masthmagaa.com:
ಬಂಗಾಳ ಕೊಲ್ಲಿಯಲ್ಲಿ ಎದ್ದಿರುವ ‘ಬುರೇವಿ’ ಚಂಡಮಾರುತದಿಂದಾಗಿ ತಮಿಳುನಾಡು ಮತ್ತು ಕೇರಳದಲ್ಲಿ ಭಾರತೀಯ ಹವಾಮಾನ ಇಲಾಖೆ ಹೈ ಅಲರ್ಟ್ ಘೋಷಿಸಿದೆ. ಸದ್ಯ ಈ ಚಂಡಮಾರುತದ ಕೇಂದ್ರಬಿಂದು ಶ್ರೀಲಂಕಾದ ಟ್ರಿನ್ಕೊಮಾಲೀಯಿಂದ 240 ಕಿ.ಮೀ. ದೂರದಲ್ಲಿದ್ದು, ತಮಿಳುನಾಡಿನ ಪಂಬನ್ನಿಂದ 470 ಕಿ.ಮೀ. ಮತ್ತು ಕನ್ಯಾಕುಮಾರಿಯಿಂದ 650 ಕಿ.ಮೀ. ದೂರದಲ್ಲಿದೆ.
ಈ ಚಂಡಮಾರುತವು ಡಿಸೆಂಬರ್ 3ರ ಮಧ್ಯಾಹ್ನ 70-80 ಕಿ.ಮೀ. ವೇಗದಲ್ಲಿ ಪಂಬನ್ಗೆ ಸಮೀಪಿಸಲಿದೆ. ಬಳಿಕ ದಕ್ಷಿಣ-ಪಶ್ಚಿಮದ ಕಡೆಗೆ ತಿರುಗಿ ಡಿಸೆಂಬರ್ 4ರಂದು ತಮಿಳುನಾಡು ಕರಾವಳಿಯನ್ನ ದಾಟಿ ಹೋಗಲಿದೆ ಅಂತ ಹವಾಮಾನ ಇಲಾಖೆ ತಿಳಿಸಿದೆ. ಹೀಗಾಗಿ ತಮಿಳುನಾಡಿನ ಕನ್ಯಾಕುಮಾರಿ, ತಿರುನೆಲ್ವೇಲಿ, ತೂತುಕುಡಿ, ರಾಮನಾಥಪುರಂ, ಸಿವಗಂಗೈ ಮತ್ತು ಕೇರಳದ ತಿರುವನಂತಪುರಂ, ಕೊಲ್ಲಂ, ಪತ್ತನಂತಿಟ್ಟ, ಅಳಪ್ಪುಜ್ಹದಲ್ಲಿ ಡಿಸೆಂಬರ್ 2ರಿಂದ 4ರವರೆಗೆ ಭಾರಿ ಮಳೆಯಾಗಲಿದೆ. ಹಲವೆಡೆ ರೆಡ್, ಆರೆಂಜ್ ಮತ್ತು ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಉಳಿದಂತೆ ಆಂಧ್ರದ ಕರಾವಳಿ ಭಾಗ ಮತ್ತು ಲಕ್ಷದ್ವೀಪದಲ್ಲೂ ಮಳೆಯಾಗುವ ಸಾಧ್ಯತೆ ಇದೆ.
ಇನ್ನು ಕರ್ನಾಟಕದ ವಿಚಾರಕ್ಕೆ ಬಂದ್ರೆ, ರಾಜ್ಯದಲ್ಲಿ ಮುಂದಿನ 24 ಗಂಟೆಗಳಲ್ಲಿ ಯಾವುದೇ ಮಳೆ ಮುನ್ಸೂಚನೆ ಇಲ್ಲ. ಆದ್ರೆ ಮುಂದಿನ 48 ಗಂಟೆಗಳಲ್ಲಿ ದಕ್ಷಿಣ ಒಳನಾಡಿನ ಒಂದೆರಡು ಕಡೆಗಳಲ್ಲಿ ಮಳೆಯಾಗುವ ಬಹಳಷ್ಟು ಸಾಧ್ಯತೆ ಇದೆ. ಕರಾವಳಿ ಮತ್ತು ಉತ್ತರ ಒಳನಾಡಿನಲ್ಲಿ ಒಣಹವೆ ಮುಂದುವರಿಯಲಿದೆ ಅಂತ ರಾಜ್ಯ ಹವಾಮಾನ ಇಲಾಖೆ ತಿಳಿಸಿದೆ. ಹವಾಮಾನ ಇಲಾಖೆ ಇಂದು ಬಿಡುಗಡೆ ಮಾಡಿರುವ ಉಪಗ್ರಹ ಚಿತ್ರ ಇಲ್ಲಿದೆ ನೋಡಿ..
-masthmagaa.com
Contact Us for Advertisement