ರಾಜ್ಯದಲ್ಲಿ ಕೊರೋನಾ ರಣಕೇಕೆ, 19 ಗಂಟೆಯಲ್ಲಿ 42 ಮಂದಿಗೆ ಸೋಂಕು..!

masthmagaa.com:

ರಾಜ್ಯದಲ್ಲಿ ನಿನ್ನೆ 14 ಪ್ರಕರಣಗಳು ದೃಢಪಟ್ಟು ಸ್ವಲ್ಪ ತಣ್ಣಗಾಗಿದ್ದ ಕೊರೋನಾ ಆರ್ಭಟ ಇವತ್ತು ಮತ್ತೆ ವೇಗ ಪಡೆದಿದೆ. ನಿನ್ನೆ ಸಂಜೆಯಿಂದ ಇವತ್ತು ಮಧ್ಯಾಹ್ನದವರೆಗೆ ರಾಜ್ಯದ 42 ಜನರಿಗೆ ಹೊಸದಾಗಿ ಸೋಂಕು ಹರಡಿದೆ ಅಂತ ರಾಜ್ಯ ಆರೋಗ್ಯ ಇಲಾಖೆ ಹೇಳಿದೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 904ಕ್ಕೆ ಏರಿಕೆಯಾಗಿದೆ.

ಆಘಾತಕಾರಿ ಅಂದ್ರೆ ಬಾಗಲಕೋಟೆ ಜಿಲ್ಲೆ ಒಂದರಲ್ಲೇ 15 ಜನರಿಗೆ ಸೋಂಕು ದೃಢಪಟ್ಟಿದೆ. ಈ ಪೈಕಿ 14 ಮಂದಿ ಗುಜರಾತ್​ನ ಅಹಮದಾಬಾದ್​  ನಂಟು ಹೊಂದಿದ್ದಾರೆ.

ಧಾರವಾಡ ಜಿಲ್ಲೆಯಲ್ಲಿ ಹೊಸದಾಗಿ 9 ಜನರಿಗೆ ಕಾಯಿಲೆ ಹರಡಿದ್ದು, ಎಲ್ಲರೂ ಅಹಮದಾಬಾದ್​ನಿಂದ ಬಂದವರಾಗಿದ್ದಾರೆ.

ಹಾಸನ ಜಿಲ್ಲೆಯಲ್ಲಿ 5 ಜನರಿಗೆ ಕಾಯಿಲೆ ಹರಡಿದ್ದು, ವೈಟ್ ಜೋನ್​ನಲ್ಲಿದ್ದ ಹಾಸನ ಜಿಲ್ಲೆ ಈಗ ಗ್ರೀನ್​ ಜೋನ್​ಗೆ ಹೋಗಿದೆ. ಐವರು ಕೂಡ ಮಹಾರಾಷ್ಟ್ರದ ಮುಂಬೈನಿಂದ ಬಂದವರಾಗಿದ್ದಾರೆ.

ಬೆಂಗಳೂರು ನಗರದಲ್ಲಿ ಹೊಸದಾಗಿ ಮೂವರಿಗೆ ಸೋಂಕು ತಗುಲಿದೆ. ಎಲ್ಲರೂ ರೋಗಿ ನಂಬರ್ 454ರ (23 ವರ್ಷದ ಯುವಕನ) ಸಂಪರ್ಕಕ್ಕೆ ಬಂದವರಾಗಿದ್ದಾರೆ.

ದಕ್ಷಿಣ ಕನ್ನಡದಲ್ಲಿ ಇಬ್ಬರಿಗೆ ಹೊಸದಾಗಿ ಕಾಯಿಲೆ ದೃಢಪಟ್ಟಿದೆ. ಇಬ್ಬರು ಕೂಡ ರೋಗಿ ನಂಬರ್ 507ರ (80 ವರ್ಷದ ವೃದ್ಧೆಯ) ಸಂಪರ್ಕಕ್ಕೆ ಬಂದವರಾಗಿದ್ದಾರೆ.

ಗಡಿ ಜಿಲ್ಲೆ ಯಾದಗಿರಿಗೂ ಮಹಾಮಾರಿ ಕಾಲಿಟ್ಟಿದ್ದು ಜಿಲ್ಲೆಯ ಇಬ್ಬರಿಗೆ ಸೋಂಕು ತಗುಲಿದೆ. ಈ ಮೂಲಕ ರಾಜ್ಯದಲ್ಲಿ ಸೋಂಕು ಪತ್ತೆಯಾದ 24ನೇ ಜಿಲ್ಲೆಯಾಗಿದೆ ಯಾದಗಿರಿ. ಈ ಮೂಲಕ ವೈಟ್​ ಜೋನ್​ನಲ್ಲಿದ್ದ ಯಾದಗಿರಿ ಈಗ ಗ್ರೀನ್​ ಜೋನ್​ಗೆ ಬಂದಿದೆ.

ಬೀದರ್​ನಲ್ಲಿ ಇಬ್ಬರಿಗೆ ಕೊರೋನಾ ಸೋಂಕು ದೃಢಪಟ್ಟಿದ್ದು, ಇಬ್ಬರೂ ಕೂಡ ಕಂಟೈನ್​ಮೆಂಟ್​ ಜೋನ್​ ಸಂಪರ್ಕ ಹೊಂದಿದ್ದಾರೆ.

ಉಳಿದಂತೆ ಬಳ್ಳಾರಿ, ಚಿಕ್ಕಬಳ್ಳಾಪುರ, ಕಲಬುರಗಿ ಮತ್ತು ಮಂಡ್ಯದಲ್ಲಿ ತಲಾ ಒಂದೊಂದು ಪ್ರಕರಣ ಪತ್ತೆಯಾಗಿದೆ.

ರಾಜ್ಯದಲ್ಲಿ ಇದುವರೆಗೆ 31 ಮಂದಿ ಪ್ರಾಣ ಕಳೆದುಕೊಂಡಿದ್ದು, 426 ಜನ ಇದುವರೆಗೆ ಗುಣಮುಖರಾಗಿದ್ದಾರೆ. ಸದ್ಯ ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ 447 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.

-masthmagaa.com

Contact Us for Advertisement

Leave a Reply