masthmagaa.com:
ಭಾರತ-ಚೀನಾ ನಡುವೆ ಲಡಾಖ್ ಪೂರ್ವ ಭಾಗದಲ್ಲಿ ಸಂಘರ್ಷದ ವಾತಾವರಣ ನಿರ್ಮಾಣವಾಗಿರುವ ನಡುವೆಯೇ, ‘ಯಾವುದೇ ದೇಶದೊಂದಿಗೆ ಶೀತಲ ಸಮರವಾಗಲೀ ಅಥವಾ ಯುದ್ಧವಾಗಲೀ ಮಾಡಲು ನಮಗೆ ಇಷ್ಟವಿಲ್ಲ’ ಅಂತ ಚೀನಾ ಅಧ್ಯಕ್ಷ ಷಿ ಜಿನ್ಪಿಂಗ್ ಹೇಳಿದ್ದಾರೆ. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ 75ನೇ ಅಧಿವೇಶನದ ಸಾಮಾನ್ಯ ಚರ್ಚೆಯನ್ನು ಉದ್ದೇಶಿಸಿ ಮಾತನಾಡಿದ ಜಿನ್ಪಿಂಗ್, ‘ಚೀನಾ ಯಾವತ್ತು ವಿಸ್ತರಣಾವಾದ ಅನುಸರಿಸಿಲ್ಲ. ನಾವು ಬೇರೆ ದೇಶಗಳೊಂದಿಗಿನ ಭಿನ್ನಾಭಿಪ್ರಾಯಗಳನ್ನು ಕಡಿಮೆ ಮಾಡಲು ಮತ್ತು ವಿವಾದವನ್ನು ಬಗೆಹರಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೇವೆ. ಯುದ್ಧ ಮಾಡೋದು ನಮ್ಮ ಉದ್ದೇಶವಲ್ಲ’ ಅಂತ ಹೇಳಿದ್ದಾರೆ.
ಜುಲೈ 4ರಂದು ಲಡಾಖ್ಗೆ ದಿಢೀರ್ ಭೇಟಿ ನೀಡಿದ್ದ ಪ್ರಧಾನಿ ಮೋದಿ, ವಿಸ್ತರಣಾವಾದ ಅಂತ್ಯವಾಗಿದೆ. ವಿಸ್ತರಣಾವಾದ ಅನುಸರಿಸಿದವರು ಸೋಲು ಅನುಭವಿಸಿದ್ದಕ್ಕೆ ಇತಿಹಾಸದಲ್ಲಿ ಸಾಕ್ಷ್ಯವಿದೆ ಎನ್ನುವ ಮೂಲಕ ಗಡಿಯಲ್ಲಿ ತಂಟೆ ಮಾಡುತ್ತಿರುವ ಚೀನಾಗೆ ಟಾಂಗ್ ಕೊಟ್ಟಿದ್ದರು. ಮೋದಿಯ ಆ ಹೇಳಿಕೆಗೆ ಜಿನ್ಪಿಂಗ್ ಈ ರೀತಿ ಪ್ರತಿಕ್ರಿಯೆ ಕೊಟ್ಟಂತೆ ಕಾಣುತ್ತಿದೆ.
ಚೀನಾದಲ್ಲಿ ಅಧಿಕಾರದಲ್ಲಿರುವ ಕಮ್ಯುನಿಸ್ಟ್ ಪಾರ್ಟಿ ಆಫ್ ಚೀನಾ (CPL) ಮತ್ತು ಚೀನಾ ಸೇನೆಯ ಕಮಾಂಡರ್-ಇನ್-ಚೀಫ್ ಕೂಡ ಆಗಿದ್ದಾರೆ ಷಿ ಜಿನ್ಪಿಂಗ್. ಕೊರೋನಾ ಬಗ್ಗೆಯೂ ಮಾತನಾಡಿದ ಅವರು, ಕೊರೋನಾ ವಿಚಾರದಲ್ಲಿ ಚೀನಾವನ್ನು ಟೀಕಿಸುತ್ತಿರುವುದು ಸರಿಯಲ್ಲ ಅಂತ ಹೇಳಿದ್ದಾರೆ.
ನಿನ್ನೆಯಷ್ಟೇ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ 75ನೇ ಅಧಿವೇಶನದ ಸಾಮಾನ್ಯ ಚರ್ಚೆಯನ್ನು ಉದ್ದೇಶಿಸಿ ಮಾತನಾಡಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಕೊರೋನಾ ವೈರಸ್ ಅನ್ನು ಚೀನಾ ವೈರಸ್ ಅಂತ ಕರೆದಿದ್ದರು. ಜೊತೆಗೆ ವೈರಾಣು ಮೊದಲು ಕಾಣಿಸಿಕೊಂಡಾಗ ಅದನ್ನು ನಿಭಾಯಿಸಲು ವಿಫಲವಾದ ಮತ್ತು ಬಳಿಕ ವೈರಾಣು ಜಗತ್ತಿನಾದ್ಯಂತ ಹರಡಲು ಚೀನಾವನ್ನೇ ಹೊಣೆಗಾರನನ್ನಾಗಿ ಮಾಡಬೇಕು ಅಂದಿದ್ದರು.
-masthmagaa.com
Contact Us for Advertisement