masthmagaa.com:
‘ಆತ್ಮಹತ್ಯೆ ಮಾಡಿಕೊಳ್ಳುವ ರೈತರು ಹೇಡಿಗಳು’ ಅಂತ ಕೃಷಿ ಸಚಿವ ಬಿ.ಸಿ. ಪಾಟೀಲ್ ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದಾರೆ. ಕೊಡಗು ಜಿಲ್ಲೆಯ ಪೊನ್ನಂಪೇಟೆಯಲ್ಲಿ ನಡೆದ ರೈತ ಕಾರ್ಯಕ್ರಮದಲ್ಲಿ ಮಾತನಾಡಿದ ಬಿ.ಸಿ. ಪಾಟೀಲ್, ‘ಹೆಣ್ಣು ಮಗಳೊಬ್ಬಳು ಕೈತುಂಬಾ ಬಂಗಾರದ ಬಳೆ ಹಾಕಿಕೊಂಡಿದ್ದಳು. ನಾನ್ ಕೇಳ್ದೆ, ಏನಮ್ಮಾ ಕೈತುಂಬಾ ಬಂಗಾರದ ಬಳೆ ಹಾಕ್ಕೊಂಡಿದಿಯಾ, ಎಲ್ಲಿಂದ ಬಂತು ನಿಂಗೆ ದುಡ್ಡು ಅಂತ. ಆಕೆ ಏನ್ ಹೇಳಿದ್ಲು ಗೊತ್ತಾ, ಈ ಭೂಮಿ ಸ್ವಾಮಿ. ಈ ಭೂಮಿಯಲ್ಲಿ ಕಷ್ಟಪಟ್ಟು 35 ವರ್ಷ ದುಡಿದಿದ್ದೇನೆ. ಈ ಭೂಮಿ ತಾಯಿ ಕೊಟ್ಟಿದ್ದಾಳೆ ಅಂತ ಹೇಳಿದ್ಲು. ಒಬ್ಬ ಹೆಣ್ಣು ಮಗಳು ಈ ರೀತಿ ಹೇಳ್ತಾಳೆ ಅಂದ್ರೆ ನಿಮಗೆ ಖುಷಿಯಾಗಲ್ವಾ. ಆತ್ಮಹತ್ಯೆ ಮಾಡಿಕೊಳ್ಳುವವರಿಗೆ ಇದೊಂದು ಉತ್ತರ. ಆತ್ಮಹತ್ಯೆ ಮಾಡಿಕೊಳ್ಳುವ ರೈತ ಹೇಡಿ ಅವನು. ತನ್ನ ಹೆಂಡ್ತಿ, ಮಕ್ಕಳನ್ನ ಸಾಕಲು ಸಾಧ್ಯವಾಗದೇ ಆತ್ಮಹತ್ಯೆ ಮಾಡಿಕೊಳ್ಳುವವನು ಹೇಡಿ. ಹೀಗಾಗಿ ಯಾವ ರೈತ ಕೂಡ ಆತ್ಮಹತ್ಯೆ ಮಾಡಿಕೊಳ್ಳಬಾರ್ದು. ಇದಕ್ಕೆ ಆ ಹೆಣ್ಣು ಮಗಳೇ ಉದಾಹರಣೆ. ಒಬ್ಬ ಹೆಣ್ಣು ಮಗಳು ಈ ಸಾಧನೆ ಮಾಡೋದಾದ್ರೆ, ಉಳಿದವರು ಯಾಕೆ ಮಾಡಲ್ಲ?’ ಅಂತ ಬಿ.ಸಿ. ಪಾಟೀಲ್ ಹೇಳಿದ್ದಾರೆ. ಒಂದು ರೀತಿ ಇದು ವಿವಾದಾತ್ಮಕ ಹೇಳಿಕೆಯಾದ್ರೆ.. ಮತ್ತೊಂದುಕಡೆ ರೈತರು ಆತ್ಮಹತ್ಯೆ ಮಾಡಿಕೊಳ್ಳಬಾರ್ದು, ಗೆದ್ದು ತೋರಿಸಬೇಕು ಅಂತಾನೂ ಹೇಳಿದ್ದಾರೆ.
ಬಿ.ಸಿ. ಪಾಟೀಲ್ ಅವರ ಹೇಳಿಕೆಯನ್ನ ಪುತ್ರಿ ಸೃಷ್ಟಿ ಪಾಟೀಲ್ ಸಮರ್ಥಿಸಿಕೊಂಡಿದ್ದಾರೆ. ‘ಬಿ.ಸಿ. ಪಾಟೀಲ್ ಹೇಳಿರುವುದರಲ್ಲಿ ತಪ್ಪೇನಿದೆ. ಜೀವ ಮತ್ತು ಜೀವನ ಇರೋದೇ ಒಂದು. ಇದ್ದು ಜಯಿಸಬೇಕು ಹೊರತು ಆತ್ಮಹತ್ಯೆಯನ್ನು ಮಾಡಿಕೊಳ್ಳುವುದು ಸರಿ ಅಲ್ಲ. ಅದು ರೈತರಾಗಲಿ ಅಥವಾ ಬೇರೆ ಯಾರೇ ಆಗಲಿ ಆತ್ಮಹತ್ಯೆಗೆ ಶರಣಾದಾಗ ಅವರ ಹೆಂಡತಿ ಮಕ್ಕಳು ಹಾಗೂ ಸಂಬಂಧಿಕರ ಗತಿ ಏನು???’ ಅಂತ ಸೃಷ್ಟಿ ಪಾಟೀಲ್ ಟ್ವೀಟ್ ಮಾಡಿದ್ದಾರೆ.
ಆದ್ರೆ ಮಾಜಿ ಸಿಎಂ ಸಿದ್ದರಾಮಯ್ಯ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ, ‘ಬಿ.ಸಿ. ಪಾಟೀಲ್ ಆ ರೀತಿ ಹೇಳಿದ್ದು ತಪ್ಪು. ಜವಾಬ್ದಾರಿಯುತ ಸ್ಥಾನದಲ್ಲಿದ್ದುಕೊಂಡು ಹಾಗೆ ಹೇಳಬಾರದಿತ್ತು’ ಅಂತ ಸಿದ್ದರಾಮಯ್ಯ ಹೇಳಿದ್ದಾರೆ.
-masthmagaa.com
Contact Us for Advertisement