masthmagaa.com:
ದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಮಂಗಳವಾರ ದೇಶವನ್ನು ಉದ್ದೇಶಿಸಿ ಮಾತನಾಡುವ ಸಾಧ್ಯತೆ ಇದೆ. ಮಂಗಳವಾರ ಲಾಕ್ಡೌನ್ ಮುಗಿಯಲಿದ್ದು, ಮುಂದಿನ ನಡೆ ಬಗ್ಗೆ ಪ್ರಧಾನಿ ಮೋದಿ ಘೋಷಣೆ ಮಾಡಲಿದ್ದಾರೆ. ಅದಕ್ಕೂ ಮುನ್ನ ದೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಇದಕ್ಕೂ ಮುನ್ನ ನಾಳೆ ಎಲ್ಲಾ ರಾಜ್ಯಗಳ ಸಿಎಂಗಳ ಜೊತೆ ಸಭೆ ನಡೆಸಲಿದ್ದಾರೆ.
ಸರ್ಕಾರಿ ಮೂಲಗಳ ಪ್ರಕಾರ ಲಾಕ್ಡೌನ್ ಮುಂದುವರಿಯುವ ಸಾಧ್ಯತೆಯೇ ಹೆಚ್ಚಾಗಿದ್ದು, ಕೆಲವೊಂದು ಬದಲಾವಣೆಗಳು ಇರಲಿವೆ. ರಾಜ್ಯಗಳಲ್ಲಿ ಈಗಿನಂತೆಯೇ ನಿರ್ಬಂಧ ಮುಂದುವರಿಯಲಿವೆ. ಅಗತ್ಯ ಸೇವೆಗಳನ್ನು ಹೊರತುಪಡಿಸಿ, ಶಾಲೆ, ಕಾಲೇಜು ಮತ್ತು ಧಾರ್ಮಿಕ ಸಂಸ್ಥೆಗಳು ಈಗಿರುವಂತೆಯೇ ಬಂದ್ ಆಗಿರಲಿವೆ.
ಆರ್ಥಿಕ ಪರಿಸ್ಥಿತಿ ಗಮನದಲ್ಲಿಟ್ಟುಕೊಂಡು ಕೆಲವೊಂದು ವಲಯಕ್ಕೆ ವಿನಾಯಿತಿ ನೀಡುವ ಸಾಧ್ಯತೆ ಇದೆ. ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಕಾರ್ಯ ನಿರ್ವಹಿಸಲು ಕೇಂದ್ರ ಸರ್ಕಾರ ಅವಕಾಶ ನೀಡಲಿದೆ ಅಂತ ಮೂಲಗಳು ತಿಳಿಸಿವೆ.
ಲಾಕ್ಡೌನ್ನಿಂದಾಗಿ ವಿಮಾನಯಾನ ಕ್ಷೇತ್ರವು ಹೆಚ್ಚು ಹಾನಿಗೊಳಗಾಗಿದೆ. ಹೀಗಾಗಿ ಕಾರ್ಯಾಚರಣೆ ಪುನರಾರಂಭಿಸಲು ವಿಮಾನಯಾನ ಸಂಸ್ಥೆಗಳಿಗೆ ಕ್ರಮೇಣ ಅವಕಾಶ ನೀಡಬಹುದು. ಆದ್ರೆ ಎಲ್ಲಾ ವರ್ಗಗಳಲ್ಲಿ ಮಧ್ಯದ ಆಸನವನ್ನು ಖಾಲಿ ಇಡುವಂತೆ ಸೂಚಿಸಲಾಗುತ್ತೆ ಅಂತ ಹೇಳಲಾಗುತ್ತಿದೆ.
ದೇಶದ 600 ಜಿಲ್ಲೆಗಳ ಪೈಕಿ 75 ಜಿಲ್ಲೆಗಳಲ್ಲಿ ಕೊರೋನಾ ಹಾವಳಿ ತುಂಬಾ ತೀವ್ರವಾಗಿದೆ ಅನ್ನೋ ಮಾಹಿತಿ ಕೂಡ ಲಭ್ಯವಾಗಿದೆ.
-masthmagaa.com
Contact Us for Advertisement