masthmagaa.com:
ಒಂದ್ಕಡೆ ಪ್ರವಾಹ.. ಮತ್ತೊಂದ್ಕಡೆ ಕೊರೋನಾದ ಆರದ ಗಾಯ.. ಇವೆಲ್ಲದ್ರ ನಡುವೆ ರಾಜ್ಯದಲ್ಲಿ ರಾಜಕೀಯ ಜೋರಾಗಿದೆ. ಇಷ್ಟು ದಿನ ಸಿಎಂ ಕುರ್ಚಿಯ ಸುತ್ತ ಇದ್ದ ರಾಜಕೀಯ ಈಗ ಸಂಪುಟದತ್ತ ತಿರುಗಿದೆ. ನಿನ್ನೆ ಮೊನ್ನೆ ದೆಹಲಿಯಲ್ಲಿ ಬೀಡು ಬಿಟ್ಟು ವಿವಿಧ ರಾಷ್ಟ್ರೀಯ ನಾಯಕರನ್ನು ಭೇಟಿಯಾಗಿದ್ದ ಬಸವರಾಜ್ ಬೊಮ್ಮಾಯಿ ಬೆಂಗಳೂರಿಗೆ ವಾಪಸ್ ಆಗಿದ್ರು. ಆದ್ರೆ ಸಚಿವ ಸಂಪುಟ ಕುರಿತು ಯಾವುದೇ ನಿರ್ಧಾರವಾಗಿಲ್ಲ ಅಂತ ಹೇಳಿದ್ರು. ಆದ್ರೆ ಇವತ್ತು ಸಂಜೆ 5.45ಕ್ಕೆ ಮತ್ತೆ ದೆಹಲಿಯತ್ತ ಪ್ರಯಾಣ ಮಾಡಿದ್ದಾರೆ. ರಾತ್ರಿ ಕರ್ನಾಟಕ ಭವನದಲ್ಲೇ ಉಳಿಯಲಿರುವ ಅವರು, ನಾಳೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರನ್ನು ಭೇಟಿಯಾಗಲಿದ್ದಾರೆ. ಈಗಾಗಲೇ ತಾವು ಒಂದು ಲಿಸ್ಟ್ ರೆಡಿ ಮಾಡಿ ತಗೊಂಡು ಹೋಗಿದ್ದು, ಅದನ್ನು ಜೆಪಿ ನಡ್ಡಾ ಅವರ ಮುಂದಿಟ್ಟು ಅದಕ್ಕೆ ಗ್ರೀನ್ ಸಿಗ್ನಲ್ ಪಡೆಯೋ ಸಾಧ್ಯತೆ ಇದೆ. ಬಹುತೇಕ ನಾಳೆಯೇ ವಾಪಸ್ ಆಗಲಿದ್ದು, ಮಂಗಳವಾರ ಅಥವಾ ಬುಧವಾರ ಸಂಪುಟ ರಚನೆಯಾಗುತ್ತೆ ಅಂತ ಮೂಲಗಳು ತಿಳಿಸಿದೆ. ಇನ್ನು ಬೆಂಗಳೂರಿಗೆ ಆಗಮಿಸಿದ ಬಸವರಾಜ್ ಬೊಮ್ಮಾಯಿ ಇವತ್ತು ಮಾಜಿ ಸಿಎಂ ಯಡಿಯೂರಪ್ಪರನ್ನು ಕೂಡ ಭೇಟಿಯಾಗಿ ಚರ್ಚಿಸಿದ್ರು. ಈ ವೇಳೆ ಸಚಿವ ಸಂಪುಟದ ಬಗ್ಗೆಯೇ ಚರ್ಚೆ ನಡೆದಿದೆ ಅಂತ ಕೂಡ ಮಾಹಿತಿ ಸಿಕ್ಕಿದೆ. ಈ ನಡುವೆ ಸಿಎಂ ಬಸವರಾಜ್ ಬೊಮ್ಮಾಯಿ ಮತ್ತು ಯಡಿಯೂರಪ್ಪರ ಮನೆಗೆ ಸಚಿವ ಸ್ಥಾನದ ಆಕಾಂಕ್ಷಿಗಳು ಭೇಟಿ ನೀಡಿದ್ದು ಕೂಡ ಕಂಡು ಬಂತು.
ಸಿಎಂ ಆದ್ಮೇಲೆ ಇದೇ ಮೊದಲ ಬಾರಿಗೆ ಬಸವರಾಜ್ ಬೊಮ್ಮಾಯಿ ಮಾಜಿ ಪ್ರಧಾನಿ ದೇವೇಗೌಡರನ್ನು ಭೇಯಾಗಿ, ಆಶೀರ್ವಾದ ಪಡೆದ್ರು. ಈ ವೇಳೆ ಸೋಮಣ್ಣ ಮತ್ತು ರೇವಣ್ಣ ಕೂಡ ಅಲ್ಲಿರೋದು ಕಂಡು ಬಂತು. ಅಂದಹಾಗೆ ಈ ಹಿಂದೆ ಜನತಾ ದಳದಲ್ಲಿ ಬಸವರಾಜ್ ಬೊಮ್ಮಾಯಿಯವ್ರು ದೇವೇಗೌಡರ ಜೊತೆಗೇ ಇದ್ದಿದ್ದನ್ನು ಇಲ್ಲಿ ನೆನಪು ಮಾಡಿಕೊಳ್ಳಬಹುದು.
-masthmagaa.com
Contact Us for Advertisement