ಪಾಲ್​​ಘರ್ ಬಳಿಕ ಉತ್ತರ ಪ್ರದೇಶದಲ್ಲಿ ಇಬ್ಬರು ಸಾಧುಗಳ ಹತ್ಯೆ..!

masthmagaa.com:

ಉತ್ತರ ಪ್ರದೇಶ: ಮಹಾರಾಷ್ಟ್ರದ ಪಾಲ್​ಘರ್​​ನಲ್ಲಿ ಸಾಧುಗಳ ಹತ್ಯೆ ಬೆನ್ನಲ್ಲೇ ಉತ್ತರ ಪ್ರದೇಶದಲ್ಲೂ ಅಂತಹದ್ದೇ ಘಟನೆ ವರದಿಯಾಗಿದೆ. ಬುಲಂದ್ ಶಹರ್​ ಜಿಲ್ಲೆಯ ಅನೂಪ್​​​ಶಹರ್​​ನ ಪಗೋನಾ ಗ್ರಾಮದಲ್ಲಿ ಇಬ್ಬರು ಸಾಧುಗಳನ್ನು ಹತ್ಯೆ ಮಾಡಲಾಗಿದೆ. ದೇವಸ್ಥಾನದಲ್ಲಿ ಮಲಗಿದ್ದಾಗ ಬಂದ ದುಷ್ಕರ್ಮಿಯೊಬ್ಬ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಂದಿದ್ದಾನೆ. ಆದ್ರೆ ಗ್ರಾಮಸ್ಥರು ಆರೋಪಿಯನ್ನು ಹಿಡಿದು, ಪೊಲೀಸರಿಗೆ ಒಪ್ಪಿಸಿದ್ದಾರೆ.

ಗ್ರಾಮದಲ್ಲಿ ಒಂದು ಶಿವ ಮಂದಿರವಿದ್ದು, 55 ವರ್ಷದ ಸಾಧು ಜಗನ್​ದಾಸ್ ಮತ್ತು 35 ವರ್ಷದ ಸಾಧು ಸೇವಾದಾಸ್ ಇಲ್ಲಿ ವಾಸವಾಗಿದ್ದರು. ಆದ್ರೆ ನಿನ್ನೆ ರಾತ್ರಿ ಇವರನ್ನು ಹತ್ಯೆ ಮಾಡಲಾಗಿದೆ. ಇಂದು ಬೆಳಗ್ಗೆ ಸಾಧುಗಳ ಹತ್ಯೆಯಾಗಿರೋದನ್ನು ಗಮನಿಸಿದ ಗ್ರಾಮಸ್ಥರು, ಉದ್ರಿಕ್ತರಾಗಿದ್ದಾರೆ. ಈ ವೇಳೆ ಗ್ರಾಮದ ವ್ಯಕ್ತಿಯೊಬ್ಬರ ಮೇಲೆ ಜನರಿಗೆ ಅನುಮಾನ ಬಂದಿದ್ದು, ಹಿಡಿದು ಹಿಗ್ಗಾಮುಗ್ಗ ಥಳಿಸಿದ್ದಾರೆ. ನಂತರ ವಿಚಾರ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಹತ್ಯೆಗೆ ಕಾರಣವೇನು ಅನ್ನೋ ಮಾಹಿತಿ  ಲಭ್ಯವಾಗಿಲ್ಲ.

ಇತ್ತೀಚೆಗಷ್ಟೇ ಮಹಾರಾಷ್ಟ್ರದ ಪಾಲ್​ಘರ್​ನಲ್ಲಿ ಇಬ್ಬರು ಸಾಧುಗಳು ಮತ್ತು ಅವರ ಕಾರು ಚಾಲಕನನ್ನು ಹತ್ಯೆ ಮಾಡಲಾಗಿತ್ತು. ಮಕ್ಕಳನ್ನು ಅಪಹರಿಸಿ ಕಿಡ್ನಿ ಮಾರುತ್ತಾರೆ ಅನ್ನೋ ವದಂತಿ ಹಿನ್ನೆಲೆ ಗಡ್​ಚಿಂಚಲೆ ಗ್ರಾಮಸ್ಥರು ಈ ಕೃತ್ಯ ಎಸಗಿದ್ದರು.

-masthmagaa.com

Contact Us for Advertisement

Leave a Reply