masthmagaa.com:
ಕಳೆದ 6 ತಿಂಗಳಿನಿಂದ ಪೂರ್ವ ಲಡಾಖ್ ಭಾಗದಲ್ಲಿ ಭಾರತ ಮತ್ತು ಚೀನಾ ನಡುವೆ ನಡೆಯುತ್ತಿರುವ ಗಡಿ ಸಂಘರ್ಷಕ್ಕೆ ಕೊನೆಗೂ ಅಂತ್ಯಗೊಳ್ಳುವ ಲಕ್ಷಣ ಕಾಣ್ತಿದೆ. 8ನೇ ಸುತ್ತಿನ ಕಾರ್ಪ್ಸ್ ಕಮಾಂಡರ್ ಮಟ್ಟದ ಮಾತುಕತೆ ವೇಳೆ ಎರಡೂ ದೇಶಗಳು ವಾಸ್ತವ ನಿಯಂತ್ರಣ ರೇಖೆಯಿಂದ ತಮ್ಮ ತಮ್ಮ ಸೇನೆಯನ್ನು ಹಿಂದಕ್ಕೆ ಕರೆಸಿಕೊಳ್ಳಲು ಒಪ್ಪಿವೆ ಅಂತ ಸೇನಾ ಮೂಲಗಳು ತಿಳಿಸಿವೆ. ನವೆಂಬರ್ 6ನೇ ತಾರೀಖು ಚುಶುಲ್ ಪ್ರದೇಶದಲ್ಲಿ ನಡೆದ ಮಾತುಕತೆ ವೇಳೆ ಈ ನಿರ್ಧಾರಕ್ಕೆ ಬರಲಾಗಿದೆ.
‘ಮುಂದಿನ ಕೆಲ ದಿನಗಳಲ್ಲಿ ಎರಡೂ ದೇಶದ ಸೇನೆಗಳು ಘರ್ಷಣೆ ನಡೆಯುತ್ತಿದ್ದ ಕೆಲವೊಂದು ಪ್ರದೇಶಗಳಿಂದ ಹಂತ ಹಂತವಾಗಿ ಹಿಂದಕ್ಕೆ ಬರಲಿವೆ. ಆದರೂ ಈ ಸಂಬಂಧ ಚರ್ಚೆ ಮತ್ತು ಒಪ್ಪಂದಗಳನ್ನ ಮಾಡಿಕೊಳ್ಳಲು ಭಾರತ ಬಯಸುತ್ತಿದೆ. ಹೀಗಾಗಿ ಈ ವಿಚಾರದಲ್ಲಿ ಭಾರತವು ಜಾಗರೂಕತೆಯಿಂದ ಮುಂದುವರಿಯುತ್ತಿದೆ’ ಅಂತ ಮೂಲಗಳು ತಿಳಿಸಿವೆ. ಜೊತೆಗೆ ಯುದ್ಧ ಟ್ಯಾಂಕ್ಗಳು ಮತ್ತು ಶಸ್ತ್ರಸಜ್ಜಿತ ವಾಹನಗಳನ್ನು ಈಗಿರುವ ಸ್ಥಳದಿಂದ ಸ್ವಲ್ಪ ಹಿಂದಕ್ಕೆ ಕರೆಸಿಕೊಳ್ಳುವ ಬಗ್ಗೆಯೂ ಚರ್ಚೆ ನಡೆಯುತ್ತಿದ್ದು, ಮುಂದಿನ ಕೆಲ ದಿನಗಳಲ್ಲಿ ಅದು ಸಾಧ್ಯವಾಗಬಹುದು ಅಂತಾನೂ ಹೇಳಲಾಗ್ತಿದೆ.
ಭಾರತ-ಚೀನಾ ಯೋಧರು ಗಾಲ್ವಾನ್ ಕಣಿವೆಯಲ್ಲಿ ಕಲ್ಲು, ದೊಣ್ಣೆಗಳಿಂದ ಹೊಡೆದಾಡಿಕೊಂಡ ಬಳಿಕ ಎರಡೂ ದೇಶಗಳ ನಡುವೆ ಯುದ್ಧದಂತಹ ಸನ್ನಿವೇಶ ಸೃಷ್ಟಿಯಾಗಿತ್ತು. ನಂತರ ಎರಡೂ ದೇಶಗಳ ನಡುವೆ ರಾಜತಾಂತ್ರಿಕ ಮತ್ತು ಸೇನಾ ಮಟ್ಟದಲ್ಲಿ ಮಾತುಕತೆ ನಡೆದಿತ್ತು. ಆದ್ರೆ ಇದುವರೆಗೆ ನಡೆದ ಯಾವ ಮಾತುಕತೆಯಲ್ಲೂ ಸಕಾರಾತ್ಮಕ ಫಲಿತಾಂಶ ಹೊರಬಿದ್ದಿರಲಿಲ್ಲ. ಈ ಬಾರಿ ನಡೆದ 8ನೇ ಕಾರ್ಪ್ಸ್ ಕಮಾಂಡರ್ ಮಾತುಕತೆಯಲ್ಲಿ ಅದು ಸಾಧ್ಯವಾಗುವ ನಿರೀಕ್ಷೆ ಇದೆ.
-masthmagaa.com
Contact Us for Advertisement