masthmagaa.com:
ಸ್ಟಾರ್ಗಿರಿಯ ಹಂಬಲವಿಲ್ಲದೇ ಸದಾ ಹೊಸತನ್ನು ಪ್ರಯೋಗಿಸುತ್ತಾ, ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆಯನ್ನು ಸೃಷ್ಟಿಸಿದ್ದ ನಟ ಶಂಕರ್ನಾಗ್. ರಂಗಭೂಮಿಯ ಮೇಲಿನ ಪ್ರೀತಿಯಿಂದ ಬ್ಯಾಂಕ್ ಆಫ್ ಇಂಡಿಯಾ ನೌಕರಿಗೆ ಗುಡ್ ಬೈ ಹೇಳಿ ಸಿನಿಮಾದಲ್ಲಿ ತಮ್ಮನ್ನ ತಾವು ತೊಡಗಿಸಿಕೊಂಡ ಮಹಾನ್ ಪ್ರತಿಭೆ . ಇವರು ಬದುಕಿದ್ದು ಕೇವಲ 36 ವರ್ಷ ಮಾತ್ರ. ಇಷ್ಟು ಸಣ್ಣ ವಯಸ್ಸಿನಲ್ಲಿ ಅವರ ಸಾಧನೆ ಕೇಳಿದರೆ ಒಂದ್ ಸೆಕೆಂಡ್ ಶಾಕ್ ಆಗಿ ಬಿಡತ್ತೆ. ತಾವು ಬೆಳೆದಿದ್ದಲ್ಲದೇ ತಮ್ಮ ಸುತ್ತ ಮುತ್ತ ಇರುವವರನ್ನೂ ಬೆಳೆಸಬೇಕೆಂಬ ಇವರ ಗುಣದಿಂದಾನೇ ನಮ್ಮನ್ನೆಲ್ಲಾ ಅಗಲಿ 32 ವರ್ಷ ಕಳೆದ್ರು ಇನ್ನೂ ಇವರ ಹೆಸರು ಹಸಿರಾಗಿ ಉಳಿದಿದೆ. ಶಂಕರ್ ನಾಗ್ ಅವರು ಎಷ್ಟು ಮುಂದಾಲೋಚನೆ ಮಾಡ್ತಿದ್ರು, ಶಂಕರ್ ನಾಗ್ ಇದ್ದಿದ್ರೆ ಕರ್ನಾಟಕದಲ್ಲಿ ಒಂದೂ ಕೂಡ ಸ್ಲಮ್ ಇರ್ತಾ ಇರಲಿಲ್ಲ ಅಂತ ಸಿಹಿ ಕಹಿ ಚಂದ್ರು ಹೇಳಿದ್ದಾರೆ. ಹಾಗಾದ್ರೆ ಸ್ಲಮ್ ಮುಕ್ತ ಕರ್ನಾಟಕ ಮಾಡೋಕೆ ಶಂಕರ್ ನಾಗ್ ಅವರು ಯಾವ್ ರೀತಿ ಪ್ಲಾನ್ ಮಾಡಿದ್ರು ಅಂತ ನೋಡೋಣ ಬನ್ನಿ…..
ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಈ ಬಾರಿಯ ಅತಿಥಿಯಾಗಿ ಸಿಹಿ-ಕಹಿ ಚಂದ್ರು ಅವರು ಭಾಗವಹಿಸಿದ್ರು. ಕಾರ್ಯಕ್ರಮದಲ್ಲಿ ತಮ್ಮ ಸ್ಕೂಲ್, ಸಿನಿ ಜರ್ನಿ, ಜೀವನದಲ್ಲಿ ತಾವು ಕಂಡ ಮಹಾನ್ ಕಲಾವಿದರ ಬಗ್ಗೆ ಎಲ್ಲಾ ಮಾತನಾಡಿದ್ದಾರೆ. ಇದೇ ಸಮಯದಲ್ಲಿ ತಾವು ಕಂಡ ಅಪ್ರತಿಮ ಕಲೆ, ಬುದ್ದಿ, ಚಾಣಾಕ್ಷ್ಯತನ ಇರುವಂತ ವ್ಯಕ್ತಿ ಅಂದ್ರೆ ಅದು ಶಂಕರ್ ನಾಗ್ ಅಂತ ಹೇಳಿದ್ದಾರೆ. ಕರ್ನಾಟಕದಲ್ಲಿ ಸ್ಲಮ್ಗಳನ್ನ , ಗುಡಿಸಲುಗಳ ನಿರ್ಮೂಲನೆ ಮಾಡಬೇಕು ಅಂತ ಶಂಕರ್ನಾಗ್ ಅವರು ಯಾವ ರೀತಿ ಐಡಿಯಾ ಮಾಡಿದ್ರು ಅನ್ನೋ ಬಗ್ಗೆ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಮಾತನಾಡಿದ್ದಾರೆ.
ಒಮ್ಮೆ ಅವರೊಟ್ಟಿಗೆ ನರಸಿಂಹ ಹೆಸರಿನ ಸಿನಿಮಾದಲ್ಲಿ ನಟಿಸುತ್ತಿದ್ದೆ. ಇಬ್ಬರಿಗೂ ಸ್ವಲ್ಪ ಫ್ರೀ ಟೈಮ್ ಇತ್ತು. ಕೂಡಲೇ ಬಾರೋ ಹೊಸ ಮನೆ ಕಟ್ಟಿಸಿದ್ದೀನಿ ನಿನಗೆ ತೋರಿಸುತ್ತೀನಿ ನನ್ನ ಕರ್ಕೊಂಡು ಹೋದ್ರು. ದೊಡ್ಡ ನಟರಾಗಿದ್ದ ಅವರು ಯಾವುದೋ ದೊಡ್ಡ ಮನೆ ಕಟ್ಟಿದ್ದಾರೆ ಎಂದುಕೊಂಡು ಹೋಗಿ ನೋಡಿದ್ರೆ ಅಲ್ಲಿ ಸಣ್ಣ ಮನೆ ಇತ್ತು. ಒಂದು ಕೋಣೆಯ ಸರಳವಾದ ಮನೆ, ನನಗೆ ಶಾಕ್ ಆಗೋಯ್ತು. ”ಈ ಮನೆಯನ್ನು ಬರೀ ಎರಡು ದಿನದಲ್ಲಿ ಕಟ್ಟಿದ್ದೀವಿ, ರೆಡಿಮೇಡ್ ಬ್ಲಾಕ್ಸ್ಗಳನ್ನು ಬಳಸಿ ಕಟ್ಟಿರುವ ಮನೆ ಇದು. ಬ್ಲಾಕ್ಗಳನ್ನು ಇಟ್ಟು ರೂಫಿಂಗ್, ಫ್ಲೋರಿಂಗ್ ಹಾಕಿದರೆ ಮುಗಿಯಿತು. ಇದು ಜರ್ಮನಿಯ ತಂತ್ರಜ್ಞಾನ. ಇದನ್ನು ಕಟ್ಟಲು ಖರ್ಚಾಗಿರುವುದು ಹದಿನೈದು ಸಾವಿರ ರೂಪಾಯಿ ಅಷ್ಟೆ. ಇಂಥಹಾ ಸರಳ ಮನೆಯನ್ನು ರಾಜ್ಯದ ಎಲ್ಲಕಡೆ ಕಟ್ಟಿಸಬೇಕು ಅಂದುಕೊಂಡಿದ್ದೇನೆ. ಈ ತಂತ್ರಜ್ಞಾನ ಬಳಸಿ ಮನೆ ಕಟ್ಟಿಸಿದರೆ ರಾಜ್ಯದಲ್ಲಿರುವ ಸ್ಲಂಗಳೆಲ್ಲ ನಿರ್ಮೂಲನೆ ಆಗುತ್ತವೆ, ಗುಡಿಸಲು ವಾಸ ಎಂಬುದೇ ಇರಲ್ಲ. ಈ ಮನೆ ಕಟ್ಟಿಸಲು ಸರ್ಕಾರದಿಂದ ಹತ್ತುಸಾವಿರ ಸಬ್ಸಿಡಿ ಕೊಡಿಸಲು ಪ್ರಯತ್ನ ಮಾಡುತ್ತಿದ್ದೀನಿ ಎಂದರು ” ಅಂತ ಹೇಳಿದ್ದಾರೆ.
“ಅಂದು ಆಡಿದ ಮಾತು ನಾನು ಜೀವನದಲ್ಲಿ ಯಾವಾಗಲೂ ಮರೆಯೋದಿಲ್ಲ, ಆಗಿನ ಕಾಲಕ್ಕೆ ಅವರದ್ದುಆ ರೀತಿ ಯೋಚನೆ, ಆ ಯೋಜನೆ ಬಂದಿದ್ದರೆ ನಿಜವಾಗಿಯೂ ನಮ್ಮದು ಗುಡಿಸಲು ಮುಕ್ತ ರಾಜ್ಯವಾಗ್ತಿತ್ತು.” ಶಂಕರ್ನಾಗ್ ಇದ್ದಿದ್ದೇ ಹಾಗೆ ಸದಾ ಸಕ್ರಿಯ, ಕೆಲಸ ಮಾಡುವಾಗಲೂ ಚಟ-ಪಟ ಎನ್ನುತ್ತಾ ಕೆಲಸ ಮಾಡುತ್ತಿದ್ದರು ಅಂತ ಚಂದ್ರು ಹೇಳಿದ್ದಾರೆ.
ಸತ್ತ ಮೇಲೆ ಮಲಗೋದು ಇದ್ದಿದ್ದೇ, ಎದ್ದಿದ್ದಾಗ ಏನಾದ್ರೂ ಸಾಧಿಸು’ ಎನ್ನುತ್ತಿದ್ದ ಶಂಕರ್ಗೆ ಸಾಧಿಸುವುದು ಇನ್ನೂ ಬಹಳವಿತ್ತು. ಆದರೆ, ವಿಧಿ ಅವರನ್ನು ಬೇಗ ತನ್ನತ್ತ ಕರೆದುಕೊಂಡು ಬಿಟ್ಟಿತ್ತು.
-masthmagaa.com
Contact Us for Advertisement