masthmagaa.com:
ದೇಶದ ರಾಜಕಾರಣದಲ್ಲಿ ಮತ್ತೆ ನೆಲೆ ಕಂಡುಕೊಳ್ಳಲು ಕಾಂಗ್ರೆಸ್ ಉದಯಪುರದಲ್ಲಿ ನಡೆಸ್ತಾ ಇರೋ ʻನವಸಂಕಲ್ಪ ಚಿಂತನ ಶಿಬಿರʼಕ್ಕೆ ಇವತ್ತು ತೆರೆಬಿದ್ದಿದೆ. ವಿವಿಧ ರಾಜ್ಯದ ಸುಮಾರು 400 ಜನ ಕಾಂಗ್ರೆಸ್ ಮುಖಂಡರು ಭಾಗಿಯಾಗಿದ್ದ ಈ ಶಿಬಿರದಲ್ಲಿ ಕಾಂಗ್ರೆಸ್ನ ಕಾರ್ಯಕಾರಿಣಿ ಸಮಿತಿ ನವಸಂಕಲ್ಪ ಅನ್ನೋ ನಿರ್ಣಯವನ್ನ ಘೋಷಿಸಿಕೊಂಡಿದೆ. ಇದ್ರಲ್ಲಿ ಒಬ್ಬ ವ್ಯಕ್ತಿ ಒಂದು ಹುದ್ದೆ, ಒಂದು ಕುಟುಂಬಕ್ಕೆ ಒಂದೇ ಟಿಕೆಟ್, 50 ವರ್ಷದ ಒಳಗಿನವರಿಗೆ ಪಕ್ಷದ ಸ್ಥಾನಗಳಲ್ಲಿ 50% ಪ್ರಾತಿನಿಧ್ಯ ಮತ್ತು ಇತರೆ ನಿಯಮಗಳನ್ನ ಕಾಂಗ್ರೆಸ್ ಅಳವಡಿಸಿಕೊಂಡಿದೆ. ಆದ್ರೆ ನಿನ್ನೆ ಹೇಳಿದಂತೆ ಒಂದು ಕುಟುಂಬ ಒಂದು ಟಿಕೆಟ್ ಅನ್ನೋದು ಕೇವಲ ನೆಪ ಮಾತ್ರಕ್ಕೆ ಆಗಿದ್ದು, ಕುಟುಂಬದ ಮತ್ತೊಬ್ಬ ವ್ಯಕ್ತಿ 5 ವರ್ಷ ಪಕ್ಷದಲ್ಲಿ ಸಕ್ರಿಯರಾಗಿದ್ರೆ ಅವ್ರಿಗೂ ಕೂಡ ಟಿಕೆಟ್ ನೀಡಲಾಗುತ್ತೆ ಅಂತ ಹೇಳಿಕೊಂಡಿದೆ. ಇನ್ನ ಲೋಕಸಭೆ ಮತ್ತು ವಿಧಾನಸಭೆಗೆ ಟಿಕೆಟ್ ನೀಡುವ ಅಧಿಕಾರವನ್ನ ಸಂಸದೀಯ ಮಂಡಳಿಗೆ ಬಿಡ್ಬೇಕು ಅಂದಿದ್ದ G-23 ರೆಬಲ್ ಕಾಂಗ್ರೆಸಿಗರ ಮಾತನ್ನ ಮಾತ್ರ CWC ಕಿವಿಗೆ ಹಾಕೊಂಡಿಲ್ಲ. ಇದ್ರಿಂದ ಅಧ್ಯಕ್ಷರ ಅಧಿಕಾರವನ್ನ ಮೊಟಕುಗೊಳಿಸಿದ ಹಾಗಾಗುತ್ತೆ ಅಂತ ಸಮಜಾಯಿಷಿ ನೀಡಿದೆ. ಇನ್ನ ಈ ಸಂದರ್ಭದಲ್ಲಿ ಮಾತಾಡಿರೋ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ನಾವು ಜನರ ಜೊತೆಗಿನ ಸಂಪರ್ಕವನ್ನ ಕಳೆದುಕೊಂಡಿದ್ದೇವೆ. ಇದನ್ನ ಪ್ರಾಮಾಣಿಕವಾಗಿ ಒಪ್ಕೋಬೇಕು. ಈಗ ಜನರ ಜೊತೆಗೆ ಮತ್ತೆ ಬೆರೆಯಲು ದಿನ, ವಾರಗಳ ಕಾಲ ಅಲ್ಲ ತಿಂಗಳುಗಟ್ಟಲೇ ಜನರ ಜೊತೆಗೆ ಇರಬೇಕು ಅಂತ ಹೇಳಿದ್ದಾರೆ. ಜೊತೆಗೆ ಅಕ್ಟೋಬರ್ 2 ರಿಂದ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ʻಭಾರತ ಜೋಡಣೆʼ ಯಾತ್ರೆಯನ್ನ ಶುರು ಮಾಡೋದಾಗಿ ಕೂಡ ಕಾಂಗ್ರೆಸ್ ಹೇಳಿಕೊಂಡಿದೆ. ಇನ್ನು ಈ ಸಭೆಯಲ್ಲಿ ಮಾತನಾಡಿರೋ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ನಾವು ಜಯಿಸ್ತೀವಿ ಅದೇ ನಮ್ಮ ಸಂಕಲ್ಪ ಅಂತ ಮೂರ್ಮೂರು ಸಲ ಹೇಳಿದ್ದಾರೆ.
-masthmagaa.com
Contact Us for Advertisement