ಪ್ರವಾದಿ ಮೊಹಮ್ಮದ್‌ರ ನಿಂದನೆ: ಭಾರತದಲ್ಲಿ ಆತ್ಮಾಹುತಿ ದಾಳಿ ನಡೆಸೋದಾಗಿ ಅಲ್‌-ಖೈದಾ ಪ್ರತಿಜ್ಞೆ!

masthmagaa.com:

ಪ್ರವಾದಿ ಮೊಹಮ್ಮದ್ದರನ್ನ ಅವಮಾನಿಸಿದರ ವಿರುದ್ಧ ಜಾಗತಿಕ ಉಗ್ರ ಸಂಘಟನೆ ಅಲ್‌ ಖೈದಾ ಈಗ ಪ್ರತೀಕಾರ ತೆಗೆದುಕೊಳ್ಳೋಕೆ ನೋಡ್ತಿದೆ ಅನ್ನೋ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ. ಪ್ರವಾದಿಯವರ ಘನತೆಗಾಗಿ ಹೋರಾಡಲು ಮುಂಬೈ, ದೆಹಲಿ, ಉತ್ತರಪ್ರದೇಶ ಮತ್ತು ಗುಜರಾತ್‌ನಲ್ಲಿ ಆತ್ಮಾಹುತಿ ದಾಳಿ ನಡೆಸೋದಾಗಿ AQIS ಅಂದ್ರೆ ಅಲ್‌ ಖೈದಾದ ಭಾರತ ಉಪಖಂಡ ವಿಭಾಗ ಬೆದರಿಕೆ ಒಡ್ಡಿದೆ. ಈ ಕುರಿತು AQIS ತನ್ನ ಮುಖವಾಣಿ ಅಸ್‌-ಸಾಹಬ್‌ ಮಿಡಿಯಾ ಮೂಲಕ ಜೂನ್‌. 6 ರಂದು ಬೆದರಿಕೆ ಪತ್ರವೊಂದನ್ನ ಬಿಡುಗಡೆ ಮಾಡಿದೆ ಅಂತ ವರದಿಯಾಗಿದೆ. ಅದ್ರಲ್ಲಿ, ಕಳೆದ ಕೆಲ ದಿನಗಳ ಹಿಂದೆ ಹಿಂದುತ್ವವಾದಿಯೊಬ್ರು ಟಿ.ವಿ ಚಾನೆಲ್‌ನಲ್ಲಿ ನಮ್ಮ ಮಾನವೀಯತೆಯ ಹೆಮ್ಮೆ ಪ್ರವಾದಿ ಮಹಮ್ಮದ್‌ ಅವ್ರನ್ನ ನಿಂದಿಸಿದ್ದಾರೆ. ಇವ್ರಿಗೆ ಯಾವುದೇ ಕ್ಷಮಾದಾನ ಇರುವದಿಲ್ಲ. ಯಾವುದೇ ಶಾಂತಿ, ವಿಷಾದ ಮಾತುಗಳು ಈ ವಿಚಾರವನ್ನ ಮುಕ್ತಾಯಗೊಳಿಸುವದಿಲ್ಲ. ಅವ್ರು ಮನೆ ಅಥವಾ ಸೈನ್ಯದ ಕೋಟೆ ಎಲ್ಲಿಯೇ ಅಡಗಿದರೂ ಸುಮ್ಮನೆ ಬಿಡುವುದಿಲ್ಲ. ನಮ್ಮ ಪ್ರೀತಿಯ ಪ್ರವಾದಿಯವ್ರನ್ನ ಅವಮಾನಿಸಿದವ್ರ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳದಿದ್ದರೆ ನಮ್ಮ ತಾಯಂದಿರು ನಮ್ಮನ್ನ ಬೇಕಾದ್ರೆ ಕಳೆದುಕೊಳ್ಳಲಿ. ಪ್ರವಾದಿಯವ್ರನ್ನ ಅವಮಾನಿಸಿದವ್ರ ಹತ್ಯೆ ಮಾಡುತ್ತೇವೆ. ಅವ್ರ ಮೇಲೆ ಪ್ರತೀಕಾರ ತೀರಿಸಿಕೊಳ್ಳಲು ನಮ್ಮ ಹಾಗೂ ನಮ್ಮ ಮಕ್ಕಳ ದೇಹದ ಮೇಲೆ ಸ್ಫೋಟಕಗಳನ್ನು ಹಾಕಿಕೊಳ್ಳಲು ಸಿದ್ದರಿದ್ದೇವೆ. ಮುಂಬೈ, ಉತ್ತರಪ್ರದೇಶ, ಗುಜರಾತ್‌, ದೆಹಲಿಯಲ್ಲಿರುವ ಕೇಸರಿ ಭಯೋತ್ಪಾದಕರು ತಮ್ಮ ಅಂತ್ಯಕ್ಕಾಗಿ ಕಾಯಬೇಕು ಅಂತ ಎಚ್ಚರಿಕೆ ನೀಡಿದೆ. ಇದ್ರ ಬೆನ್ನಲ್ಲೇ ಇದೀಗ ಕೇಂದ್ರ ಭದ್ರತಾ ಪಡೆಗಳು ಅಲರ್ಟ್‌ ಆಗಿದ್ದು, ರಾಜ್ಯಗಳಿಗೂ ಕೂಡ ಕಟ್ಟೆಚ್ಚರವಹಿಸುವಂತೆ ಸೂಚಿಸಲಾಗಿದೆ. ಅಂದ್ಹಾಗೆ ಇತ್ತೀಚೆಗೆ ತಾನೆ ಅಲ್‌-ಖೈದಾ ಭಾರತದ ಮೇಲೆ ಜಾಸ್ತಿ ಫೋಕಸ್‌ ಮಾಡ್ತಿದೆ, ಇದಕ್ಕೆ ತಾಲಿಬಾನ್‌ ಸರ್ಕಾರವೇ ಆಶ್ರಯ ಕೊಡ್ತಿದೆ ಅಂತ ವಿಶ್ವಸಂಸ್ಥೆಯ ವರದಿಯೊಂದು ಹೇಳಿತ್ತು. ಇನ್ನು ಅಲ್‌ ಖೈದಾ ಮುಖ್ಯಸ್ಥ, ಉಗ್ರ ಐಮನ್‌ ಮುಹಮದ್‌ ರಬಿ ಅಲ್‌-ಜವಾಹಿರಿ ಕೂಡ ಭಾರತದ ಹಿಜಾಬ್‌ ವಿಚಾರದ ಸಂಬಂಧ ವಿಡಿಯೋ ಮಾಡಿ ಬಿಟ್ಟಿದ್ದ. AQIS ಸದ್ಯಕ್ಕೆ ಅಫ್ಘಾನ್‌ನಲ್ಲಿ ಬೀಡು ಬಿಟ್ಟಿದ್ದು ಬಾಂಗ್ಲಾದೇಶ, ಭಾರತ, ಮಯನ್ಮಾರ್‌ ಮತ್ತು ಪಾಕಿಸ್ತಾನದಿಂದ ಉಗ್ರರನ್ನ ನೇಮಕ ಮಾಡಿಕೊಳ್ತಿದೆ.

-masthmagaa.com

Contact Us for Advertisement

Leave a Reply