masthmagaa.com:
ಭಾರತ-ಚೀನಾ ನಡುವೆ ಪೂರ್ವ ಲಡಾಖ್ನಲ್ಲಿ ಸಂಘರ್ಷದ ವಾತಾವರಣ ನಿರ್ಮಾಣವಾಗಿರುವ ನಡುವೆಯೇ, ಚೀನಾವು ಭಾರತದ 1,200 ಚದರ ಕಿಲೋ ಮೀಟರ್ ಭೂಪ್ರದೇಶವನ್ನು ವಶಪಡಿಸಿಕೊಂಡಿದೆ ಅಂತ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ. ‘ಚೀನಾ ನಮ್ಮ ದೇಶದ 1,200 ಚದರ ಕಿಲೋ ಮೀಟರ್ನಷ್ಟು ಭೂಮಿಯನ್ನು ವಶಪಡಿಸಿಕೊಂಡಿದೆ. ಆದ್ರೆ ದೇಶದ ಜನರು ಈ ಬಗ್ಗೆ ಗಮನಹರಿಸಬಾರದು ಅಂತ ಪ್ರಧಾನಿ ಮೋದಿಯವರು ಇದರ ಬಗ್ಗೆ ಮಾತನಾಡುತ್ತಲೇ ಇಲ್ಲ. ಭಾರತ ಮಾತೆಯ ಭೂಪ್ರದೇಶದ ಬಗ್ಗೆ ಮಾತನಾಡಲು ಪ್ರಧಾನಿ ಬಳಿ ಶಬ್ದಗಳೇ ಇಲ್ಲ’ ಅಂತ ರಾಹುಲ್ ಗಾಂಧಿ ಹೇಳಿದ್ದಾರೆ. ದೇಶವನ್ನು ಉದ್ದೇಶಿಸಿ ಪ್ರಧಾನಿ ಮೋದಿ ನಿನ್ನೆ ಮಾತನಾಡಿದ ಬೆನ್ನಲ್ಲೇ ರಾಹುಲ್ ಗಾಂಧಿ ಈ ರೀತಿ ಹೇಳಿದ್ದಾರೆ.
ನಿನ್ನೆ ಕೂಡ ಪ್ರಧಾನಿ ವಿರುದ್ಧ ವಾಗ್ದಾಳಿ ನಡೆಸಿದ್ದ ರಾಹುಲ್ ಗಾಂಧಿ, ‘ಭಾರತದ ಭೂಪ್ರದೇಶವನ್ನು ಚೀನಾ ಯೋಧರು ಯಾವಾಗ ಬಿಟ್ಟು ಹೋಗುತ್ತಾರೆ ಅನ್ನೋದನ್ನು ನಾನು ಪ್ರಧಾನಿಗೆ ಕೇಳುತ್ತೇನೆ. ಚೀನಾ ಬಗ್ಗೆ ಮಾತನಾಡಲು ಪ್ರಧಾನಿಗೆ ಧೈರ್ಯವಿಲ್ಲ’ ಅಂತ ಹೇಳಿದ್ದರು.
ಮತ್ತೊಂದುಕಡೆ ಬಿಹಾರ ವಿಧಾನಸಭೆ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ ಯುಪಿ ಸಿಎಂ ಯೋಗಿ ಆದಿತ್ಯನಾಥ್, ‘ರಾಹುಲ್ ಗಾಂಧಿ ಮತ್ತು ಅಸಾದುದ್ದಿನ್ ಓವೈಸಿ ಇಬ್ಬರೂ ಕೂಡ ಪಾಕಿಸ್ತಾನವನ್ನು ಹೊಗಳುತ್ತಿದ್ದಾರೆ. ಇಂತಹವರಿಂದ ನೀವು ದೇಶದ ಹಿತವನ್ನು ನಿರೀಕ್ಷಿಸಲು ಸಾಧ್ಯವೇ? ದೇಶದ ಒಳಗೆ ಉಗ್ರ ಚಟುವಟಿಕೆಗಳನ್ನು ನಡೆಸುತ್ತಿರುವ ವೈರಿ ದೇಶದ ಬಗ್ಗೆ ಮಾತನಾಡುವ ವ್ಯಕ್ತಿಗಳಿಂದ ಏನನ್ನು ನಿರೀಕ್ಷಿಸುತ್ತೀರಿ?’ ಅಂತ ಹೇಳಿದ್ದಾರೆ.
-masthmagaa.com
Contact Us for Advertisement