಯವಿದೆ ಎಂದು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿ ಕೊಂಡಿದ್ದರು.

ಈಗ ಸುನಿ ನಂತ್ರ ಮೇಲೆ ತಿಳಿಸಿದ ಹಲವು ಚಿತ್ರರಂಗದ ಗಣ್ಯರು ಒಂದೊಳ್ಳೆ ಚಿತ್ರಕ್ಕೆ ಬೆಂಬಲ ಸೂಚಿಸಿದ್ದಾರೆ. ಅದು ಬಿಟ್ಟರೆ ಪ್ರೇಕ್ಷಕ ಪ್ರಭುಗಳು ಕೂಡ ಸಿನಿಮಾ ನೋಡಿ ಎಂಜಾಯ್ ಮಾಡ್ತಿದ್ದಾರೆ. ಈಗಾಗಲೇ ನೋಡಿದವರು ಸೋಶಿಯಲ್ ಮೀಡಿಯಾದಲ್ಲಿ ಸಿನಿಮಾ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಬರೆದುಕೊಳ್ಳುತ್ತಿದ್ದಾರೆ. ಸಪೋರ್ಟ್ ಕಂಬ್ಳಿಹುಳ, ನಮ್ಮ ಮಣ್ಣಿನ ಸಿನಿಮಾ ಎಂದು ಸೋಶಿಯಲ್ ಮೀಡಿಯಾದಲ್ಲಿ ಹ್ಯಾಶ್ ಟ್ಯಾಗ್ ಬಳಸಿ ಟ್ರೆಂಡ್ ಮಾಡುತ್ತಿದ್ದಾರೆ. ಇದರಲ್ಲೇ ಅರ್ಥ ಮಾಡಿಕೊಳ್ಳಬೇಕು ಸಿನಿಮಾ ಅದೆಷ್ಟು ಚೆನ್ನಾಗಿದೆ ಅನ್ನೋದು. ಚಿತ್ರದ ಬಗೆಗೆ ಎಲ್ಲರೂ ತೋರಿಸುತ್ತಿರುವ ಪ್ರೀತಿ, ಸಪೋರ್ಟ್ ಕಂಡು ಸಿನಿಮಾ ತಂಡ ಕೂಡ ಸಂತಸ ವ್ಯಕ್ತಪಡಿಸಿದೆ.

ಇದೆಲ್ಲ ಇದ್ರೂ, ಥಿಯೇಟರ್ ಗೆ ಹೋಗಿ ಸಿನಿಮಾ ನೋಡೋರು ಇನ್ನೂ ಜಾಸ್ತಿ ಆಗಬೇಕಿದೆ. ಆಗಲೇ ಥಿಯೇಟರ್ ಶೋಸ್ ಹೆಚ್ಚಾಗುತ್ತೆ, ಸಿನಿಮಾ ಗೆಲ್ಲುತ್ತೆ. ಹಾಗಾಗಿ ಈ ಸಿನಿಮಾನ ಆದಷ್ಟು ಬೇಗ ಥಿಯೇಟರ್ ನಲ್ಲಿ ನೋಡಿ, ಹೊಸ ಪ್ರತಿಭೆಗಳನ್ನ, ಹೊಸ ಪ್ರಯತ್ನವನ್ನ ಗೆಲ್ಲಿಸಬೇಕಾದ ಅಗತ್ಯ ಇದೆ.

ನವ ಪ್ರತಿಭೆ ನವನ್ ಶ್ರೀನಿವಾಸ್ ನಿರ್ದೇಶನದಲ್ಲಿ ಮೂಡಿ ಬಂದ ಈ ಚಿತ್ರದಲ್ಲಿ ಅಂಜನ್ ನಾಗೇಂದ್ರ ಹಾಗೂ ಅಶ್ವಿತಾ ಆರ್ ಹೆಗ್ಡೆ ನಾಯಕ, ನಾಯಕಿಯಾಗಿ ನಟಿಸಿದ್ದಾರೆ. ಗ್ರೇ ಸ್ಕ್ವೇರ್ ಸ್ಟುಡಿಯೋಸ್ ಬ್ಯಾನರ್ ನಡಿ ಸಿನಿಮಾ ನಿರ್ಮಾಣವಾಗಿದ್ದು, ಸತೀಶ್ ರಾಜೇಂದ್ರ ಛಾಯಾಗ್ರಾಹಣ, ಜಿತೇಂದ್ರ ನಾಯಕ ಮತ್ತು ರಾಘವೇಂದ್ರ ಟಿಕೆ ಸಂಕಲನ, ಶಿವ ಪ್ರಸಾದ್ ಸಂಗೀತ ನಿರ್ದೇಶನ ‘ಕಂಬ್ಳಿಹುಳ’ ಚಿತ್ರಕ್ಕಿದೆ.

-masthmagaa.com

Contact Us for Advertisement

Leave a Reply