ಬೆಂಗಳೂರಿನ ಭವ್ಯ ಚರಿತ್ರೆ ಸಾರಲಿರುವ “ಮೇಡ್ ಇನ್ ಬೆಂಗಳೂರು” ಚಿತ್ರದ ಚಿತ್ರೀಕರಣ ಮುಕ್ತಾಯ!

masthmagaa.com:

ಇಲ್ಲಿ ಹುಟ್ಟಿಬೆಳೆದವರಷ್ಟೇ‌ ಅಲ್ಲದೇ ಬೇರೆ ‌ಊರಿನವರಿಗೂ ಆಶ್ರಯ ನೀಡಿ ತಾಯಿ ಸ್ಥಾನದಲ್ಲಿದೆ ನಮ್ಮ ಬೆಂಗಳೂರು. ಬೆಂಗಳೂರಿನ ಕುರಿತಂತೆ ಈಗ ಚಿತ್ರವೊಂದು ತಯಾರಾಗಿದೆ. ಈ ಚಿತ್ರದ ಹೆಸರು “ಮೇಡ್ ಇನ್ ಬೆಂಗಳೂರು”, ಸಧ್ಯ ಈ ಚಿತ್ರದ ಚಿತ್ರೀಕರಣ ಪೂರ್ಣವಾಗಿ , ಪೋಸ್ಟ್ ಪ್ರೊಡಕ್ಷನ್ ವರ್ಕ್ ನಡೆಯುತ್ತಿದೆ. ಕನ್ನಡ ಚಿತ್ರರಂಗದ ಪ್ರಮುಖ ನಟರಾದ ಅನಂತನಾಗ್, ಸಾಯಿಕುಮಾರ್‌ ಹಾಗೂ ಪ್ರಕಾಶ್ ಬೆಳವಾಡಿ ಮೂರು ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ನಾಯಕನಾಗಿ ಮಧುಸೂದನ್ ಗೋವಿಂದ್ ಅಭಿನಯಿಸಿದ್ದಾರೆ. ಪುನೀತ್ ಮಾಂಜ, ವಂಶಿಧರ್, ಹಿಮಾಂಶಿ ವರ್ಮ, ಸುಧಾ ಬೆಳವಾಡಿ, ಮಂಜುನಾಥ್ ಹೆಗ್ಡೆ, ಶಂಕರಮೂರ್ತಿ, ವಿನೀತ್, ರಮೇಶ್ ಭಟ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

ಪ್ರದೀಪ್ ಶಾಸ್ತ್ರಿ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನರ್ದೇಶಿಸಿದ್ದಾರೆ. ಈ ಚಿತ್ರದ ಶೀರ್ಷಿಕೆ ಬಿಡುಗಡೆ ಹಾಗೂ ಪತ್ರಿಕಾಗೋಷ್ಠಿ ಸಮಾರಂಭ ಇತ್ತೀಚೆಗೆ ನಗರದ ಖಾಸಗಿ ಹೋಟೆಲ್ ನಲ್ಲಿ ನೆರವೇರಿತು. ಮೊದಲಿಗೆ ಚಿತ್ರದ ಬಗ್ಗೆ ನಿರ್ದೇಶಕ ಪ್ರದೀಪ್ ಶಾಸ್ತ್ರಿ ಸಂಪೂರ್ಣ ವಿವರ ನೀಡಿದರು.

ಕೆಲವು ತಿಂಗಳುಗಳ ಹಿಂದೆ ನಿರ್ಮಾಪಕ ಬಾಲಕೃಷ್ಣ ಮತ್ತು ನಿರ್ದೇಶಕ ಪ್ರದೀಪ್ ಶಾಸ್ತ್ರಿ ಈ ಚಿತ್ರದ ಸಂಬಂಧ ಮನೆಗೆ ಬಂದಿದ್ದರು. ಅವರು ರಾಘವೇಂದ್ರ ಸ್ವಾಮಿಗಳ ಪರಮಭಕ್ತರು. ನಾನು ಹುಟ್ಟಿದ್ದು ಕರಾವಳಿಯ ಭಾಗವಾದ್ದರಿಂದ ನನಗೆ ಮೊದಲು ಗುರು ರಾಘವೇಂದ್ರರ ಕುರಿತಾಗಿ ಗೊತ್ತಿರಲಿಲ್ಲ. ‘ನಾ ನಿನ್ನ ಬಿಡಲಾರೆ’ ಚಿತ್ರದಲ್ಲಿ ಮೊದಲ ಬಾರಿಗೆ ಗುರು ರಾಘವೇಂದ್ರ ಕುರಿತು ಹಾಡಿತ್ತು. ಆ ನಂತರ ಅವರ ಬಗ್ಗೆ ತಿಳಿದುಕೊಳ್ಳುತ್ತಾ ಹೋದೆ.ಮನೆಯಲ್ಲಿ ಅವರ ಮೂರ್ತಿಯನ್ನಿಟ್ಟು ಪೂಜೆ ಸಹ ಪ್ರಾರಂಭವಾಯಿತು. ಅವರೇ ಈ ಪ್ರಾಜೆಕ್ಟ್​ ಕೊಡಿಸಿದಾರಾ? ಎನಿಸುವಂತಿದೆ. ಪ್ರದೀಪ್ ಕೊಟ್ಟ ಸ್ಕ್ರಿಪ್ಟ್​ ಓದಿದೆ. ಬಹಳ ಖುಷಿಯಾಯಿತು. ನನ್ನದು ಇದರಲ್ಲಿ ಹೀರಾ ನಂದಾನಿ ಎಂಬ ಸಿಂಧಿ ವ್ಯಾಪಾರಿಯ ಪಾತ್ರ. ಬಹಳ ಚೆನ್ನಾಗಿ ಈ ಪಾತ್ರವನ್ನು ಬರೆದಿದ್ದಾರೆ. ನನಗೆ ಒಬ್ಬ ಸಿಂಧಿ ವ್ಯಾಪಾರಿಯ ಪರಿಚಯವಿತ್ತು. ಅವರೇ ಖ್ಯಾತ ನಿರ್ಮಾಪಕ ಮತ್ತು ವಿತರಕ ಪಾಲ್​ ಚಂದಾನಿ. ನನ್ನ ಅದೆಷ್ಟೋ ಚಿತ್ರಗಳ ವಿತರಣೆ ಮಾಡಿದ್ದಾರೆ ಅವರು. ಅವರನ್ನು ಹತ್ತಿರದಿಂದ ನೋಡಿದ್ದೆನಾದ್ದರಿಂದ ಅವರ ಮ್ಯಾನರಿಸಂ ಬಳಸಿಕೊಳ್ಳಬಹುದಾ ಎಂದು ನಿರ್ದೇಶಕರನ್ನು ಕೇಳಿದೆ. ಅವರು ಒಪ್ಪಿದರು. ಅವರ ಮಾತಿನ ಧಾಟಿ ಮತ್ತು ಮ್ಯಾನರಸಿಂಗಳನ್ನು ಈ ಚಿತ್ರದಲ್ಲಿ ಸ್ವಲ್ಪ ಮಟ್ಟಿಗೆ ಬಳಸಿಕೊಂಡಿದ್ದೇನೆ. ಈ ಚಿತ್ರ ರಜನಿ ಥರ್ಸ್​ಡೇ ಸ್ಟೋರೀಸ್​ ಸಂಸ್ಥೆಯಡಿ ನಿರ್ಮಾಣವಾಗಿದೆ. ಚಿತ್ರ ಯಶಸ್ವಿಯಾಗಲಿ, ನಿರ್ಮಾಪಕರು ಹಾಕಿದ ದುಡ್ಡು ಮರಳಲಿ ಎಂದು ಹಿರಿಯ ನಟ ಅನಂತನಾಗ್ ಹಾರೈಸಿದರು.

ಈ ಚಿತ್ರದ ಹೆಸರಿನಂತೆ ನಾನು ಸಹ ‘ಮೇಡ್​ ಇನ್​ ಬೆಂಗಳೂರು’. ಸ್ವರ ಅಪ್ಪನದ್ದು, ಸಂಸ್ಕಾರ ಅಮ್ಮನದ್ದು, ಅನುಗ್ರಹ ದೇವರದ್ದು, ಅಭಿಮಾನ ನಿಮ್ಮದು … ನಾನು ಅನಂತ್​ ನಾಗ್​ ಮತ್ತು ಪ್ರಕಾಶ್​ ಬೆಳವಾಡಿ ಅವರ ದೊಡ್ಡ ಅಭಿಮಾನಿ. ‘ಭಕ್ತ ಪ್ರಹ್ಲಾದ’ ಚಿತ್ರವು ತೆಲುಗಿಗೆ ಡಬ್​ ಆದಾಗ ನಮ್ಮ ತಂದೆ, ಡಾ. ರಾಜ್​ಕುಮಾರ್​ ಅವರ ಪಾತ್ರಕ್ಕೆ ಡಬ್​ ಮಾಡಿದರೆ, ನಾನು ಅನಂತ್​ ನಾಗ್​ ಅವರ ನಾರದನ ಪಾತ್ರಕ್ಕೆ ಡಬ್​ ಮಾಡಿದ್ದೆ. ಈ ಚಿತ್ರವನ್ನು ನಾನು ಒಪ್ಪಿಕೊಳ್ಳುವುದಕ್ಕೆ ಮುಖ್ಯ ಕಾರಣ ಅನಂತ್​ ನಾಗ್​ ಮತ್ತು ಪ್ರಕಾಶ್​ ಬೆಳವಾಡಿ ಎಂದರೆ ತಪ್ಪಿಲ್ಲ.

ಈ ಚಿತ್ರದಲ್ಲಿ ಅವರ ಜೊತೆಗೆ ನಟಿಸುವುದಕ್ಕೆ ಅವಕಾಶ ಇಲ್ಲದಿದ್ದರೂ, ಅವರಿಬ್ಬರೂ ನಟಿಸಿರುವ ಚಿತ್ರದಲ್ಲಿ ನಾನೂ ಇದ್ದೇನೆ ಎನ್ನುವುದು ಖುಷಿ. ನಾನು ಡೈಲಾಗ್​ಗಳಿಗೆ ಬಹಳ ಜನಪ್ರಿಯ. ಆದರೆ, ಇಲ್ಲಿ ನನಗೆ ಸಂಭಾಷಣೆ ಕಡಿಮೆ. ಎಕ್ಸ್​ಪ್ರೆಶನ್​ಗಳು ಜಾಸ್ತಿ. ಬರೀ ಭಾವನೆಗಳ ಮೂಲಕ ಅಭಿವ್ಯಕ್ತಿ ಮಾಡುವಂತಹ ಪಾತ್ರ ನನ್ನದು. ಇತ್ತೀಚಿನ ವರ್ಷಗಳಲ್ಲಿ ಯುವ ನಿರ್ದೇಶಕರ ಚಿತ್ರಗಳಲ್ಲಿ ಹೆಚ್ಚುಹೆಚ್ಚು ಕೆಲಸ ಮಾಡುವುದಕ್ಕೆ ಅವಕಾಶ ಸಿಗುತ್ತಿವೆ. ‘ರಂಗಿತರಂಗ’ ನಂತರ ಹಲವು ಹೊಸ ನಿರ್ದೇಶಕರ ಚಿತ್ರಗಳಲ್ಲಿ ವಿಭಿನ್ನ ಪಾತ್ರ ಮಾಡುವ ಅವಕಾಶ ಸಿಕ್ಕಿದೆ. ಈ ಚಿತ್ರದಲ್ಲೂ ಅಂಥದ್ದೊಂದು ಅವಕಾಶ ಸಿಕ್ಕಿದೆ. ಇದೊಂದು ಅದ್ಭುತವಾದ ಕಥೆ. ನೀವೆಲ್ಲರೂ ನೋಡಿ ಹರಿಸಿ, ಹಾರೈಸಿ ಎಂದರು ನಟ ಸಾಯಿಕುಮಾರ್.

ನನಗೆ ಸ್ವಲ್ಪ ವ್ಯವಹಾರ ಜ್ಞಾನ ಕಡಿಮೆ.‌ ಹಾಗಾಗಿ ಬಾಂಬೆ ಮೂಲದ ಕಂಪನಿಯೊಂದು ನನಗೆ ಆ ವಿಷಯದಲ್ಲಿ ಸಹಾಯ ಮಾಡುತ್ತಿದೆ. ಯಾರುಯಾರೋ ಬಂದು ಬೆಂಗಳೂರನು ಏನೇನೋ ಮಾಡಿದರು. ಇಂತಹ ಕೆಲವರಿಂದ ಬೆಂಗಳೂರಿಗೆ ಒಳ್ಳೆಯದು ಆಗಿದೆ ಎಂದು ಅನಿಸಿತು ಎಂದು ಮಾತು ಆರಂಭಿಸಿದ ಪ್ರಕಾಶ್ ಬೆಳವಾಡಿ ತಮ್ಮ ಪಾತ್ರದ ಪರಿಚಯ ಮಾಡಿಕೊಳುತ್ತಾ, ಈ ಕಥೆ ತುಂಬಾ ಚೆನ್ನಾಗಿದೆ. ಇಂತಹ ಸಿನಿಮಾಗಳ ನಿರ್ಮಾಣ ಜಾಸ್ತಿಯಾದರೆ ಕನ್ನಡ ಚಿತ್ರರಂಗದ ಹಿಂದಿನ ವೈಭವದ ದಿನಗಳು ಮತ್ತೆ ಮರುಕಳಿಸಲಿದೆ ಎಂದರು.

ನನಗೆ ನಿರ್ದೇಶಕ ಪ್ರದೀಪ್ ಶಾಸ್ತ್ರಿ ‌ಏಳು ವರ್ಷಗಳ ಪರಿಚಯ.‌ ನನ್ನ ಬಳಿ ಉತ್ತಮ ಕಥೆಯಿದೆ. ಸಿನಿಮಾ ಮಾಡೋಣ ಎಂದರು. ಕಥೆ ಕೇಳಿದ ನಾನು, ಸಮಾಜಕ್ಕೆ ಏನಾದರೂ ಉತ್ತಮ‌ ಸಂದೇಶ ನೀಡುವ ಸಲುವಾಗಿ ಈ ಚಿತ್ರ ನಿರ್ಮಾಣ ಮಾಡಿದ್ದೇನೆ ಎನ್ನುತ್ತಾರೆ ನಿರ್ಮಾಪಕ ಬಾಲಕೃಷ್ಣ. ಸಾಹಿತಿ -ಪತ್ರಕರ್ತ ಜೋಗಿ ಅವರು ಸಹ ಈ ಸಮಾರಂಭಕ್ಕೆ ಆಗಮಿಸಿ ಬೆಂಗಳೂರು ಹಾಗೂ ತಮ್ಮ ನಡುವಿನ ಬಾಂಧವ್ಯ ವಿವರಿಸಿ, ಚಿತ್ರತಂಡಕ್ಕೆ ಶುಭ ಕೋರಿದರು. ಅಶ್ವಿನ್ ಪಿ ಕುಮಾರ್ ಅವರ ಸಂಗೀತ ನಿರ್ದೇಶನವಿರುವ ಈ ಚಿತ್ರಕ್ಕೆ ಭಜರಂಗ್ ಕೊಣತಮ್ ಛಾಯಾಗ್ರಹಣ ಹಾಗೂ ಶಾಂತಕುಮಾರ್ ಅವರ ಸಂಕಲನ “ಮೇಡ್ ಇನ್ ಬೆಂಗಳೂರು” ಚಿತ್ರಕ್ಕಿದೆ.

” A million dreams. One city” ಎಂಬ ಸುಂದರ ಅಡಿಬರಹ ಕೂಡ ಈ ಚಿತ್ರಕ್ಕಿದೆ.

-masthmagaa.com

Contact Us for Advertisement

Leave a Reply