masthmagaa.com:
ಗುಜರಾತ್: ದೇಶದಲ್ಲಿ ಲಾಕ್ಡೌನ್ ಇದ್ದು, ಜನ ಒಂದು ಕಡೆಯಿಂದ ಮತ್ತೊಂದು ಕಡೆಗೆ ಹೋಗೋಕೆ ಪರದಾಡ್ತಿದ್ದಾರೆ. ಈ ನಡುವೆ ಮಹಾರಾಷ್ಟ್ರದಲ್ಲಿ ಸಿಲುಕಿದ್ದ ಗುಜರಾತ್ ಮೂಲದ ವ್ಯಕ್ತಿ ತನ್ನ ರಾಜ್ಯಕ್ಕೆ ತೆರಳಲು ವ್ಯಾಪಾರಿಯಾಗಿ ಬದಲಾಗಿದ್ದಾರೆ. ಪ್ರೇಮ್ ಮೂರ್ತಿ ಪಾಂಡೆ ಎಂಬುವವರು ಮುಂಬೈ ಏರ್ಪೋರ್ಟ್ನಲ್ಲಿ ಕೆಲಸ ಮಾಡುತ್ತಿದ್ದರು. ಮೊದಲು ಲಾಕ್ಡೌನ್ ಹೇರಿದಾಗ ಮುಂಬೈನಲ್ಲೇ ಕಾಲ ಕಳೆದರು. ಆದ್ರೆ ನಂತರದಲ್ಲಿ ಲಾಕ್ಡೌನ್ ವಿಸ್ತರಣೆಯಾದಾಗ ಗುಜರಾತ್ಗೆ ತೆರಳಲು ಪ್ಲಾನ್ ಮಾಡಿದ್ರು.
ಹಣ್ಣು, ತರಕಾರಿಗಳ ವಾಹನಕ್ಕೆ ಅವಕಾಶವಿದೆ ಎಂಬುದನ್ನು ಅರಿತ ಪ್ರೇಮ್ ಮೂರ್ತಿ ಒಂದು ಪ್ಲಾನ್ ಮಾಡಿದ್ರು. ಮೊದಲಿಗೆ ಮುಂಬೈನ ನಾಸಿಕ್ನಲ್ಲಿ ಒಂದು ವಾಹನವನ್ನು ಬಾಡಿಗೆಗೆ ಪಡೆದು 200 ಕಿ.ಮೀ. ದೂರದ ಪಿಂಪಲ್ಗಾಂವ್ಗೆ ತೆರಳಿದ್ದಾರೆ. ನಂತರ ಅಲ್ಲಿ 10 ಸಾವಿರ ರೂಪಾಯಿಗೆ ಕಲ್ಲಂಗಡಿ ಹಣ್ಣು ಖರೀದಿಸಿ, ಗಾಡಿಗೆ ಲೋಡ್ ಮಾಡಿ, ಮುಂಬೈಗೆ ಕಳುಹಿಸಿದ್ದಾರೆ. ಮುಂಬೈನಲ್ಲಿ ವ್ಯಾಪಾರಿಯೊಬ್ಬರ ಜೊತೆ ಪ್ರೇಮ್ ಮೂರ್ತಿ ಮೊದಲೇ ಮಾತುಕತೆ ನಡೆಸಿದ್ದರು. ಹೀಗಾಗಿ ಲೋಡ್ ಗಾಡಿ ಮಾತ್ರವೇ ಕಳುಹಿಸಿ, ತಾವು ಪಿಂಪಲ್ಗಾಂವ್ನಲ್ಲೇ ಉಳಿದುಕೊಂಡ್ರು.
ನಂತರ ಪಿಂಪಲ್ಗಾಂವ್ನಲ್ಲಿ ಈರುಳ್ಳಿ ಕಡಿಮೆ ದರಕ್ಕೆ ಸಿಗುತ್ತೆ ಎಂಬುದನ್ನು ತಿಳಿದ ಪ್ರೇಮ್ ಮೂರ್ತಿ 9 ರೂ. 10 ಪೈಸೆ ಪ್ರತಿ ಕೆ.ಜಿಯಂತೆ 2.32 ಲಕ್ಷ ರೂಪಾಯಿ ನೀಡಿ, 25,520 ಕೆ.ಜಿ ಈರುಳ್ಳಿ ಖರೀದಿಸಿದ್ದಾರೆ. ನಂತರ ಏಪ್ರಿಲ್ 20ರಂದು 77,500 ರೂಪಾಯಿ ನೀಡಿ ಟ್ರಕ್ ಒಂದನ್ನು ಬಾಡಿಗೆಗೆ ಪಡೆದು 1,200 ಕಿಲೋಮೀಟರ್ ದೂರದ ಗುಜರಾತ್ನ ಅಹ್ಮದಾಬಾದ್ಗೆ ಹೊರಟಿದ್ದಾರೆ.
ಏಪ್ರಿಲ್ 23ರಂದು ಮುಂಡೇರಾದ ಮಾರುಕಟ್ಟೆ ತಲುಪಿದ ಪ್ರೇಮ್ಮೂರ್ತಿಗೆ ಅಷ್ಟೊಂದು ಕ್ಯಾಶ್ ಕೊಟ್ಟು ಲೋಡು ಖರೀದಿಸುವವರು ಸಿಗಲೇ ಇಲ್ಲ. ಹೀಗಾಗಿ ತಮ್ಮ ಗ್ರಾಮ ಕೊಟ್ವಾ ಮುಬಾರ್ಕ್ಪುರ್ಗೆ ಸಾಗಿಸಿ, ಅಲ್ಲಿ ಅನ್ಲೋಡ್ ಮಾಡಿಸಿದ್ದಾರೆ. ನಂತರ ಪೊಲೀಸರ ಬಳಿ ತೆರಳಿದ ಪ್ರೇಮ್ ಮೂರ್ತಿ ಎಲ್ಲಾ ವಿಷಯ ತಿಳಿಸಿದ್ದಾರೆ. ನಂತರ ವೈದ್ಯಾಧಿಕಾರಿಗಳು ಪ್ರೇಮ್ ಮೂರ್ತಿ ತಪಾಸಣೆ ನಡೆಸಿದ್ದು, ಸದ್ಯ ಹೋಮ್ ಕ್ವಾರಂಟೈನ್ನಲ್ಲಿದ್ದಾರೆ. ಅಲ್ಲದೆ ಈರುಳ್ಳಿಗೂ ಸೂಕ್ತ ವ್ಯಾಪಾರಿಗಳ ಹುಡುಕಾಟ ನಡೆಯುತ್ತಲೇ ಇದೆ.
-masthmagaa.com
Contact Us for Advertisement