masthmagaa.com:
ಕಿಚ್ಚ ಸುದೀಪ್ ಬಿಜೆಪಿ ಪರ ಪ್ರಚಾರ ಶುರುಮಾಡಿದ್ದಾರೆ. ನಿನ್ನೆಯಷ್ಟೇ ಶಿಗ್ಗಾಂವಿಯಿಂದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಅವರೊಂದಿಗೆ ಬಿಜೆಪಿ ಪರ ಪ್ರಚಾರಕ್ಕಿಳಿದಿದ್ದಾರೆ. ಈ ಬಗ್ಗೆ ಸುದೀಪ್ ಟ್ವಿಟರ್ನಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಅವರೊಂದಿಗಿನ ಪೋಟೋ ಹಂಚಿಕೊಂಡು, ʻʻನಮಸ್ಕಾರ ಶ್ರೀ ಕನಕದಾಸರು ಮತ್ತು ಶ್ರೀ ಸಂತ ಶಿಶುನಾಳರು ಹುಟ್ಟಿದ ಶಿಗ್ಗಾಂವಿ ತಾಲೂಕಿನಿಂದಲೇ ಪ್ರಚಾರ ಶುರು ಮಾಡುತ್ತಿರುವುದು ನಿಜಕ್ಕೂ ಹೆಮ್ಮೆ ಮತ್ತು ಸಂತೋಷದ ಸಂಗತಿ. ಎಲ್ಲರಿಗೂ ಶುಭವಾಗಲಿʼʼ ಎಂದು ಬರೆದುಕೊಂಡಿದ್ದಾರೆ.
ಶಿಗ್ಗಾಂವಿಯ ಬೃಹತ ರ್ಯಾಲಿಯಲ್ಲಿ ಸುದೀಪ್ ಭಾಗಿಯಾಗಿದ್ದರು. ನಂತರ ವೇದಿಕೆಯ ಮೇಲೆ ಬಿಜೆಪಿ ಪರ ʻʻ ಶಿಗ್ಗಾಂವಿಗೆ ಮೊದಲ ಬಾರಿ ಬಂದಿದ್ದೇನೆ, ತುಂಬಾ ಪ್ರೀತಿ ಕೊಟ್ಟಿದ್ದಿರಾ ತುಂಬಾ ಖುಷಿಯಾಗಿದೆ ಧನ್ಯವಾದಗಳು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಪರವಾಗಿ ನಾನು ಪ್ರಚಾರಕ್ಕೆ ಬಂದಿದ್ದೇನೆ. ಸಿಎಂ ಬೊಮ್ಮಾಯಿಯವರು ಕಡಿಮೆ ಅವಧಿಯಲ್ಲಿ ಉತ್ತಮವಾಗಿ ಕೆಲಸ ಮಾಡಿದ್ದಾರೆ. ನನ್ನ ಒಂದು ಸಿನಿಮಾದಲ್ಲಿ ಮಾತೊಂದಿದೆ ಗೆದ್ದೇ ಗೆಲ್ಲುವೆ ಒಂದು ದಿನ, ಗೆಲ್ಲಲೇ ಬೇಕು ಒಳ್ಳೆಯತನ ಇದರಂತೆಯೇ ಆಗುತ್ತದೆ. ಶಿಗ್ಗಾಂವಿಯಲ್ಲಿ ಬೊಮ್ಮಾಯಿ ಅವರಿಗೆ ಇಷ್ಟು ಜನ ಸೇರಿರುವುದು ನೋಡಿದರೆ ಗೊತ್ತಾಗುತ್ತದೆ ಅವರು ಎಂಥಹಾ ವ್ಯಕ್ತಿ, ಜನರಿಗಾಗಿ ಎಷ್ಟು ಕೆಲಸ ಮಾಡಿದ್ದಾರೆ ಎಂಬುದು. ಅವರಿಗೆ ಸಿಕ್ಕಿರುವ ಅವಧಿ ಬಹಳ ಕಡಿಮೆ. ಅವರು ಕೆಲಸ ಮಾಡಲು ಅವಕಾಶ ಬೇಕು. ಈಗ ಅವರೊಬ್ಬರೇ ಇಲ್ಲ ಅವರ ಜೊತೆ ನಾನೂ ಬಂದಿದ್ದೇನೆ. ಕೆಲಸ ಆಗಬೇಕು, ಜನರಿಗೆ ಒಳ್ಳೆಯದಾಗಬೇಕು. ಭಾರತೀಯನಾಗಿ ಮೋದಿ ಅವರ ಕಾರ್ಯಗಳನ್ನು ನಾನು ಮೆಚ್ಚುತ್ತೇನೆ. ವಿದೇಶಗಳಲ್ಲಿ ಹೋದಾಗ ಅಲ್ಲಿ ಜನ ಭಾರತದ ಬಗ್ಗೆ ಹೆಮ್ಮೆಯಿಂದ ಮಾತನಾಡ್ತಾರೆ, ಇದಕ್ಕೆ ಮೋದಿಯವರೇ ಕಾರಣ. ನಾನೂ ಸಹ ಸುಮ್ಮ-ಸುಮ್ಮನೆ ಪ್ರಚಾರಕ್ಕೆ ಬರುವವನಲ್ಲ. ಕೆಲಸಗಳಾಗುತ್ತವೆ ಎಂಬ ನಂಬಿಕೆ ಇದ್ದರೆ ಮಾತ್ರ ಬರ್ತೇನೆ” ಎಂದು ಮಾತನಾಡಿದರು.
-masthmagaa.com
Contact Us for Advertisement