masthmagaa.com:
ಇಸ್ರೇಲ್ – ಹಮಾಸ್ ನಡುವಿನ ಭೀಕರ ಕಾಳಗ 42ನೇ ದಿನಕ್ಕೆ ಕಾಲಿಟ್ಟಿದೆ. ಇದೀಗ ಇಸ್ರೇಲ್ ತನ್ನ ಕಾರ್ಯಾಚರಣೆಯನ್ನ ಉತ್ತರ ಗಾಜಾ ಪಟ್ಟಿಯಿಂದ ದಕ್ಷಿಣ ಗಾಜಾಪಟ್ಟಿಗೆ ವಿಸ್ತರಿಸೋಕೆ ಮುಂದಾಗಿದೆ. ಈ ಹಿನ್ನಲೆಯಲ್ಲಿ ದಕ್ಷಿಣ ಗಾಜಾದ ಖಾನ್ ಯೂನಿಸ್ನ ನಿವಾಸಿಗಳು ಅಲ್ಲಿಂದ ಜಾಗ ಖಾಲಿ ಮಾಡಿ ಅಂತ ಇಸ್ರೇಲ್ ಹೇಳಿದೆ. ನಿಮ್ಮ ಸೇಪ್ಟಿಗಾಗಿ ಈ ಕೂಡಲೇ ಎಲ್ಲರೂ ತಮ್ಮ ಮನೆಗಳನ್ನ ತೆರವುಗೊಳಿಸಿ ಅಲ್ಲಿಂದ ಸ್ಥಳಾಂತರಗೊಳ್ಳಬೇಕು ಅಂತ ಬರೆದಿರೋ ಕರಪತ್ರಗಳನ್ನ ಇಸ್ರೇಲ್ ವಾಯುಸೇನೆ ಗಾಜಾ ಪಟ್ಟಿಯಲ್ಲಿ ತಂದು ಹಾಕಿದೆ. ಜೊತೆಗೆ ಯಾರಾದ್ರು ಉಗ್ರರ ಹಾಗೂ ಅವರ ನೆಲೆಗಳ ಬಳಿಯಿದ್ರೆ ನಿಮ್ಮ ಜೀವಕ್ಕೆ ಅಪಾಯ ಉಂಟಾಗೋ ಸಾಧ್ಯತೆಯಿದೆ. ಯಾಕಂದ್ರೆ ಹಮಾಸ್ ಉಗ್ರರು ಬಳಸುತ್ತಿರೋ ಪ್ರತಿ ಸ್ಥಳ ಹಾಗೂ ಮನೆಗಳನ್ನ ಟಾರ್ಗೆಟ್ ಮಾಡಲಾಗುತ್ತೆ ಅಂತ ಕರಪತ್ರದಲ್ಲಿ ತಿಳಿಸಲಾಗಿದೆ. ಈ ಮೂಲಕ ಇಸ್ರೇಲ್ ಹಮಾಸ್ ಉಗ್ರರನ್ನ ಎಲ್ಲ ಕಡೆಯಿಂದಲೂ ಬಗ್ಗು ಬಡಿಯೋಕೆ ಸಜ್ಜಾಗಿದೆ ಎನ್ನಲಾಗ್ತಿದೆ.
ಇತ್ತ ಹಮಾಸ್ ಉಗ್ರರು ಗಾಜಾದ ಅಲ್ ಶಿಫಾ ಹಾಸ್ಪಿಟಲ್ನ್ನ ಕಮಾಂಡಿಂಗ್ ಸೆಂಟರ್ ರೀತಿ ಬಳಸಿಕೊಳ್ತಿದ್ರು. ಈ ಆಸ್ಪತ್ರೆಯ ಬೇಸ್ಮೆಂಟ್ ಒಳಗಿನಿಂದ ಉಗ್ರರ ಅಡಗುದಾಣಗಳಾದ ಟನಲ್ಗಳಿಗೆ ಲಿಂಕ್ ಇದೆ ಅಂತ ಇಸ್ರೇಲ್ ಆರೋಪ ಮಾಡ್ತಾ ಬರ್ತಿತ್ತು. ಅಲ್ದೆ ಅಮೆರಿಕ ಕೂಡ ನಮ್ಮ ಬಳಿಯೂ ಇದಕ್ಕೆ ಎವಿಡೆನ್ಸ್ ಇದೆ ಅಂತ ಹೇಳಿತ್ತು. ಇದೀಗ ಆಸ್ಪತ್ರೆಯಲ್ಲಿ ಕಾರ್ಯಾಚರಣೆ ಮುಂದುವರೆಸಿರೋ ಇಸ್ರೇಲ್ ಸೇನೆ ಟನಲ್ವೊಂದನ್ನ ಪತ್ತೆ ಮಾಡಿದೆ. ಜೊತೆಗೆ ಭಾರಿ ಪ್ರಮಾಣದ ಶಸ್ತ್ರಾಸ್ತ್ರಗಳು ಪತ್ತೆಯಾಗಿದ್ದು, ಹಮಾಸ್ ಉಗ್ರರು ತಮ್ಮ ಮಿಲಿಟರಿ ಆಪರೇಷನ್ಗಳ ಭಾಗವಾಗಿ ಮೆಡಿಕಲ್ ಫೆಸಿಲಿಟಿಸ್ನ್ನ ಹೇಗೆ ಯೂಸ್ ಮಾಡ್ತಿದ್ರು ಅನ್ನೋದು ಇದ್ರಿಂದ ಗೊತ್ತಾಗುತ್ತೆ ಅಂತ ಇಸ್ರೇಲ್ ಸೇನೆ ಹೇಳಿದೆ. ಅಷ್ಟೆ ಅಲ್ದೆ ಗಾಜಾದ ಇನ್ನೊಂದು ಆಸ್ಪತ್ರೆ ರಾಂಟಿಸಿಯಲ್ಲಿಯೂ ಮತ್ತೊಂದು ಟನಲ್ ಪತ್ತೆಯಾಗಿದ್ದು, ಅಲ್ಲಿಯೂ ಹೆಚ್ಚಿನ ಪ್ರಮಾಣದಲ್ಲಿ ಶಸ್ತ್ರಾಸ್ತ್ರಗಳು ಸಿಕ್ಕಿವೆ. ಅಲ್ದೆ ಈ ಹಮಾಸ್ ಉಗ್ರರು ರಾಕೆಟ್ಗಳು ಹಾಗೂ ಆ್ಯಂಟಿ ಟ್ಯಾಂಕ್ ಮಿಸೈಲ್ಗಳನ್ನ ಚಿಕ್ಕ ಬಾಲಕಿಯ ಬೆಡ್ ಹಾಗೂ ಬೇಬಿ ಸ್ಟ್ರಾಲರ್ಗಳಲ್ಲಿ ಇಟ್ಟಿದ್ದಾರೆ ಅಂತ ಇಸ್ರೇಲ್ ಸೇನೆ ಆರೋಪಿಸಿದೆ. ಇನ್ನು ಹಮಾಸ್ ಉಗ್ರರ ಟನಲ್ಗಳು ಪತ್ತೆಯಾದ ಬೆನ್ನಲ್ಲೇ ಅವುಗಳ ಒಳಗೆ ಸ್ಫೋಟಗೊಳ್ಳುವ ಜೆಲ್ಗಳನ್ನ ತುಂಬುತ್ತಿರೋದಾಗಿ ಇಸ್ರೇಲ್ ಸೇನಾಧಿಕಾರಿಯೊಬ್ರು ತಿಳಿಸಿದ್ದಾರೆ. ಇದೆಲ್ಲದರ ನಡುವೆ ಅಲ್ ಶಿಫಾ ಆಸ್ಪತ್ರೆ ಬಳಿ ಹಮಾಸ್ ಉಗ್ರರು ಒತ್ತೆಯಾಳಾಗಿಟ್ಟುಕೊಂಡಿದ್ದ ಮಹಿಳೆಯೊಬ್ರ ಮೃತದೇಹ ಸಿಕ್ಕಿದೆ ಅಂತ ಇಸ್ರೇಲ್ ಸೇನೆ ತಿಳಿಸಿದೆ. ಇನ್ನು ಈ ಎಲ್ಲಾ ಕಾರ್ಯಾಚರಣೆ ಹಾಗೂ ಫೈಂಡಿಂಗ್ಸ್ನ ವಿಡಿಯೋಗಳನ್ನ ಇಸ್ರೇಲ್ ರಿಲೀಸ್ ಮಾಡಿದೆ. ಆದ್ರೆ ಇಸ್ರೇಲ್ನ ಈ ಆರೋಪಗಳನ್ನ ಹಮಾಸ್ ತಳ್ಳಿಹಾಕಿದ್ದು, ಇದೆಲ್ಲಾ ಸುಳ್ಳು ಅಂತ ಹೇಳಿದೆ. ಜೊತೆಗೆ ಆಸ್ಪತ್ರೆ ಮೇಲಿನ ದಾಳಿಯನ್ನ ಹಮಾಸ್ ಖಂಡಿಸಿದೆ. ಇನ್ನೊಂದ್ ಕಡೆ ಹಮಾಸ್ ವಿರುದ್ಧದ ಯುದ್ಧದಲ್ಲಿ ನಾಗರಿಕರ ಸಾವುನೋವುಗಳನ್ನ ಕಡಿಮೆ ಮಾಡೋಕೆ ಪ್ರಯತ್ನಪಡ್ತಿದಿವಿ. ಅದ್ರೂ ಅದು ಸಕ್ಸಸ್ ಆಗ್ತಿಲ್ಲ, ಜನರ ಸಾವುನೋವುಗಳು ಉಂಟಾಗ್ತಿವೆ ಅಂತ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ.
ಮತ್ತೊಂದ್ ಕಡೆ ಇದೇ ವಿಚಾರವನ್ನ ಪ್ರಧಾನಿ ಮೋದಿಯವ್ರು ಖಂಡಿಸಿದ್ದಾರೆ. ಭಾರತ ಹೋಸ್ಟ್ ಮಾಡ್ತಿರೋ ಎರಡನೇ ವಾಯ್ಸ್ ಆಫ್ ಗ್ಲೋಬಲ್ ಸೌತ್ ಸಮಿಟ್ನ ಉದ್ಘಾಟನೆ ವೇಳೆ ವಿಡಿಯೋ ಕಾನ್ಫರೆನ್ಸ್ನಲ್ಲಿ ಮಾತಾಡಿರೋ ಮೋದಿ, ಪಶ್ಚಿಮ ಏಷ್ಯಾದಿಂದ ಹೊಸ ಚಾಲೆಂಜ್ಗಳು ಹುಟ್ಕೊಳ್ತಿರೋದನ್ನ ನಾವೆಲ್ರೂ ನೋಡ್ತಿದ್ದೇವೆ. ಅಕ್ಟೋಬರ್ 7ರಂದು ಇಸ್ರೇಲ್ ಮೇಲಿನ ಭಯೋತ್ಪಾದಕ ದಾಳಿಯನ್ನ ಭಾರತ ಖಂಡಿಸಿತ್ತು. ಜೊತೆಗೆ ನಾವು ರಾಜತಾಂತ್ರಿಕವಾಗಿ ಮಾತುಕತೆ ನಡೆಸೋಕೆ ಒತ್ತುಕೊಟ್ಟಿದ್ದೇವೆ. ಅಷ್ಟೆ ಅಲ್ದೆ ನಾವು ಈ ಯುದ್ಧದಿಂದ ಸಂಭವಿಸುತ್ತಿರೋ ನಾಗರಿಕರ ಸಾವನ್ನ ಬಲವಾಗಿ ಖಂಡಿಸುತ್ತೇವೆ ಅಂತ ಮೋದಿ ಹೇಳಿದ್ದಾರೆ. ಇನ್ನು ಪ್ಯಾಲಸ್ತೀನ್ ಅಧ್ಯಕ್ಷ ಮಹಮೌದ್ ಅಬ್ಬಾಸ್ ಜೊತೆ ಮಾತಾಡಿದ ಬಳಿಕ ನಾವು ಪ್ಯಾಲಸ್ತೀನ್ ಜನರಿಗೆ ಮಾನವೀಯ ನೆರವನ್ನೂ ಕಳಿಸಿಕೊಟ್ಟಿದ್ದೀವಿ. ಈಗ ಜಾಗತಿಕ ಒಳಿತಿಗಾಗಿ ಗ್ಲೋಬಲ್ ಸೌತ್ನ ರಾಷ್ಟ್ರಗಳು ಒಟ್ಟಾಗಬೇಕು ಅಂತ ಮೋದಿ ಕರೆ ಕೊಟ್ಟಿದ್ದಾರೆ. ಅಂದ್ಹಾಗೆ ಗ್ಲೋಬಲ್ ಸೌತ್ ರಾಷ್ಟ್ರಗಳು ಅಂದ್ರೆ ದಕ್ಷಿಣ ಗೋಳಾರ್ಧದಲ್ಲಿ ಬರೋ ಏಷ್ಯಾ, ಆಫ್ರಿಕಾ ಹಾಗೂ ದಕ್ಷಿಣ ಅಮೆರಿಕದ ಆರ್ಥಿಕವಾಗಿ ಮುಂದುವರೆಯುತ್ತಿರುವ ದೇಶಗಳು. ಅತ್ತ ಮಿಡಲ್ ಈಸ್ಟ್ನಲ್ಲಿ ಶಾಂತಿ ಸ್ಥಾಪನೆಗೆ ಸಂಬಂಧಿಸಿದಂತೆ ಯುದ್ಧದಲ್ಲಿ ಮಧ್ಯಸ್ಥಿಕೆ ವಹಿಸೋದ್ರಿಂದ ಹಿಡಿದು ಸಾಕಷ್ಟು ವಿಚಾರಗಳಲ್ಲಿ ಭಾರತ ಕೊಡುಗೆ ಕೊಡ್ಬೇಕು ಅಂತ ಇಸ್ರೇಲ್ ಅಧ್ಯಕ್ಷ ಇಸಾಕ್ ಹೆರ್ಜಾಗ್ ಹೇಳಿದ್ದಾರೆ. ಇಂಟರ್ವ್ಯೂ ಒಂದ್ರಲ್ಲಿ ಮಾತಾಡಿರೋ ಹೆರ್ಜಾಗ್, ವಿಶ್ವದಲ್ಲಿ ಭಾರತ ತುಂಬಾ ಪ್ರಮುಖ ರಾಷ್ಟ್ರವಾಗಿದೆ. ಯಾಕಂದ್ರೆ ಭಾರತ ಶಾಂತಿಯನ್ನ ಪ್ರತಿಪಾದಿಸುತ್ತೆ ಹಾಗೂ ಅತ್ಯಂತ ಪ್ರಭಾವಶಾಲಿ ಕೂಡ ಹೌದು ಅಂತ ನಾನು ನಂಬ್ತೀನಿ. ಅಲ್ದೆ ಭೂಮಿ ಮೇಲಿನ ಶ್ರೇಷ್ಠ ದೇಶಗಳಲ್ಲಿ ಭಾರತವೂ ಒಂದು. ಹೀಗಾಗಿ ಇಸ್ರೇಲ್ ಹಾಗೂ ಮಿಡಲ್ ಈಸ್ಟ್ನಲ್ಲಿ ಭದ್ರತೆ ಮತ್ತು ಶಾಂತಿಗಾಗಿ ತನ್ನ ಧ್ವನಿ ಎತ್ತೋದನ್ನ ಮುಂದುವರೆಸುತ್ತೆ ಅಂತ ನಾವು ಬಯಸುತ್ತೇವೆ ಅಂತ ಹೆರ್ಜಾಗ್ ಹೇಳಿದ್ದಾರೆ. ಇದೇ ವೇಳೆ ಯುದ್ಧದ ನಂತ್ರ ಗಾಜಾ ಪಟ್ಟಿ ಆಡಳಿತದ ಬಗ್ಗೆ ಮಾತಾಡಿರೋ ಹೆರ್ಜಾಗ್, ಖಚಿತವಾಗಿ ನನಗೆ ಈ ಬಗ್ಗೆ ಏನಾಗಬಹುದು ಅಂತ ಗೊತ್ತಿಲ್ಲ. ಆದ್ರೆ ಒಂದಂತೂ ಸತ್ಯ ಗಾಜಾ ಪಟ್ಟಿ ಸೇಫ್ ಹಾಗೂ ಶಾಂತಿಯುತ ಸ್ಥಳವಾಗಿ ಬದಲಾಗಲಿದೆ. ಜೊತೆಗೆ ಇಸ್ರೇಲ್ ಹಾಗೂ ಪ್ಯಾಲಸ್ತೈನ್ ನಡುವೆ ಮಾತುಕತೆಯಾಗಬಹುದು. ಅಥ್ವಾ ಮೆಡಿಟರೇನಿಯನ್ ಜೊತೆ ವ್ಯಾಪಾರ ನಡೆಸೋ ಬಗ್ಗೆ ಯೋಚನೆ ಮಾಡ್ಬಹುದು. ಅದೇನೆ ಇದ್ರು ಈ ಎಲ್ಲಾ ಐಡಿಯಾಗಳಿಗೆ ಭಾರತ ಕೊಡುಗೆ ನೀಡೋದು ತುಂಬಾ ಇದೆ ಅಂತ ಹೆರ್ಜಾಗ್ ಅಭಿಪ್ರಾಯಪಟ್ಟಿದ್ದಾರೆ.
ಆ ಕಡೆ ಈ ಭೀಕರ ಯುದ್ಧದಿಂದಾಗಿ ಗಾಜಾ ಜನರು ಹಸಿವಿನಿಂದ ಬಳಲುತ್ತಿದ್ದಾರೆ ಅಂತ ವಿಶ್ವಸಂಸ್ಥೆ ಹೇಳಿದೆ. ಚಳಿಗಾಲ ತೀವ್ರಗೊಳ್ತಿದೆ. ನಿರಾಶ್ರಿತರ ಕ್ಯಾಂಪ್ಗಳಲ್ಲಿ ಜನದಟ್ಟಣೆ ಹೆಚ್ಚಾಗ್ತಿದೆ. ಜನರಿಗೆ ಕುಡಿಯೋಕೆ ಸ್ವಚ್ಛ ನೀರು ಸಿಗ್ತಿಲ್ಲ. ಜೊತೆಗೆ ಆಹಾರದಲ್ಲೂ ಕೊರತೆಯುಂಟಾಗಿದ್ದು, ಗಾಜಾ ಜನರು ಹಸಿವಿನಿಂದ ಬಳಲೋ ಪರಿಸ್ಥಿತಿ ಉಂಟಾಗಿದೆ ಅಂತ ವಿಶ್ವಸಂಸ್ಥೆಯ ಫುಡ್ ಪ್ರೋಗ್ರಾಮ್ ಸಂಸ್ಥೆ ಕಳವಳ ವ್ಯಕ್ತಪಡಿಸಿದೆ.
-masthma
Contact Us for Advertisement