masthmagaa.com:
ತಮಿಳುನಾಡು: ಚಿನ್ನಮ್ಮ ಶಶಿಕಲಾ ಹಲವು ಸಮಯದ ಬಳಿಕ ತಮಿಳುನಾಡಿಗೆ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದಾರೆ. ಹೊಸೂರು ದಾಟುತ್ತಲೇ ಮಾರಿಯಮ್ಮನ ದೇಗುಲಕ್ಕೆ ಹೋಗಿ ದೇವರ ದರ್ಶನ ಮಾಡಿದ್ರು. ಈ ವೇಳೆ ಮಾರ್ಗಮಧ್ಯದ ಜೂಜುವಾಡಿ ಚೆಕ್ಪೋಸ್ಟ್ ಬಳಿ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಜಮಾಯಿಸಿದ್ರು. ಶಶಿಕಲಾ ಅವರಿದ್ದ ಕಾರಿನ ಮೇಲೆ ಹೂಮಳೆ ಸುರಿಸಿ ಸಂತಸ ವ್ಯಕ್ತಪಡಿಸಿದ್ರು. ಕಾರಿನಲ್ಲಿ ಎಡಿಎಂಕೆ ಬಾವುಟ ಮತ್ತು ಜಯಲಲಿತಾ ಫೋಟೋ ಕೂಡ ಹಾಕಲಾಗಿತ್ತು. ಬಾವುಟ ಬಳಸಬಾರದು, ಶಶಿಕಲಾರನ್ನು ಈಗಾಗಲೇ ಎಡಿಎಂಕೆ ಪಕ್ಷದಿಂದಲೇ ತೆಗೆದು ಹಾಕಲಾಗಿದೆ. ಶಶಿಕಲಾ ಈಗ ಎಡಿಎಂಕೆ ಸದಸ್ಯರೂ ಅಲ್ಲ ಅಂತ ಆಡಳಿತಾರೂಢ ಎಡಿಎಂಕೆ ಈಗಾಗಲೇ ದೂರು ನೀಡಿದೆ. ಆದ್ರೆ ಈ ಬಗ್ಗೆ ಪ್ರತಿಕ್ರಿಯಿಸಿರುವ ಶಶಿಕಲಾ ಪರ ವಕೀಲ, ನಾವು ಬಾವುಟ ವಿಚಾರವನ್ನು ಕೋರ್ಟ್ನಲ್ಲಿ ಎದುರಿಸುತ್ತೇವೆ ಅಂತ ಹೇಳಿದ್ದಾರೆ.
ಈ ನಡುವೆ ರೆಸಾರ್ಟ್ನಲ್ಲೇ ಶಶಿಕಲಾ ತಮಿಳುನಾಡು ಸರ್ಕಾರದ ಮೂವರು ಸಚಿವರ ಮತ್ತು ಶಾಸಕರ ಜೊತೆ ಮಾತುಕತೆ ನಡೆಸಿದ್ದಾರೆ ಅಂತ ಹೇಳಲಾಗ್ತಿದೆ. ಇತ್ತೀಚೆಗಷ್ಟೇ ಜೈಲಿನಿಂದ ಬಿಡುಡೆಯಾಗಿದ್ದ ಶಶಿಕಲಾಗೆ ಕೊರೋನಾ ಸೋಂಕು ತಗುಲಿತ್ತು. ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಬಳಿಕ ನಂದಿ ಬೆಟ್ಟದ ಬಳಿಯ ರೆಸಾರ್ಟ್ನಲ್ಲಿದ್ರು. ಇದೀಗ ತಮಿಳುನಾಡಿಗೆ ಎಂಟ್ರಿ ಕೊಟ್ಟಿದ್ದು, ವಿಧಾನಸಭೆ ಚುನಾವಣೆ ಕಾವು ಮತ್ತಷ್ಟು ಜಾಸ್ತಿಯಾಗಲಿದೆ.
ಚಿನ್ನಮ್ಮನ ಈ ಗ್ರ್ಯಾಂಡ್ ಎಂಟ್ರಿಯಿಂದಾಗಿ ಅತ್ತಿಬೆಲೆಯಲ್ಲಿ ಭಾರಿ ಟ್ರಾಫಿಕ್ ಜಾಮ್ ಉಂಟಾಯ್ತು. ಗಂಟೆಗಟ್ಟಲೆ ವಾಹನಗಳು ನಿಂತಲ್ಲೇ ನಿಂತು ಜನ ಪರದಾಡಿದ್ರು. ಕೃಷ್ಣಗಿರಿ ಟೋಲ್ಗೇಟ್ ಹತ್ತಿರ ಪಟಾಕಿ ಸಿಡಿದು ಶಶಿಕಲಾ ಬೆಂಬಲಿಗರ ಎರಡು ಕಾರುಗಳು ಬೆಂಕಿಗಾಹುತಿಯಾಗಿವೆ.
-masthmagaa.com
Contact Us for Advertisement