ರೆಬಲ್ ಸ್ಟಾರ್ ಅಂಬರೀಶ್‌ ಸ್ಮಾರಕ ಮಾರ್ಚ್ 27 ಕ್ಕೆ ಲೋಕಾರ್ಪಣೆ !

masthmagaa.com:

ರೆಬಲ್ ಸ್ಟಾರ್ ಅಂಬರೀಶ್ ಅವರ ಸ್ಮಾರಕವನ್ನು ಮಾರ್ಚ್ 27 ರಂದು ಲೋಕಾರ್ಪಣೆ ಮಾಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದ ಉದ್ಘಾಟನೆಯ ಸಮಾರಂಭದಲ್ಲಿ ಮಾತನಾಡಿದ ಅವರು, ‘ನನ್ನ ನೆಚ್ಚಿನ ಗೆಳೆಯ ಅಂಬರೀಶ್ ಅವರ ಸ್ಮಾರಕವನ್ನು ಇದೇ ಮಾರ್ಚ್ 27ಕ್ಕೆ ಉದ್ಘಾಟನೆ ಮಾಡಲಿದ್ದೇನೆ’ ಎಂದು ಘೋಷಿಸಿದರು.

ಕೇವಲ ಸ್ಮಾರಕ ಮಾತ್ರವಲ್ಲ ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಗೆ ಅಂಬರೀಶ್ ಅವರ ಹೆಸರನ್ನು ಅಂದೇ ಇಡುವುದಾಗಿಯೂ ತಿಳಿಸಿದರು. ‘ಅಂಬರೀಶ್ ಗೆ ರೇಸ್ ಕೋರ್ಸ್ ರಸ್ತೆ ಅಂದರೆ ತುಂಬಾ ಇಷ್ಟ. ಸದಾ ಪ್ರತಿಷ್ಠಿತ ಹೋಟೆಲ್ ನಲ್ಲಿ ವಾಸ್ತವ್ಯ ಹೂಡುತ್ತಿದ್ದ. ಗೆಳೆಯರ ಹೆಸರು ಗೊತ್ತಿರುತ್ತಿತ್ತೋ ಇಲ್ಲವೋ, ಕುದುರೆ ಹೆಸರು ಮಾತ್ರ ಗೊತ್ತಿರುತ್ತಿತ್ತು’ ಎಂದು ಸಿಎಂ ತಮಾಷೆಯಾಗಿ ಅಂಬರೀಶ್ ಅವರನ್ನು ನೆನಪಿಸಿಕೊಂಡರು.
ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಅಂಬರೀಶ್ ಸ್ಮಾರಕ ತಲೆಯೆತ್ತಿದೆ. ವಿಶೇಷ ವಿನ್ಯಾಸದಲ್ಲಿ ಸ್ಮಾರಕವನ್ನು ನಿರ್ಮಾಣ ಮಾಡಲಾಗಿದೆ. ಈಗಾಗಲೇ ಸ್ಮಾರಕದ ಬಹುತೇಕ ಕೆಲಸಗಳು ಕೂಡ ಮುಗಿದಿವೆ. ಉದ್ಘಾಟನೆಗೆ ಈಗ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕಂದಾಯ ಸಚಿವ ಆರ್. ಅಶೋಕ್, ತೋಟಗಾರಿಕಾ ಸಚಿವ ಮುನಿರತ್ನ ಸೇರಿದಂತೆ ಹಲವರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

ಡಾ.ರಾಜ್ ಕುಮಾರ್ ಸ್ಮಾರಕದ ಕೂಗಳತೆಯಲ್ಲಿಯೇ ಅಂಬರೀಶ್ ಸ್ಮಾರಕವಿದೆ. ಅಲ್ಲದೇ ಕೆಲವೇ ತಿಂಗಳಲ್ಲಿ ಪುನೀತ್ ರಾಜ್ ಕುಮಾರ್ ಸ್ಮಾರಕಕ್ಕೂ ಸರಕಾರ ಮುಂದಾಗಲಿದೆಯಂತೆ. ಅಲ್ಲಿಗೇ ಪಕ್ಕಪಕ್ಕದಲ್ಲೇ ಮೂರು ಸ್ಮಾರಕಗಳು ತಲೆಯೆತ್ತಲಿವೆ.

-masthmagaa.com

Contact Us for Advertisement

Leave a Reply