masthmagaa.com:
ಭ್ರಷ್ಟಾಚಾರ ಆರೋಪ ಹೊತ್ತಿದ್ದ ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್ಮುಖ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ರಾಜೀನಾಮೆ ಪತ್ರದಲ್ಲಿ, ಈ ಸ್ಥಾನದಲ್ಲಿ ಮುಂದುವರಿಯಲು ನನಗೆ ನೈತಿಕ ಹಕ್ಕು ಕೂಡ ಇಲ್ಲ ಅಂತ ಉಲ್ಲೇಖಿಸಿದ್ದಾರೆ. ಅಂದ್ಹಾಗೆ ಅನಿಲ್ ದೇಶಮುಖ್ ವಿರುದ್ಧ 15 ದಿನಗಳ ಒಳಗೆ ಪ್ರಿಲಿಮಿನರಿ ಸಿಬಿಐ ತನಿಖೆ ನಡೆಸಬೇಕು ಅಂತ ಬಾಂಬೆ ಹೈಕೋರ್ಟ್ ಆದೇಶ ನೀಡಿದ ಬೆನ್ನಲ್ಲೇ ಸಚಿವ ಸ್ಥಾನಕ್ಕೆ ಅವರು ರಾಜೀನಾಮೆ ಕೊಟ್ಟಿದ್ದಾರೆ. ಇದೆಲ್ಲಾ ಶುರುವಾಗಿದ್ದು ಅಂಬಾನಿ ಮನೆ ಸಮೀಪ ಸ್ಫೋಟಕ ತುಂಬಿದ ಕಾರು ಪತ್ತೆಯಾದ ಪ್ರಕರಣದಿಂದ. ಅದಾದ ಬಳಿಕ ಸಾಕಷ್ಟು ಬೆಳವಣಿಗೆ ಆಯ್ತು.. ಕಾರಿನ ಮಾಲೀಕ ಮನ್ಸುಖ್ ಸಾವು, ಅದಾದ ಬಳಿಕ ಪೊಲೀಸ್ ಅಧಿಕಾರಿ ಸಚಿನ್ ವಾಜೆ ಬಂಧನ, ಅದಾದ ಬಳಿಕ ಮುಂಬೈನ ಮಾಜಿ ಪೊಲೀಸ್ ಕಮಿಷನರ್ ಪರಂಬೀರ್ ಸಿಂಗ್ರಿಂದ ಗೃಹ ಸಚಿವ ಅನಿಲ್ ದೇಶ್ಮುಖ್ ವಿರುದ್ಧ ಭ್ರಷ್ಟಾಚಾರ ಆರೋಪ, ಇತ್ಯಾದಿ. ಪ್ರತಿ ತಿಂಗಳು 100 ಕೋಟಿ ವಸೂಲಿ ಮಾಡಿ ಕೊಡುವಂತೆ ಅನಿಲ್ ದೇಶ್ಮುಖ್ ನಮಗೆ ಆದೇಶ ನೀಡಿದ್ದರು. ಅವರ ವಿರುದ್ಧ ಸಿಬಿಐ ತನಿಖೆ ನಡೆಸಬೇಕು ಅಂತ ಪರಂಬೀರ್ ಸಿಂಗ್ ಸುಪ್ರೀಂಕೋರ್ಟ್, ಹೈಕೋರ್ಟ್ಗೆಲ್ಲಾ ಹೋಗಿದ್ರು. ಇದೀಗ ಅವರ ಹೋರಾಟಕ್ಕೆ ಮೊದಲ ಗೆಲುವು ಸಿಕ್ಕಂತೆ ಕಾಣ್ತಿದೆ.
-masthmagaa.com
Contact Us for Advertisement