masthmagaa.com:
ಸಾರಿಗೆ ನೌಕರರು ಮತ್ತು ರಾಜ್ಯ ಸರ್ಕಾರ ನಡುವೆ ಇವತ್ತು ನಡೆದ ಸಂಧಾನ ಸಭೆ ಸಕ್ಸಸ್ ಆಗಿದೆ. ಹೀಗಾಗಿ ಇಂದು ರಾತ್ರಿಯಿಂದಲೇ KSRTC, BMTC ಸೇರಿದಂತೆ ನಾಲ್ಕೂ ನಿಗಮಗಳ ಬಸ್ಗಳು ರಸ್ತೆಗಿಳಿಯಲಿವೆ. ಈ ಮೂಲಕ 3 ದಿನಗಳಿಂದ ನಡೆಯುತ್ತಿದ್ದ ಸಾರಿಗೆ ನೌಕರರ ಮುಷ್ಕರ ಅಂತ್ಯವಾದಂತಾಗಿದೆ. ಈ ಬಗ್ಗೆ ಮಾತನಾಡಿದ ಸಾರಿಗೆ ನೌಕರರ ಮುಖಂಡರು, ‘ನಮ್ಮ ಬಹುತೇಕ ಬೇಡಿಕೆಗಳನ್ನ ಈಡೇರಿಸುವುದಾಗಿ ಸರ್ಕಾರ ಭರವಸೆ ನೀಡಿದೆ. ಇದಕ್ಕಾಗಿ ಸಾರಿಗೆ ಸಚಿವ ಲಕ್ಷ್ಮಣ ಸವದಿ, ಗೃಹ ಸಚಿವ ಬಸವರಾಜ ಬೊಮ್ಮಾಯಿ ಮತ್ತು ಕಂದಾಯ ಸಚಿವ ಆರ್. ಅಶೋಕ್ಗೆ ಅಭಿನಂದನೆಗಳು’ ಅಂತ ಹೇಳಿದ್ರು. ಸಾರಿಗೆ ಸಚಿವ ಲಕ್ಷ್ಮಣ ಸವದಿ ಮಾತನಾಡಿ, ‘3 ದಿನಗಳಿಂದ ನಡೆಯುತ್ತಿದ್ದ ಸಾರಿಗೆ ನೌಕರರ ಮುಷ್ಕರ ಅಂತ್ಯವಾಗಿದೆ. ಎಲ್ಲರನ್ನ ಕರೆಸಿ ಇವತ್ತು ಚರ್ಚೆ ಮಾಡಿದ್ದೇವೆ. ರಾತ್ರಿಯಿಂದಲೇ ಬಸ್ಗಳನ್ನ ರೋಡಿಗೆ ಇಳಿಸುತ್ತೇವೆ ಅನ್ನೋ ಭರವಸೆ ನೀಡಿದ್ದಾರೆ. ಸಾರಿಗೆ ನೌಕರರು 10-12 ಬೇಡಿಕೆಗಳನ್ನ ಇಟ್ಟಿದ್ರು. ಅದರಲ್ಲಿ ಸಮಂಜಸ ಎನ್ನುವಂತಹ ಬೇಡಿಕೆಗಳನ್ನ ಈಡೇರಿಸುತ್ತೇವೆ. ಸರ್ಕಾರಿ ನೌಕರರನ್ನಾಗಿ ಮಾಡಿ ಅನ್ನೋದು ಅವರ ಬೇಡಿಕೆ. ಆದ್ರೆ ಇವರನ್ನ ಮಾತ್ರವಲ್ಲ, 30-40 ನಿಗಮಗಳ ನೌಕರರನ್ನ ಕೂಡ ಸರ್ಕಾರಿ ನೌಕರರನ್ನಾಗಿ ಮಾಡಲು ಸಾಧ್ಯವಿಲ್ಲ ಅಂತ ನಾವು ಹೇಳಿದ್ದೇವೆ’ ಎಂದಿದ್ದಾರೆ.
ಸರ್ಕಾರ ನೀಡಿದ ಭರವಸೆಗಳು:
– ನಿಗಮ ಸಿಬ್ಬಂದಿಗೆ ಆರೋಗ್ಯ ಸಂಜೀವಿನಿ ವಿಮಾ ಯೋಜನೆ ಜಾರಿ ಮಾಡಲು ತೀರ್ಮಾನಿಸಲಾಗಿದೆ.
– ಕೊರೋನಾದಿಂದ ಮೃತಪಟ್ಟ ಸಿಬ್ಬಂದಿಯ ಕುಟುಂಬಸ್ಥರಿಗೆ 30 ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು.
– ಅಂತರ್-ನಿಗಮ ವರ್ಗಾವಣೆ ಕುರಿತು ಚರ್ಚಿಸಲು ಸಮಿತಿ ರಚನೆಗೆ ತೀರ್ಮಾನ.
– ತರಬೇತಿ ನೌಕರರ ಅವಧಿಯನ್ನ 2 ವರ್ಷದಿಂದ 1 ವರ್ಷಕ್ಕೆ ಇಳಿಸಲಾಗಿದೆ.
– ನಿಗಮದಲ್ಲಿ HRMS ವ್ಯವಸ್ಥೆ ಜಾರಿ ಮಾಡಲಾಗುವುದು.
– ಸಿಬ್ಬಂದಿ ಕರ್ತವ್ಯ ನಿರ್ವಹಿಸುವ ಸಂದರ್ಭದಲ್ಲಿ ನೀಡುತ್ತಿದ್ದ ಭತ್ಯೆಯನ್ನ ಕೊರೋನಾ ಸಂದರ್ಭದಲ್ಲಿ ನಿಲ್ಲಿಸಲಾಗಿತ್ತು. ಅದನ್ನ ಜನವರಿ ನಂತರ ಮುಂದುವರಿಸಲಾಗುತ್ತೆ.
– ಘಟಕ ವ್ಯಾಪ್ತಿಯಲ್ಲಿ ಮೇಲಾಧಿಕಾರಿಗಳಿಂದ ಕಿರುಕುಳ ತಪ್ಪಿಸಲು ಸಮಿತಿ ರಚಿಸಿ ಕ್ರಮ ಕೈಗೊಳ್ಳಲಾಗುವುದು.
– ಸಾರಿಗೆ ನೌಕರರ ವೇತನಕ್ಕೆ ಸಂಬಂಧಿಸಿದಂತೆ 6ನೇ ವೇತನ ಆಯೋಗದ ಶಿಫಾರಸು ಜಾರಿ ಮಾಡುವ ಕುರಿತು ಸರ್ಕಾರದ ಆರ್ಥಿಕ ಪರಿಸ್ಥಿತಿ ನೋಡಿಕೊಂಡು ಸಮಿತಿ ರಚಿಸಿ ತೀರ್ಮಾನಿಸಲಾಗುವುದು.
-masthmagaa.com
Contact Us for Advertisement