masthmagaa.com:
ಬೆಂಗಳೂರು: ಸ್ಯಾಂಡಲ್ವುಡ್ನಲ್ಲಿ ಡ್ರಗ್ ಮಾಫಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ನಟಿ ರಾಗಿಣಿ ದ್ವಿವೇದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಚಾಮರಾಜಪೇಟೆಯ ಸಿಸಿಬಿ ಕಚೇರಿಯಲ್ಲಿ ಇನ್ಸ್ಪೆಕ್ಟರ್ ಅಂಜುಮಾಲಾ ನಾಯಕ್, ಡಿಸಿಪಿ ರವಿಕುಮಾರ್ ಮತ್ತು ಎಸಿಪಿ ಗೌತಮ್ ಎಂಬುವವರು ರಾಗಿಣಿಯನ್ನು ವಿಚಾರಣೆಗೆ ಒಳಪಡಿಸಿದ್ದಾರೆ.
ಇದಕ್ಕೂ ಮೊದಲು ಬೆಳಗ್ಗೆ 6.30ರ ಸುಮಾರಿಗೆ ಬೆಂಗಳೂರಿನ ಯಲಹಂಕದಲ್ಲಿರುವ ರಾಗಿಣಿ ದ್ವಿವೇದಿ ಅವರ ಮನೆ ಮೇಲೆ ಸಿಸಿಬಿ ಪೊಲೀಸರು ದಿಢೀರ್ ದಾಳಿ ನಡೆಸಿದರು. ಮನೆಯಲ್ಲಿ ನಾಲ್ಕೈದು ಗಂಟೆಗಳ ಕಾಲ ಶೋಧ ಕಾರ್ಯ ನಡೆಸಿದ ಬಳಿಕ ಹೆಚ್ಚಿನ ವಿಚಾರಣೆಗಾಗಿ ನಟಿಯನ್ನು ಸಿಸಿಬಿ ಕಚೇರಿಗೆ ಕರೆತರಲಾಯ್ತು.
ಅಂದ್ಹಾಗೆ ಡ್ರಗ್ ಮಾಫಿಯಾಗೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ಸಿಸಿಬಿ ಪೊಲೀಸರು ಸೆಪ್ಟೆಂಬರ್ 2ರಂದು ರಾಗಿಣಿಗೆ ನೋಟಿಸ್ ನೀಡಿದ್ದರು. ಆದ್ರೆ ಅವರು ವಿಚಾರಣೆಗೆ ಹಾಜರಾಗಿರಲಿಲ್ಲ. ಬದಲಾಗಿ ತಮ್ಮ ವಕೀಲರನ್ನು ಕಳಿಸಿ ವಿಚಾರಣೆಗೆ ಹಾಜರಾಗಲು ಕಾಲಾವಕಾಶ ಕೇಳಿದ್ದರು. ಜೊತೆಗೆ ಸೆಪ್ಟೆಂಬರ್ 7ರಂದು ವಿಚಾರಣೆಗೆ ಹಾಜರಾಗುತ್ತೇನೆ ಅಂತ ಟ್ವೀಟ್ ಮಾಡಿ ತಿಳಿಸಿದ್ದರು.
ಇನ್ನು ಸಿಸಿಬಿ ಪೊಲೀಸರಿಂದ ಬಂಧಿತನಾಗಿರುವ ಸಾರಿಗೆ ಇಲಾಖೆ ನೌಕರ ರವಿಶಂಕರ್ ಮತ್ತು ನಟಿ ರಾಗಿಣಿ ದ್ವಿವೇದಿ ನಡುವೆ ನಿಕಟ ಸಂಪರ್ಕ ಇದೆ ಅನ್ನೋ ವಿಚಾರ ಕೂಡ ಬೆಳಕಿಗೆ ಬಂದಿದೆ. ಅಲ್ಲದೆ ರವಿಶಂಕರ್ ಸಂಪರ್ಕದಲ್ಲಿದ್ದ ನಟಿ ಸಂಜನಾ ಗಲ್ರಾನಿ ಸ್ನೇಹಿತ ರಾಹುಲ್ ಮತ್ತು ನಟಿ ಶರ್ಮಿಳಾ ಮಾಂಡ್ರೆ ಸ್ನೇಹಿತ ಕಾರ್ತಿಕ್ ಈಗಾಗಲೇ ವಿಚಾರಣೆಗೆ ಒಳಪಟ್ಟಿದ್ದಾರೆ.
ಪಬ್ ಹೋಟೆಲ್ಗಳಲ್ಲಿ ಪಾರ್ಟಿ ಆಯೋಜನೆ ಮಾಡುವಲ್ಲಿ ರವಿಶಂಕರ್, ರಾಹುಲ್ ಮತ್ತು ಕಾರ್ತಿಕ್ ಪಾತ್ರವಹಿಸಿದ್ದರು. ಈ ಪಾರ್ಟಿಗಳಿಗೆ ಡ್ರಗ್ಸ್ ಪೂರೈಕೆಯಾಗ್ತಿತ್ತು ಅನ್ನೋ ವಿಚಾರ ಕೂಡ ಸಿಸಿಬಿ ವಿಚಾರಣೆ ವೇಳೆ ಬಹಿರಂಗವಾಗಿದೆ. ಹೀಗಾಗಿ ಸಂಜನಾ ಗಲ್ರಾನಿ ಮತ್ತು ಶರ್ಮಿಳಾ ಮಾಂಡ್ರೆಗೂ ಸಿಸಿಬಿ ಪೊಲೀಸರು ನೋಟಿಸ್ ನೀಡುವ ಸಾಧ್ಯತೆ ಇದೆ ಎನ್ನಲಾಗ್ತಿದೆ.
-masthmagaa.com
Contact Us for Advertisement